Court Of JMFC ಕಳ್ಳತನ ಮಾಡಿದ್ದ ಆರೋಪಿಗೆ ನಾಲ್ಕು ವರ್ಷ ಕಠಿಣ ಶಿಕ್ಷೆ 10 ಸಾವಿರ ರೂ. ದಂಡ ವಿಧಿಸಿ ಇಲ್ಲಿನ ಎಎಸ್ಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ: ೨೦೧೯ನೇ ಸಾಲಿನಲ್ಲಿ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬಾಬಳ್ಳಿಯಲ್ಲಿ ದೇವೇಂದ್ರಪ್ಪ ಎಂಬುವವರ ಮನೆಯಲ್ಲಿ ಆರೋಪಿ ಮಹೇಶ್ ನಾಯ್ಕ ಬೆಳ್ಳಿ ಮತ್ತು ಚಿನ್ನದ ಸಾಮಾನು ಕಳ್ಳತನ ಮಾಡಿರುತ್ತಾನೆ ಎಂದು ನೀಡಿದ ದೂರಿನ ಮೇರೆಗೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
Court Of JMFC ತನಿಖಾಧಿಕಾರಿಯಾದ ಭದ್ರಾವತಿ ಗ್ರಾಮಾಂತರ ಠಾಣೆಯ ಸಿಪಿಐ ಯೋಗೀಶ್, ತನಿಖಾ ಸಹಾಯಕರಾಗಿ ದಿವಾಕರ್ರಾವ್ ಹೆಚ್ಸಿ ಇವರು ತನಿಖೆ ಕೈಗೊಂಡು ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.
ಪ್ರಕರಣದಲ್ಲಿ ಸರ್ಕಾರಿ ಸಹಾಯಕ ಅಭಿಯೋಜಕರಾದ ತಿಪ್ಪೇಶ್ರಾವ್ರವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದು, ಎ.ಎಸ್.ಸಿ.ಜೆ. ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪಿತನ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಮಿಲನ ವಿ.ಎನ್.ರವರು ದಿನಾಂಕ: ೧೦-೦೮-೨೦೨೩ರಂದು ಆರೋಪಿಗೆ ಕಲಂ ೩೮೦ಕ್ಕೆ ೨ ವರ್ಷ ಜೈಲು ಶಿಕ್ಷೆ ಮತ್ತು ೫ ಸಾವಿರ ರೂ. ದಂಡ ವಿಧಿಸಿದ್ದು, ದಂಡ ಕಟ್ಟಲು ವಿಫಲವಾದಲ್ಲಿ ೩ ತಿಂಗಳು ಸಾದಾ ಕಾರಾವಾಸ ಮತ್ತು ೪೫೪ ಕಲಂಗೆ ೨ ವರ್ಷ ಮತ್ತು ೫ ಸಾವಿರ ರೂ. ದಂಡ ವಿಧಿಸಿದ್ದು, ದಂಡ ಕಟ್ಟಲು ತಪ್ಪಿದಲ್ಲಿ ೩ ತಿಂಗಳು ಸಾದಾ ಕಾರಾಗೃಹ ವಾಸದ ಶಿಕ್ಷೆ ವಿಧಿಸಿ ಆದೇಶ ನೀಡಿರುತ್ತಾರೆ.