Uttaradi mutt ಜೀವರಿಗೆ ಜ್ಞಾನ ಕೊಟ್ಟು ರಕ್ಷಣೆ ಮಾಡುವುದು ನಿಜವಾದ ರಕ್ಞಣೆ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.
ನಿಮ್ಮ ಮಕ್ಕಳಿಗೆ ಏನು ಕೊಡಬೇಕು ಎಂಬುದನ್ನೂ ಭಾಗವತ ಹೇಳುತ್ತಿದೆ. ಹೊಟ್ಟೆ, ಬಟ್ಟೆಗೆ ಕೊಟ್ಟಿರಬಹುದು ಅದು ಕರ್ತವ್ಯ. ಆದರೆ ಹಿರಿಯರ, ಜ್ಞಾನಿಗಳು, ತಪಸ್ವಿಗಳ ಜೊತೆಗೆ, ದೊಡ್ಡವರ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಕಲಿಸಿದರೆ ನೀವು ನಿಮ್ಮ ನಿಮ್ಮ ಮಕ್ಕಳನ್ನು ರಕ್ಷಣೆ ಮಾಡಿದಂತೆ ಎಂದರು.
ಕೇವಲ ಲೌಖಿಕ ಶಿಕ್ಷಣ ಕಲಿಸಿದರೂ ಸಾಲದು. ತತ್ವಜ್ಞಾನ, ಅಧ್ಯಾತ್ಮಿಕ ಜ್ಞಾನ ಮತ್ತು ಶಿಕ್ಷಣವನ್ನೂ ನೀಡಬೇಕು. ಸರಿಯಾದ ಗುರುಗಳ ಬಳಿ ತಿಳುವಳಿಕೆ ಕೊಡಿಸಬೇಕು. ಇದು ತಂದೆ ತಾಯಿಯರ ಕರ್ತವ್ಯ. ಹೀಗೆ ಮಾಡಿದರೆ ಮಕ್ಕಳ ರಕ್ಷಣೆ ಮಾಡಿದಂತೆ ಇದರಿಂದ ಅವರ ಬದುಕೂ ಸಾರ್ಥಕ ಆಗುತ್ತದೆ ಎಂದರು.
Uttaradi mutt ದೇವರಿಗೆ ಮನಸ್ಸು ಕೊಡಿ :
ಪ್ರವಚನ ನೀಡಿದ ಪಂಡಿತ ನರಹರಿ ಆಚಾರ್ಯ ಮುತ್ತಗಿ, ಭಾಗವತ ಗ್ರಂಥದ 12 ಸ್ಕಂದದ ಸೂತ್ರಗಳನ್ನು ನಾವು ಅಳವಡಿಸಿಕೊಂಡರೆ ಸಂಸಾರದಲ್ಲಿ ಸುಖವಾಗಿರಲು ಸಾಧ್ಯ. ಎಲ್ಲವನ್ನೂ ಕೊಟ್ಟ ಭಗವಂತನಿಗೆ ನಾವು ಕೊಡಬೇಕಾದ್ದು ಮನಸ್ಸು ಮಾತ್ರ. ನಿರಂತರ ಭಕ್ತಿ ಮಾತ್ರ ಎಂದರು.
ಹರೀಶಾಚಾರ್ಯ ಸಂಡೂರು, ಮಕರಂದಾಚಾರ್ಯ ಕುಲಕಣ ð, ಹರೀಶಾಚಾರ್ಯ ಮೈಸೂರು ಪ್ರವಚನ ನೀಡಿದರು. ಮುತ್ತಗಿ ನರಸಿಂಹ ದೇವರ ಪ್ರಸಾದವನ್ನು ಇದೇವೇಳೆ ಶ್ರೀಪಾದಂಗಳವರಿಗೆ ಸಮರ್ಪಿಸಲಾಯಿತು.
ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಕಾರ್ಯದರ್ಶಿ ಕೆ.ಎನ್. ಗುರುರಾಜ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಅನಿಲ್ ರಾಮಧ್ಯಾನಿ, ಗುರುರಾಜ ಕಟ್ಟಿ, ಮುರಳಿ, ಧೃವಾಚಾರ್, ಶ್ರೀನಾಥ ನಗರಗದ್ದೆ ಮೊದಲಾದವರಿದ್ದರು.
ಶ್ರೀ ಸತ್ಯಧರ್ಮರ ಅಧಿಕ ಆರಾಧನೆ
ಹೊಳೆಹೊನ್ನೂರಲ್ಲಿ ಸನ್ನಿಹಿತರಾಗಿರುವ ಉತ್ತರಾದಿ ಮಠದ ಪರಂಪರೆಯ ೨೮ನೇ ಯತಿಗಳಾದ ಶ್ರೀ ಸತ್ಯಧರ್ಮ ತೀರ್ಥರ ಆರಾಧನಾ ಮಹೋತ್ಸವ ಪ್ರತಿವರ್ಷ ಶ್ರಾವಣ ಬಹುಳ ತ್ರಯೋದಶಿ ನಡೆಯುತ್ತದೆ. ಈ ಬಾರಿ ಶ್ರಾವಣ ಮಾಸ ಅಧಿಕ ಬಂದಿರುವುದರಿಂದ ಅಧಿಕ ಮಾಸದಲ್ಲಿ ಕೂಡ ಶ್ರೀ ಸತ್ಯಧರ್ಮರ ಆರಾಧನೆ ನೆರವೇರಿಸುವ ಸುಯೋಗ ಒದಗಿ ಬಂದಿದೆ.
ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಕೂಡ ಇಲ್ಲಿಯೇ ಚಾತುರ್ಮಾಸ ವ್ರತದಲ್ಲಿ ಇರುವುದರಿಂದ, ಅಧಿಕ ಮಾಸದ ಆರಾಧನೆ ಅಪರೂಪವೂ ಆಗಿರುವುದರಿಂದ ವಿಶೇಷವಾಗಿ ಆರಾಧನೆ ಸೋಮವಾರದಂದು ನಡೆಯಲಿದೆ. ದೇಶದ ವಿವಿಧೆಡೆಯಿಂದ ವಿದ್ವಾಂಸರು ಆಗಮಿಸಲಿದ್ದಾರೆ.