Wednesday, October 2, 2024
Wednesday, October 2, 2024

ಮನಸ್ಸಿನಿಂದ ಮನಸ್ಸಿಗೆ -14

Date:

ಇಸ್ರೇಲ್ – ಪ್ಯಾಲಿಸ್ಟೈನ್ ಹಿಂಸಾಚಾರ ಮತ್ತೆ ಭುಗಿಲೇಳಲಿದೆ…

ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ದೇಶಗಳ ಸೇಡು, ಪ್ರತೀಕಾರ ಮತ್ತು ವಿವಾದಗಳ ಇತಿಹಾಸ ಗಮನಿಸಿ ಹೇಳುವುದಾದರೆ, ಶೀಘ್ರದಲ್ಲೇ ಇಸ್ರೇಲ್ ಪ್ಯಾಲಿಸ್ಟೈನ್ ಮೇಲೆ ತೀವ್ರ ಸ್ವರೂಪದ ದಾಳಿ ಮಾಡುವ ಎಲ್ಲಾ ಸಾಧ್ಯತೆ ಇದೆ. ಇಸ್ರೇಲ್ ಸರ್ಕಾರದ ತುರ್ತು ಸಂಪುಟ ಸಭೆ ನಡೆಯುತ್ತಿದೆ. ಯಾವುದೇ ಕ್ಷಣ ದಾಳಿ ಆಗಬಹುದು.

ಏಕೆಂದರೆ ಪ್ಯಾಲೆಸ್ಟೈನ್ ಪ್ರಜೆಯೊಬ್ಬನು ಇಸ್ರೇಲ್ ನೆಲದಲ್ಲಿ ಬಂದೂಕಿನಿಂದ ಮನಬಂದಂತೆ ಗುಂಡು ಹಾರಿಸಿ ಸುಮಾರು 7 ಜನರನ್ನು ಹತ್ಯೆ ಮಾಡಿದ್ದಾನೆ. ಇದಕ್ಕೆ ಒಂದು ದಿನ ಮೊದಲು ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ಸೇನೆ 9 ಜನರನ್ನು ಹತ್ಯೆ ಮಾಡಿದೆ. ಇಸ್ರೇಲ್ ಸೇನೆ ಆ ಹಂತಕನನ್ನು ಸಹ ಹೊಡೆದುರುಳಿಸಿದೆ…..

ತನ್ನ ನೆಲದ ರಕ್ಷಣೆಗಾಗಿ ಇಸ್ರೇಲ್ ಯಾವ ಹಂತದ ಕ್ರೌರ್ಯ ಮೆರೆಯಲು ಹೇಸುವುದಿಲ್ಲ. ಅದರ ಸೇಡಿನ ಇತಿಹಾಸ ಭಯಾನಕವಾಗಿದೆ. ಒಂದು ತಲೆಗೆ ಎರಡು ತಲೆ ಎಂಬ ಸಿದ್ದಾಂತ ಅಳವಡಿಸಿಕೊಂಡಿದೆ….

ಗಾಜಾ ಪ್ರದೇಶದ ವಿವಾದ ತುಂಬಾ ಹಳೆಯದು. ಇಸ್ರೇಲ್ – ಪ್ಯಾಲಿಸ್ಟೈನ್ ನಡುವಿನ ಹೋರಾಟ ನಿರಂತರವಾಗಿ ನಡೆಯುತ್ತಲೇ ಇದೆ. ಇನ್ನೂ ಯಾವುದೇ ರೀತಿಯ ಸಂಧಾನ ಸಾಧ್ಯವಾಗಿಲ್ಲ. ಇದೊಂದು ವಿಚಿತ್ರ ಪರಿಸ್ಥಿತಿಯಲ್ಲಿದೆ.

ಇಸ್ರೇಲ್ ಎಂಬ ಜಗತ್ತಿನ ಒಂದು ವಿಶಿಷ್ಟ ಮತ್ತು ಬಲಿಷ್ಠ ಸಕ್ರಮವಾದ ಅಕ್ರಮ ದೇಶ…..

ಭಾರತದ ಬಹಳಷ್ಟು ಜನರಿಗೆ ಇಸ್ರೇಲ್ ಎಂಬ ದೇಶದ ಬಗ್ಗೆ ತುಂಬಾ ಅಭಿಮಾನ, ಮೆಚ್ಚುಗೆ ಮತ್ತು ಪ್ರೀತಿ ಇದೆ. ಭಾರತ ಇಸ್ರೇಲ್ ಮಾದರಿಯಲ್ಲಿ ಬೆಳೆಯಬೇಕು ಎಂಬ ಆಸೆ ಇದೆ.

ಅದಕ್ಕೆ ವಿರುದ್ಧವಾಗಿ ಬಹುತೇಕ ಮುಸ್ಲಿಮರು ವಿಶ್ವದಲ್ಲಿ ಅತ್ಯಂತ ಹೆಚ್ಚು ದ್ವೇಷಿಸುವ ದೇಶ ಕೂಡ ಇಸ್ರೇಲ್ ಆಗಿದೆ. ಅದು ಸಂಪೂರ್ಣ ನಾಶವಾಗಲಿ ಎಂದು ಅವರ ಒಳ ಮನಸ್ಸು ಹೇಳುತ್ತದೆ.

ಹಾಗಾದರೆ ಏನಿದು ಇಸ್ರೇಲ್ ಎಂಬ ದೇಶದ ವಿಶೇಷತೆ.

ಇಸ್ರೇಲ್ ದೇಶದ ಮೂಲ, ಅದರ ಉಗಮ, ಧರ್ಮ, ಅಲ್ಲಿನ ಜನಜೀವನ, ವಿಶ್ವಸಂಸ್ಥೆಯ ಮಾನ್ಯತೆ, ಇಸ್ರೇಲಿಗರ ಮೇಲಿನ ಜರ್ಮನ್ ದೌರ್ಜನ್ಯ, ನಿರಾಶ್ರಿತ ಶಿಬಿರಗಳು, ಪ್ಯಾಲಿಸ್ಟೈನ್ ಆಕ್ರಮಣ ಮತ್ತು ಸಂಘರ್ಷ ಎಲ್ಲವನ್ನೂ ಗೂಗಲ್ ನಲ್ಲಿ ಓದಬಹುದು. ಆದರೆ ಇಲ್ಲಿ ಮುಖ್ಯವಾಗಿ ಇಸ್ರೇಲ್ ಮತ್ತು ಅದರ ಈಗಿನ ಪ್ರಭಾವವನ್ನು ನಾವು ಹೇಗೆ ಗ್ರಹಿಸಬಹುದು ಎಂಬುದರ ಸುತ್ತ ಒಂದು ನೋಟ…..

ಹೌದು, ಸುಮಾರು 86 ಲಕ್ಷ ಜನಸಂಖ್ಯೆ, ಸುಮಾರು 8000 ಚದರ ಮೈಲಿಯ ಚಿಕ್ಕ ದೇಶ ಇಸ್ರೇಲ್. ಆದರೆ ಅದರ ಸೈನಿಕ ಶಕ್ತಿ, ಅರ್ಥಿಕ ಶಕ್ತಿ, ತಂತ್ರಜ್ಞಾನ ವಿಶ್ವ ದರ್ಜೆಯ ಮಟ್ಟದಲ್ಲಿದೆ.

ಅಮೆರಿಕದ ಸಿಐಎ, ರಷ್ಯಾದ ಕೆಜಿಬಿ, ಭಾರತದ ರಾ, ಪಾಕಿಸ್ತಾನದ ಐಏಸ್ಐ ಏಜೆನ್ಸಿಗಳಿಗಿಂತ ಇಸ್ರೇಲ್ ನ ಮೊಸಾದ್ ಎಂಬ ಬೇಹುಗಾರಿಕೆ ಸಂಸ್ಥೆ ಅತ್ಯುತ್ತಮ ಸಾಮರ್ಥ್ಯ ಹೊಂದಿದೆ ಮತ್ತು ಸಾಬೀತು ಪಡಿಸಿದೆ.

ಮ್ಯೂನಿಚ್ ಒಲಂಪಿಕ್ಸ್ ನಲ್ಲಿ ಅದರ ಪುಟ್ಬಾಲ್ ಆಟಗಾರರನ್ನು ಪ್ಯಾಲಿಸ್ಟೈನ್ ಉಗ್ರರು ಮಾಡಿದ ಹತ್ಯಾಕಾಂಡ, ಮಾನವ ಇತಿಹಾಸದ ಭಯಾನಕ ಘಟನೆಗಳಲ್ಲಿ ಒಂದಾಗಿ ದಾಖಲಾಗಿದೆ.

ಅದೇ ರೀತಿ ಭಯೋತ್ಪಾದಕರಿಂದ ಇಸ್ರೇಲ್ ವಿಮಾನ ಅಪಹರಣವಾದಾಗ ಅದನ್ನು ಅದ್ಬುತ ಸಾಹಸ ಮಾಡಿ ಸಿನಿಮಾವನ್ನು ಮೀರಿಸುವ ರೀತಿಯಲ್ಲಿ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿದ್ದು ಅದರ ಸಾಮರ್ಥ್ಯಕ್ಕೆ ಸಾಕ್ಷಿ.

ಇಡೀ ಇಸ್ರೇಲ್ ದೇಶವನ್ನು ಅದರ ಅಜನ್ಮ ಶತ್ರುಗಳಾದ ಮುಸ್ಲಿಂ ದೇಶಗಳು ಸುತ್ತುವರಿದಿವೆ. ಭಯೋತ್ಪಾದನೆಯ ಉತ್ತುಂಗದಲ್ಲಿರುವ ಐಸಿಸ್ ಕೂಡ ಅದರ ಮೇಲೆ ದಾಳಿ ಮಾಡಲು ಸಾಧ್ಯವಾಗಿಲ್ಲ. ಅದು ಇಸ್ರೇಲ್ ದೇಶದ ಬಹುದೊಡ್ಡ ಸಾಮರ್ಥ್ಯ.

ಹಾಗಾದರೆ ಇಸ್ರೇಲ್ ಒಂದು ಶ್ರೇಷ್ಠ ದೇಶ ಎಂದು ಪರಿಗಣಿಸಬಹುದೆ ?

ಇಲ್ಲ, ಖಂಡಿತ ಇಲ್ಲ. ಇಸ್ರೇಲ್ ದೇಶದ ಅಸ್ತಿತ್ವವೇ ಒಂದು ವಿವಾದಾತ್ಮಕ ವಿಷಯ. ಅದನ್ನು ಹೊರತುಪಡಿಸಿ ಕಡಿಮೆ ಜನಸಂಖ್ಯೆಯ ಇಸ್ರೇಲ್ ಜ್ಯೂಯಿಷ್ ಜನಾಂಗವೇ ಒಂದು ಬಲಿಷ್ಠ ಅನುವಂಶೀಯ ಗುಣಗಳನ್ನು ಹೊಂದಿದೆ. ದೈಹಿಕ ಮತ್ತು ಮಾನಸಿಕ ಗಟ್ಟಿತನ ಅಪರೂಪವಾಗಿದೆ. ಅದರ ವಿದೇಶಾಂಗ ನೀತಿ ಆ ದೇಶ ಮಾತ್ರ ಅನುಸರಿಸಬಹುದಾದ ಅತ್ಯಂತ ಕಠಿಣ ನಿಯಮಗಳನ್ನು ಒಳಗೊಂಡಿದೆ. ನ್ಯಾಯ ನೀತಿ ಧರ್ಮಕ್ಕಿಂತ ಉಳಿವಿಗಾಗಿ ಎಂತಹ ಕೃತ್ಯಕ್ಕೂ ಸಿದ್ದವಾಗಿರುವುದು ಅದರ ಕಠೋರ ವಿದೇಶಾಂಗ ನೀತಿ.

ಅದನ್ನು ವಿಶ್ವದ ಅತ್ಯಂತ ಪ್ರಾಚೀನ ಇತಿಹಾಸ ಹೊಂದಿರುವ, ಆಧ್ಯಾತ್ಮಿಕ ವಿಷಯದಲ್ಲಿ ಆಳವಾದ ನಂಬಿಕೆ ಇಟ್ಟಿರುವ, ಅನೇಕ ಪರಕೀಯರ ದಾಳಿಗೆ ಒಳಗಾಗಿರುವ, ವೈವಿಧ್ಯತೆ ಹೊಂದಿರುವ, ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ, ಬೃಹತ್ ಜನಸಂಖ್ಯೆಯ, ಅಲಿಪ್ತ ನೀತಿಯ ಭಾಗವಾಗಿರುವ ಭಾರತ ಯಾವ ಕೋನದಿಂದಲೂ ಅನುಸರಿಸಲು ಸಾಧ್ಯವಿಲ್ಲ.

ಒಬ್ಬ ಹಿಂದು ಧರ್ಮದ ವ್ಯಕ್ತಿ, ಮುಸ್ಲಿಮರನ್ನು ನಾನಾ ಕಾರಣಗಳಿಗಾಗಿ ದ್ವೇಷಿಸುವವರಾಗಿದೆ.
ಮುಸ್ಲಿಮರ ಪ್ರಬಲ ವೈರಿಯಾದ ಕಾರಣಕ್ಕೆ ಇಸ್ರೇಲ್ ಅನ್ನು ಇಷ್ಟಪಡುವುದು ಒಂದು ರೀತಿಯ ಯೋಚನೆಯಾದರೆ,
ತನ್ನ ಧರ್ಮದ ಜನರು ವಾಸಿಸುವ ಪ್ರದೇಶವನ್ನು ಅತಿಕ್ರಮಣ ಮಾಡಿರುವ ಮತ್ತು ಅವರ ಮೇಲೆ ನಿರಂತರ ದೌರ್ಜನ್ಯ ಮಾಡುತ್ತಿರುವ ಕಾರಣಕ್ಕಾಗಿ ಮುಸ್ಲಿಮರು ಇಸ್ರೇಲನ್ನು ದ್ವೇಷಿಸುವುದು ಇನ್ನೊಂದು ರೀತಿಯದು.

ಸುಮಾರು 50 ಲಕ್ಷ ಜನಸಂಖ್ಯೆಯ ಪ್ಯಾಲಿಸ್ಟೈನ್ ಸಹ ತನ್ನ ಭೂಮಿಯ ಆಕ್ರಮಣದ ವಿರುದ್ಧ ನಿರಂತರವಾಗಿ ಹೋರಾಡುತ್ತಲೇ ಇದೆ. ಶಾಂತಿಗಾಗಿ ನೊಬೆಲ್ ಪ್ರಶಸ್ತಿ ಪಡೆದ ಯಾಸರ್ ಅರಾಫತ್ ಕಾಲದಿಂದಲೂ ಸ್ವಾತಂತ್ರ್ಯ ಹೋರಾಟ ನಡೆಯುತ್ತಿದೆ. ಭಾರತದ ವಿದೇಶಾಂಗ ನೀತಿಯ ಪ್ರಕಾರ ಅದಕ್ಕೆ ಬೆಂಬಲ ಸಹ ಇದೆ. ಆದರೂ ದೀರ್ಘಕಾಲದಿಂದ ಆಗಾಗ ಹಿಂಸಾಚಾರ ಭುಗಿಲೇಳುತ್ತಲೇ ಇದೆ.

ನ್ಯಾಯ ನೀತಿ ಧರ್ಮದ ಆಧಾರದಲ್ಲಿ, ಇಸ್ರೇಲ್ ಎಂಬ ದೈತ್ಯ ಶಕ್ತಿಯ ದೇಶವನ್ನು, ಅದರ ದೌರ್ಜನ್ಯ, ಭೂಪ್ರದೇಶದ ಅತಿಕ್ರಮಣ ಮಾಡಿ ತಮ್ಮ ಅಧಿಪತ್ಯ ಸ್ಥಾಪಿಸಿರುವ ಈಗಲೂ ಎರಡೂ ಕಡೆಯ ಹಿಂಸಾತ್ಮಕ ಘರ್ಷಣೆಗಳಿಗೆ ಕಾರಣವಾಗಿರುವ ವಿವಾದಾತ್ಮಕ ದೇಶವನ್ನು ಭಾರತ ಯಾವ ಕಾರಣಕ್ಕೂ ಅನುಕರಿಸಬಾರದು ಮತ್ತು ಅದು ಸಾಧ್ಯವೂ ಇಲ್ಲ. ಆದರೆ ಅದರ ಶಕ್ತಿ ಸಾಮರ್ಥ್ಯಗಳನ್ನು, ತಂತ್ರಜ್ಞಾನದ ಬಳಕೆಯನ್ನು, ಶ್ರಮಜೀವನವನ್ನು ಒಳ್ಳೆಯ ಉದ್ದೇಶಗಳಿಗಾಗಿ ನಾವು ಕಲಿಯಬಹುದು.

ಕೆಲವು ವಿಷಯಗಳಲ್ಲಿ ಇಸ್ರೇಲ್ ಅತ್ಯಂತ ಸ್ಪೂರ್ತಿದಾಯಕ ಮತ್ತು ಕೆಲವು ವಿಷಯಗಳಲ್ಲಿ ಅತ್ಯಂತ ಕಠೋರ ನೀತಿ ನಿಯಮಗಳನ್ನು ಹೊಂದಿದೆ.

ಕೆಲವು ಪ್ರತಿಭೆಗಳು ಸಾಮರ್ಥ್ಯಗಳು ಸ್ವಾಭಾವಿಕವಾಗಿ ಕೆಲವರಿಗೆ ಒಲಿದಿರುತ್ತವೆ. ಅದು ಕ್ರೀಡೆ, ಸಂಗೀತ, ರಾಜಕೀಯ, ವಿಜ್ಞಾನ, ಕಲೆ, ನಟನೆ ಏನೇ ಇರಲಿ ಅದನ್ನು ಅನುಕರಣೆ ಮಾಡುವುದಕ್ಕೆ ಬದಲಾಗಿ ಒಂದಷ್ಟು ಅಂಶಗಳನ್ನು ಅಳವಡಿಸಿಕೊಳ್ಳಬಹುದು.
ನಮ್ಮದೇ ದಾರಿಯಲ್ಲಿ ಸಾಗುವುದು ಯಾವಾಗಲೂ ಉತ್ತಮ.

ಅದೇರೀತಿ ಇಸ್ರೇಲ್ ನಮಗೆ ಆದರ್ಶ ಮತ್ತು ಎಚ್ಚರಿಕೆ ಎರಡನ್ನೂ ಹೇಳುತ್ತದೆ.

ಇಸ್ರೇಲ್ ಮತ್ತು ಪ್ಯಾಲಿಸ್ಟೈನ್ ಎರಡೂ ದೇಶಗಳು ಒಂದು ರೀತಿಯ ದೌರ್ಜನ್ಯಕ್ಕೆ ಬೇರೆ ಬೇರೆ ಕಾರಣಗಳಿಗಾಗಿ ಒಳಗಾಗಿವೆ.
ಏನೇ ಆಗಲಿ ಪ್ಯಾಲಿಸ್ಟೈನ್ ಮತ್ತು ಇಸ್ರೇಲ್ ವಿವಾದವನ್ನು ಆಧುನಿಕ ಕಾಲದ ಹೊಸ ದೃಷ್ಟಿಕೋನದಿಂದ ಮತ್ತೊಮ್ಮೆ ವಿಮರ್ಶಿಸಿ ಹೊಸ ಪರಿಹಾರ ಕಂಡುಕೊಳ್ಳಬೇಕಿದೆ. ಇತಿಹಾಸದ ನೆನಪುಗಳು ಮತ್ತು ವಾಸ್ತವಗಳು ಏನೇ ಇರಲಿ ಕನಿಷ್ಠ ಮುಂದಿನ ಪೀಳಿಗೆಗಾಗಿ ಎರಡೂ ದೇಶಗಳು ಹೊಂದಾಣಿಕೆಯನ್ನು ಮಾಡಿಕೊಳ್ಳುವುದು ಅನಿವಾರ್ಯ.
ಇಲ್ಲದಿದ್ದರೆ ಹಿಂಸಾಚಾರ ಎರಡೂ ದೇಶಗಳ ನಾಶಕ್ಕೆ ಕಾರಣವಾಗುತ್ತದೆ ಮತ್ತು ಅನ್ಯಾಯವಾಗಿ ಅನೇಕ ಜೀವಗಳು ಜಾಗದ ಕಾರಣಕ್ಕೆ ಉಸಿರು ನಿಲ್ಲಿಸಬೇಕಾಗುತ್ತದೆ.

ವಿಶ್ವದ ಬಲಿಷ್ಠ ರಾಷ್ಟ್ರಗಳು ಮತ್ತು ವಿಶ್ವಸಂಸ್ಥೆ ಈ ವಿವಾದ ಬಗೆಹರಿಸಲು ಆದ್ಯತೆ ನೀಡಬೇಕು…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ.

ಬರಹ:
ವಿವೇಕಾನಂದ ಎಚ್. ಕೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...