Karnataka Sanga Shivamogga ಅಕ್ಟೋಬರ್ 8 ರಂದು ಪ್ರತಿಷ್ಠಿತ ಕರ್ನಾಟಕ ಸಂಘ ಶಿವಮೊಗ್ಗದಲ್ಲೊಂದು ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದು ವಿಶಿಷ್ಟ ಏಕೆ ಅಂದರೆ, ಹಾಡಲಿರುವ ಅನಿತಾ ಹೆಗಡೆ ಕೇವಲ ಹಿಂದುಸ್ಥಾನಿ ಮಾತ್ರವಲ್ಲ, ಕನ್ನಡ ಭಾವಗೀತೆ, ಟುಮರಿ, ಭಜನ್, ದಾಸರಪದ, ವಚನಗಳು ಮತ್ತು ಜಾನಪದ ಗೀತೆಗಳನ್ನೂ ಸುಶ್ರಾವ್ಯವಾಗಿ ಹಾಡಬಲ್ಲರು. ಬಹು ಮುಖ ಪ್ರತಿಭೆಯಾದ ಇವರ ಕೋಮಲ ಕಂಠದಿಂದ ಸಂಗೀತ ಕೇಳುವ ಅವಕಾಶ ನಮಗೆ ದೊರೆತಿರುವುದು ಸಂತಸವಲ್ಲದೆ ಮತ್ತೇನು? ಅವರ ಮತ್ತು ಪಕ್ಕವಾದ್ಯದವರು ಈ ಕಾರ್ಯಕ್ರಮದಲ್ಲಿ ಇರಲಿದ್ದಾರೆ.
Karnataka Sanga Shivamogga ಶ್ರೀಮತಿ ಅನಿತಾ ಹೆಗಡೆಮೂಲತಃ ಶಿರಸಿಯವರು. ಕಳೆದ 25 ವರ್ಷಗಳಿಂದ ಸಂಗೀತವನ್ನು ಅತ್ಯಂತ ಶ್ರದ್ಧೆ ಮತ್ತು ಪ್ರೀತಿಯಿಂದ ಕಲಿಯುತ್ತಿದ್ದಾರೆ. ಇವರ ವಿದ್ಯಾಗುರುಗಳು ವಿದುಷಿ ಗೀತಾ ಹೆಗಡೆ ಮತ್ತು ವಿದುಷಿ ಪೂರ್ಣಿಮಾ ಭಟ್ ಕುಲಕರ್ಣಿ. ಇದರ ಜೊತೆಗೆ ವಿದುಷಿ ಅನಿತಾ ಹೆಗಡೆಯವರು ಅರೆ ಶಾಸ್ತ್ರೀಯ ಸಂಗೀತವಾದ ಟುಮರಿ, ದಾದ್ರಾ, ಹೋರಿ, ಭಜನ್ ಮತ್ತು ಸುಗಮ ಸಂಗೀತವನ್ನೂ ಕಲಿತಿರುವ ಬಹುಭಾಷಾ ಸಂಗೀತಕಾರರು.
ಉತ್ತಮ ಗಾಯಕಿ ಎಂದು ಹೆಸರು ಪಡೆದಿರುವ ಅನಿತಾ ಅವರು ಬೆಂಗಳೂರಿನ ಆಕಾಶವಾಣ ಯ ‘ಬಿ – ಗ್ರೇಡ್’ ಕಲಾವಿದರಾಗಿ ಮಾನ್ಯತೆ ಹೊಂದಿದ್ದಾರೆ. ನಾಡಿನ ಹಲವಾರು ಕಡೆ ಅವರ ಕಾರ್ಯಕ್ರಮಗಳನ್ನು ನೀಡಿ ಮೆಚ್ಚುಗೆ ಗಳಿಸಿದ್ದಾರೆ.
ಗೋವಾ ಸಂಗೀತೋತ್ಸವ, ಇಸ್ಕಾನ್ ದೇವಾಲಯ, ಸಿರಸಿ ಮಾರಿಕಾಂಬ ದೇವರ ಸನ್ನಿಧಿ, ಆಕಾಶವಾಣ ಮುಂತಾದೆಡೆ ಹಲವಾರು ಸಂಗೀತ ಕಾರ್ಯಕ್ರಮಗಳನ್ನು ನೀಡಿದ ಹೆಗ್ಗಳಿಕೆ ಅವರದ್ದು.
ಪಕ್ಕವಾದ್ಯದಲ್ಲಿ:
ವಿದ್ವಾನ್ ಎಂ.ಪ್ರಕಾಶ್ ಹೆಗಡೆ ಯಾದಳ್ಳಿ
ಶ್ರೀಯುತರು ಮಲೆನಾಡಿನ ಒಂದು ಹಳ್ಳಿ ಯಾದಳ್ಳಿಯಲ್ಲಿ ಜನಿಸಿದವರು. ತಮ್ಮ 15 ನೇ ವಯಸ್ಸಿಗೆ ಉಡುಪಿಯಲ್ಲಿ ಸಂಸ್ಕೃತ ಕಲಿತಿದ್ದಲ್ಲದೆ ಬಿ.ಎ.ಪದವಿ ಸಹ ಪಡೆದರು. ಅಲ್ಲಿಯೇ ‘ಮುಕುಂದ ಕೃಪ ಅಕಾಡೆಮಿ’ಗೆ ಸೇರಿ ಮಹಾಬಲೇಶ್ವರ ಭಾಗವತ್ ಅವರಿಂದ ಹಿಂದೂಸ್ತಾನಿ ಸಂಗೀತ ಕಲಿತರು. ನಂತರ ಸಿರಸಿಯಲ್ಲಿ ಪಂಡಿತ್ ಎಂ.ಪ.ಹೆಗಡೆಯವರಲ್ಲಿ ಹಿಂದುಸ್ಥಾನಿ ಸಂಗೀತದ ಕಲಿಕೆಯನ್ನು ಮುಂದುವರೆಸಿದರು. ಪಂಡಿತ್ ಶೇಷಾದ್ರಿ ಗವಾಯಿಗಳಿಂದ 2 ವರ್ಷ ಹಾರ್ಮೋನಿಯಂ ಸಹ ಕಲಿತು ಪರಿಣಿತರಾಗಿದ್ದಾರೆ.
ನಂತರ ಧಾರವಾಡದ ಪಂಡಿತ್ ವಸಂತ್ ಕನಕಾಪುರ ಅವರಿಂದ 14 ವರ್ಷ ಹಾರ್ಮೋನಿಯಂ ಕಲಿತು ಸರ್ವೋತ್ತಮ ಕಲಾವಿದರಾಗಿದ್ದಾರೆ.
ಮೇಲ್ಕಂಡ ವಿಶಿಷ್ಟ ಕಾರ್ಯಕ್ರಮ ಇದೇ ದಿನಾಂಕ 08.10.2023 ರಂದು ಸಂಜೆ 5:30ಕ್ಕೆ ಕರ್ನಾಟಕ ಸಂಘ ಭವನದಲ್ಲಿ ನಡೆಯಲಿದೆ.
ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಈ ಸಂಗೀತ ಕಾರ್ಯಕ್ರಮವನ್ನು ಆಲಿಸಬೇಕಾಗಿ ಸವಿನಯ ಪ್ರಾರ್ಥನೆ.
ಪ್ರಕಾಶ್ ಗೋವಿಂದ್ ದೇಶಪಾಂಡೆ
ಗಂಗೂಬಾಯಿ ಹಾನಗಲ್ ಅವರ ಸಹೋದರ ವಿದ್ವಾನ್ ವಿಶ್ವ ವಿಖ್ಯಾತ ತಬಲಾ ವಾದಕರಾದ ಧಾರವಾಡದ ಪಂಡಿತ್ ಶೇಷಗಿರಿ ಹಾನಗಲ್ ಅವರಿಂದ 16 ವರ್ಷ ತಪಸ್ಸಿನಂತೆ ತಬಲಾವಾದನವನ್ನು ಕಲಿತ ಹಿರಿಮೆ ಇವರದ್ದು. ಅದಕ್ಕೂ ಮೊದಲು ಇವರ ಕಲಿಕೆಗೆ ಓನಾಮ ಹಾಕಿದವರು, ಪಂಡಿತ್ ರಾಜಗೋಪಾಲ ಕಲ್ಲರ್ಕರ್ ಅವರನ್ನು ಸದಾ ಸ್ಮರಿಸುತ್ತಾರೆ. 25 ವರ್ಷಗಳ ಅನುಭವ ಹೊಂದಿರುವ ಇವರು ವನಶ್ರೀ ತಬಲಾ ವಿದ್ಯಾಲಯವನ್ನು ಬೆಂಗಳೂರಿನಲ್ಲಿ ಸ್ಥಾಪಿಸಿ ನೂರಾರು ವಿದ್ಯಾರ್ಥಿಗಳಿಗೆ ತಬಲಾ ಕಲಿಸುತ್ತಿದ್ದಾರೆ.
ವಿಖ್ಯಾತ ಸಂಗೀತಗಾರರಿಗೆ ತಬಲಾ ಸಾಥ್ ನೀಡಿದ ಹೆಮ್ಮೆ ಇವರದು. ತಬಲಾ ವಾದನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಪ್ರಕಾಶ್ ಅವರು ಜಯಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಲಯದಲ್ಲಿ ತಬಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಂಗ ಪ್ರಪಂಚ ರಾಷ್ಟ್ರೀಯ ಪ್ರಶಸ್ತಿ ಮತ್ತಿತರ ಹಲವಾರು ಗೌರವಗಳಿಗೆ ಪಾತ್ರರಾಗಿದ್ದಾರೆ.
ಮೇಲಿನ ಕಾರ್ಯಕ್ರಮವನ್ನು ಆಯೋಜಿಸಲು ನೆರವಾದ ಸಪ್ತಕದ ಜಿ.ಎಸ್.ಹೆಗಡೆಯವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುವುದು. ಬೆಂಗಳೂರಿನ ಸಪ್ತಕ ಸಂಸ್ಥೆಯ ಮೂಲಕ ಹಲವಾರು ಹಿಂದುಸ್ಥಾನಿ ಸಂಗೀತವನ್ನು ರಾಷ್ಟ್ರಾದ್ಯಂತ ಹಮ್ಮಿಕೊಂಡು ಪ್ರಸಿದ್ಧರಾಗಿರುವ ಶ್ರೀಯುತರು ಇನ್ನೇನು ಕೆಲವೇ ದಿನಗಳಲ್ಲಿ ಸಾವಿರದ ಸಂಗೀತ ಕಚೇರಿಗಾಗಿ ತಯಾರಿ ಮಾಡಿಕೊಂಡಿರುವ ಸಾಹಸವಂತರು ಈ ಜಿ.ಎಸ್.ಹೆಗಡೆಯವರು. ಇವರು ಇದುವರೆಗೆ ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟದ ಸಂಗೀತ ಕಲಾವಿದರನ್ನು ಕರೆಸಿ ವಿವಿಧ ಸ್ಥಳಗಳಲ್ಲಿ ಸಂಗೀತ ಕಛೇರಿ ನಡೆಸಿದ ಹಿರಿಮೆಗೆ ಪಾತ್ರರಾಗಿದ್ದಾರೆ ಎಂದು ಕರ್ನಾಟಕ ಸಂಘದ ಅಧ್ಯಕ್ಷರಾದ ಎಂ.ಎನ್. ಸುಂದರರಾಜ್ ಅವರು ತಿಳಿಸಿದ್ದಾರೆ.