ಶಿವಮೊಗ್ಗವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಕೇಂದ್ರದ ಪ್ರವಾಸೋದ್ಯಮ ಸಚಿವ ಕಿಶನ್ ರೆಡ್ಡಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಂಸದ ಬಿವೈ ರಾಘವೇಂದ್ರ ಅವರು ತಿಳಿಸಿದ್ದಾರೆ.
ಶಿವಮೊಗ್ಗದ ಎನ್ ಇ ಎಸ್ ಮೈದಾನದಲ್ಲಿ ಸರ್ಕಾರಿ ನೌಕರರ ಸಂಘದ ತಾಲೂಕು ಸಮ್ಮೇಳನ, ನೌಕರರಿಗೆ ಪ್ರಜಾ ಸ್ನೇಹಿ ಆಡಳಿತ ಕಾರ್ಯಗಾರ, ನೌಕರರ ಫ್ಯಾಮಿಲಿ ಮಾರ್ಟ್ ಉದ್ಘಾಟನಾ ಸಮಾರಂಭ ದಲ್ಲಿ ಮಾತನಾಡಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಬಹಳಷ್ಟು ಪ್ರವಾಸಿ ತಾಣಗಳಿದ್ದರೂ ಮೂಲ ಸೌಲಭ್ಯಗಳಿಲ್ಲದೆ ಪ್ರವಾಸಿಗರಿಂದ ದೂರ ಉಳಿದಿದೆ. ಆದ್ದರಿಂದ ಅವುಗಳ ಸಮರ್ಥವಾಗಿ ಅಭಿವೃದ್ಧಿಪಡಿಸಿ ಪ್ರವಾಸೋದ್ಯಮ ಕೇಂದ್ರ ಮಾಡುವ ಸಲುವಾಗಿ ಕೇಂದ್ರ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಚಿವರು ಜಿಲ್ಲೆಯ 30 ಪ್ರಸಿದ್ಧ ತಾಣಗಳನ್ನು ಗುರುತಿಸಿ ಟೂರಿಸಂ ಹಬ್ ಮಾಡುವ ಭರವಸೆ ನೀಡಿದ್ದಾರೆ. ಅದಕ್ಕೆ ಪೂರಕವಾಗಿ ದೇಶದ ಪ್ರಮುಖ ಪ್ರವಾಸಿ ಗೈಡ್ಗಳನ್ನು ಶಿವಮೊಗ್ಗಕ್ಕೆ ಕರೆಸಿ ಕಾರ್ಯಗಾರ ನಡೆಸಲು ಉದ್ದೇಶಿಸಲಾಗಿದೆ ಎಂದು ಬಿ ವೈ ರಾಘವೇಂದ್ರ ಅವರು ಹೇಳಿದರು.
ಸರ್ಕಾರಿ ನೌಕರರ ಶ್ರಮದಿಂದಾಗಿ ಅಭಿವೃದ್ಧಿ ಯೋಜನೆಗಳ ಸಮರ್ಥ ಅನುಷ್ಠಾನ ಸಾಧ್ಯವಾಗಿದೆ. ಜಿಎಸ್ಟಿ ಸಂಗ್ರಹದಿಂದ ರಾಜ್ಯವು ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ಅದಕ್ಕೆ ಕಾರಣ ಸರ್ಕಾರಿ ನೌಕರರು ಎಂದು ಶಿವಮೊಗ್ಗ ಶಾಸಕ ಕೆ ಎಸ್ ಈಶ್ವರಪ್ಪ ಅವರು ತಿಳಿಸಿದರು.
ಇಡೀ ದೇಶದಲ್ಲಿ ರಾಜ್ಯದ ಸರ್ಕಾರಿ ನೌಕರರ ಸಂಘಕ್ಕೆ ವಿಶೇಷವಾದ ಹೆಸರಿದೆ. ಸರ್ಕಾರದ ಕಾರ್ಯಕ್ರಮಗಳನ್ನ ಯಶಸ್ವಿಯಾಗಿ ಜನರಿಗೆ ತಲುಪಿಸುತ್ತಿರುವ ರಾಜ್ಯವೆಂದರೆ ಅದು ಕರ್ನಾಟಕ. ಕಳೆದ ಬಾರಿ ಸರ್ಕಾರವು 2.67 ಲಕ್ಷ ಕೋಟಿ ರೂಪಾಯಿ ಬಜೆಟ್ ಮಂಡಿಸಲಾಗಿತ್ತು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ ಎಸ್ ಷಡಾಕ್ಷರಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಆಯನೂರು ಮಂಜುನಾಥ್, ಎಸ್ ಎಲ್ ಭೋಜೇಗೌಡ, ಅಶೋಕ ನಾಯ್ಕ, ಪದವೀಧರ ಸಹಕಾರ ಸಂಘದ ಅಧ್ಯಕ್ಷರಾದ ಎಸ್. ಪಿ. ದಿನೇಶ್ ಇನ್ನು ಮುಂತಾದ ಗಣ್ಯರು ಉಪಸ್ಥಿತರಿದ್ದರು.