Kargil Vijay Diwas ದೇಶದಲ್ಲಿ ಅನ್ನ ನೀಡುವ ರೈತನ ಪಾತ್ರ ಒಂದೆಡೆಯಾದರೆ ಇನ್ನೊಂದೆಡೆ ಗಡಿಯಲ್ಲಿ ದೇಶನ ನಾಗರೀಕರ ರಕ್ಷಣೆಗೆ ಜೀವವನ್ನೆ ಪಣಕ್ಕಿಡುವ ಸೈನಿಕ, ಇವರಿಬ್ಬರು ದೇಶದ ನಿಜವಾದ ಬೆನ್ನೆಲುಬು ಇವರು ಸಾರ್ಥಕತೆ ಮತ್ತು ತ್ಯಾಗದಿಂಲೇ ಸಮಾಜದ ನೆಮ್ಮದಿಗೆ ಕಾರಣವಾಗಿದೆ ಎಂದು ಗೌರಿಗದ್ದೆ ಆಶ್ರಮದ ಅವಧೂತ ವಿನಯ್ಗುರೂಜಿ ಹೇಳಿದರು.
ಚಿಕ್ಕಮಗಳೂರು ನಗರದಲ್ಲಿ ಕುವೆಂಪು ಕಲಾಮಂದಿರದಲ್ಲಿ ಭೂಮಿಕ ಟಿವಿ ಹಾಗೂ ಕಲ್ಯುಗ್ ಇವೆಂಟ್ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವದ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಬುಧವಾರ ಭಾಗವಹಿಸಿ ಮಾತನಾಡಿದರು.
ನಿವೃತ್ತ ಸೈನಿಕರ ಶ್ರೇಯೋಭಿವೃದ್ಧಿ ಜೊತೆಗೆ ಅವರ ಮಕ್ಕಳಿಗೂ ಅನುಕೂಲವಾಗುವಂತೆ ಶಾಲೆಗಳನ್ನು ಆರಂಭಿಸಬೇಕು. ಕುಟುಂಬವನ್ನು ತೊರೆದು ಹಗಲಿರುಳು ಗಡಿ ಕಾಯುವ ಮೂಲಕ ದೇಶದ ರಕ್ಷಣೆ ಮಾಡುವ ಯೋಧರ ಋಣ ತೀರಿಸಲಾಗದು ಎಂದು ಹೇಳಿದರು.
ಕಾರ್ಗಿಲ್ ವಿಜಯದಿವಸದ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ, ಪ್ರತಿಯೊಬ್ಬರು ಈ ಸಂಭ್ರಮಾಚರಣೆಯನ್ನು ಮಾಡಬೇಕು ಮತ್ತು ಮುಂದಿನ ಪೀಳಿಗೆಗೆ ಇದರ ಬಗ್ಗೆ ಅರಿವು ಮೂಡಿಸಬೇಕು, ಯುವಜನತೆ ದೇಶದ ಆಸ್ತಿ, ಯಾವುದೇ ಜಾತಿ, ಮತಗಳಿಗೆ ಸಿಲುಕಬಾರದು. ಒಳ್ಳೆಯ ಗುಣ ಸಂಸ್ಕಾರಗಳನ್ನು ಬೆಳೆಸಿಕೊಂಡು ತಮ್ಮನ್ನು ತಾವೇ ಮಾದರಿಯಾಗಿಸಿಕೊಳ್ಳಬೇಕು ಎಂದರು.
ಶಾಸಕ ಎಚ್.ಡಿ ತಮ್ಮಯ್ಯ ಮಾತನಾಡಿ ಕಾರ್ಗಿಲ್ ವಿಜಯದಿನ ಇದು ದೇಶದ ಹೆಮ್ಮೆಯ ದಿನ ಪ್ರತಿಯೊಬ್ಬ ಯುವಜನಾಂಗಕ್ಕೆ ಸ್ಪೂರ್ತಿ ತುಂಬುವ ದಿನವಾಗಿದ್ದು ಕಾರ್ಗಿಲ್ ಯುದ್ದದಲ್ಲಿ ಮಡಿದ ಸುಮಾರು 500 ಕ್ಕೂ ಅಧಿಕ ಸೈನಿಕರ ಶೌರ್ಯ, ಸಾಹಸವನ್ನು ನಾವೆಲ್ಲರೂ ಸ್ಮರಿಸಬೇಕು. ಜಿಲ್ಲೆಯ ನಿವೃತ್ತ ಸೈನಿಕರ ಶ್ರೇಯೋಭಿವೃದ್ಧಿಗೆ ನಿವೇ ಶನ, ಸೈನಿಕರ ಭವನ ನಿರ್ಮಾಣ ಸಹಿತ ಸರ್ಕಾರದಿಂದ ಸವಲತ್ತು ದೊರಕಿಸಿಕೊಡಲು ಪ್ರಯತ್ನ ಮಾಡಲಾ ಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಭೂಮಿಕ ವಾಹಿನಿಯ ವ್ಯವಸ್ಥಾಪಕ ಅನಿಲ್ ಆನಂದ್ ದೇಶ ಭಕ್ತಿ ಎಂದರೆ ಪುಸ್ತಕದ ವಿಷಯವಲ್ಲ, ಸೈನಿಕರ ಮತ್ತು ರೈತರ ಕಷ್ಟಗಳನ್ನು ಪ್ರತಿಯೊಬ್ಬರು ಅರಿಯಬೇಕು. ಗಡಿಯಲ್ಲಿ ನಮ್ಮ ರಕ್ಷಣೆಗೆ ನಿರತರಾಗಿರುವ ಯೋಧರ ಸೇವೆಗೆ ನಾವೆಲ್ಲ ಕೃತಜ್ಞರಾಗಿರಬೇಕು ಎಂದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಹಲವು ಶಾಲೆಗಳ ವಿದ್ಯಾರ್ಥಿಗಳ ಸಹಕಾರದೊಂದಿಗೆ ವಿಪರೀತ ಮಳೆ ಲೆಕ್ಕಿಸದೆ 1 ಕಿ.ಮಿ ಉದ್ದದ ತ್ರಿವರ್ಣ ಧ್ವಜದ ಮೆರವಣಿಗೆಯೊಂದಿದೆ ಎಂಜಿ ರಸ್ತೆಯ ಮುಖಾಂತರ ಸಾಗಿದರು.
ಈ ಸಂಭ್ರಮಾಚರಣೆಯಲ್ಲಿ ವಿವಿಧ ಶಾಲಾಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಹಲವು ಸಂಘ ಸಂಸ್ಥೆಗಳು, ನಿವೃತ್ತ ಯೋಧರು, ಪೊಲೀಸರು ಸಹಿತ ನೂರಾರು ಮಂದಿ ಪಾಲ್ಗೊಂಡಿದ್ದರು.
ಮಾರ್ಗದುದ್ದಕ್ಕೂ ಭಾರತ ಮಾತಾ ಕೀ ಜೈ, ವಂದೆ ಮಾತರಂ ಮೊದಲಾದ ಘೋಷ ವಾಕ್ಯ ಕೂಗುವ ಮೂಲಕ ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಶಾಲಾಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಕಾರ್ಗಿಲ್ ವೀರಯೋಧರು ಹಾಗೂ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡವರು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.
ಈ ಸಂದರ್ಭದಲ್ಲಿ ಕಲ್ಯುಗ್ ಇವೆಂಟ್ ಮುಖ್ಯಸ್ಥ ದೀಪಕ್, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಸತೀಶ್, ರೇಖಾಹುಲಿಯಪ್ಪಗೌಡ, ಬ್ರಹ್ಮಕುಮಾರೀಸ್ ಜಿಲ್ಲಾ ಸಂಚಾಲಕಿ ಭಾಗ್ಯಕ್ಕ, ಶಿವಕುಮಾರ್, ಲಕ್ಷ್ಮಣ್ ಗೌಡ ಇದ್ದರು.
Kargil Vijay Diwas ಮೆರವಣಿಗೆಗೆ ಮುಖಂಡರಾದ ಎ.ಎನ್.ಮಹೇಶ್, ವಿಧಾನಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾದರು.