ಕಾರಾಗೃಹ ಬಂಧಿಗಳಿಗೆ ಮಾನಸಿಕ ಒತ್ತಡ ಕಡಿಮೆಗೊಳಿಸುವ ಸಲುವಾಗಿ ಜಾನಪದ ಸೊಗಡಿನ ಸಂಗೀತ ಕಾರ್ಯಕ್ರಮ ಆಯೋಜಿಸಿ ಮನರಂಜಿಸುವ ಮೂಲಕ ಬಂಧಿಗಳಲ್ಲೂ ಸಂಗೀತವನ್ನು ಅಭ್ಯಾಸಿಸಿ ಹಾಡಿಸಿರುವುದು ಅತ್ಯಂತ ಸಂತೋಷದ ಸಂಗತಿ ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕ ವೇದಮೂರ್ತಿ ಹೇಳಿದರು.
ಚಿಕ್ಕಮಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯ, ಪರಿಷತ್, ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್ ಹಾಗೂ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ನಡೆದ ಸೆರೆಮನೆಯಲ್ಲಿ ಸರಿಗಮ ಕುರಿತ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬಿಡುವಿನ ವೇಳೆ ಅಥವಾ ಅತಿಯಾದ ಕೆಲಸದಲ್ಲಿ ಒತ್ತಡದಿಂದ ಬಳಲುವವರು ಸ್ವಲಮಟ್ಟಿಗೆ ವಿಶ್ರಾಂತಿ ಪಡೆಯಲು ಸಂಗೀತ ಅದ್ಬುತ ಸಾಧನ. ನಾಡಿನ ಹಿರಿಯ ಗಾಯಕರಾದ ಸಿ.ಅಶ್ವಥ್ ಅವರು ಜಾನಪದ ಹಾಗೂ ಹಳ್ಳಿ ಸೊಗಡಿನ ಗೀತೆಗಳನ್ನು ಅತ್ಯಂತ ಸೊಗಸಾಗಿ ಹಾಡಿರುವ ಧ್ವನಿಯನ್ನು ಒಮ್ಮೆ ಆನಂದಿಸಿದರೆ ಮನಸ್ಸಿನ ಒತ್ತಡ ನಿವಾರಣೆಯಾಗಲಿದೆ ಎಂದು ತಿಳಿಸಿದರು.
ಕಾರಾಗೃಹ ಬಂಧಿಗಳಾಗಿರುವವರು ಆಕಸ್ಮಿಕ ಜರುಗುವ ತಪ್ಪುಗಳಿಗೆ ಅಥವಾ ಇನ್ಯಾರೋದು ತಪ್ಪುಗ ಳಿಗೆ ಬಂಧಿಗಳಾಗುತ್ತಾರೆ. ಅಂತಹವರು ಜೈಲಿನಲ್ಲಿರುವಷ್ಟು ದಿನಗಳು ಪಶ್ಚಾತ್ತಾಪವೆಂದು ಪರಿಗಣಿಸಬೇಕು. ಮುಂದೆ ಈ ರೀತಿ ಜೀವನದಲ್ಲಿ ತಪ್ಪುಗಳಾಗದಂತೆ ತಿದ್ದಿಕೊಂಡು ಉತ್ತಮ ಜೀವನ ನಡೆಸಲು ಮುಂದಾ ಗಬೇಕು ಎಂದು ಹೇಳಿದರು.
ಅರಳಗುಪ್ಪೆ ಮಲ್ಲೇಗೌಡ ಆಸ್ಪತ್ರೆಯ ಸ್ತ್ರೀ ಮತ್ತು ಪ್ರಸೂತಿ ತಜ್ಞ ಡಾ|| ಪುಟ್ಟಪ್ಪ ಮಾತನಾಡಿ ಕಾರಾಗೃಹ ಇಲಾಖೆಯ ಅಧೀಕ್ಷಕರ ತಂಡವು ಬಂಧಿಗಳಿಗೆ ವಿವಿಧ ರೀತಿಯ ತರಬೇತಿ ಹಾಗೂ ಮನಸ್ಸನ್ನು ಖಿನ್ನತೆ ಗೆ ಒಳಗಾಗದಂತೆ ಸಂಗೀತ, ಕೌಶಲ್ಯ ತರಬೇತಿ ಸೇರಿದಂತೆ ಅನೇಕ ಕಾರ್ಯಕ್ರಮ ಆಯೋಜಿಸಿ ನಿರಂತರ ವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಜಯಕರ್ನಾಟಕ ಸೇನೆ ಜಿಲ್ಲಾಧ್ಯಕ್ಷ ಕೆ.ಆರ್.ಅನಿಲ್ಕುಮಾರ್ ಮಾತನಾಡಿ ಕಾರಾಗೃಹದಲ್ಲಿ ಉತ್ತಮ ಆಡಳಿತ, ಆವರಣದ ಸುತ್ತಮುತ್ತಲು ಸ್ವಚ್ಚತೆ, ಪರಿಸರ ಬೆಳೆಸಿ ಕಾಪಾಡುವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಗಮನಿಸಿದರೆ ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಉತ್ತಮ ಸಂಸ್ಥೆ ಎಂದು ಹೆಸರು ಪಡೆದುಕೊಳ್ಳಲು ಸಂದೇಹವಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರಾಗೃಹ ಜೈಲರ್ ಎಂ.ಕೆ.ನೆಲಧರಿ ವಹಿಸಿದ್ದರು. ಇದೇ ವೇಳೆ ಮಲ್ಲಿಗೆ ಸುಧೀರ್ ತಂಡ ಬಂಧಿಗಳಿಗೆ ಬಾರಿಸು ಕನ್ನಡಿ ಡಿಂಡಿಮವಾ ಸೇರಿದಂತೆ ವಿವಿಧ ಗೀತೆಗಳನ್ನು ಅಭ್ಯಾಸಿಸಿ ವೇದಿಕೆಯಲ್ಲಿ ಹಾಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಮಂಜುಳಾ ಮಹೇಶ್, ಸಂಚಾಲಕ ಸುರೇಶ್, ಬೀರೂರು ಮಲ್ಲಿಗೆ ಬಳಗದ ಅಧ್ಯಕ್ಷೆ ಶ್ರೀಮತಿ ಸ್ವರ್ಣ ಗುರುನಾಥ್, ಜಯಕರ್ನಾಟಕ ಉಪಾಧ್ಯಕ್ಷ ಎನ್.ವಿನಯ್, ಕಾರಾಗೃಹ ಶಿಕ್ಷಕ ರಾಜಕುಮಾರ್, ಹಾಗೂ ಸಿಬ್ಬಂದಿಗಳು ಹಾಜರಿದ್ದರು.