ಶಿವಮೊಗ್ಗ : ನಾಯಕತ್ವ ಗುಣ, ಜೀವನ ಮೌಲ್ಯ ಹಾಗೂ ಸಾಮಾಜಿಕ ಕಳಕಳಿಯ ಅರಿವು ಮೂಡಿಸುವಲ್ಲಿ ಇಂಟರ್ಯಾಕ್ಟ್ ಕ್ಲಬ್ ಸಹಕಾರಿ ಆಗುತ್ತದೆ ಎಂದು ರೋಟರಿ ಸಹಾಯಕ ಗವರ್ನರ್ ಡಾ. ಗುಡದಪ್ಪ ಕಸಬಿ ಹೇಳಿದರು.
ಶಿವಮೊಗ್ಗ ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಚಂದನ ಸಭಾಂಗಣದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ವತಿಯಿಂದ ವಲಯ 10 ರ ಇಂಟರ್ಯಾಕ್ಟ್ ಕ್ಲಬ್ ಶಾಲೆಗಳ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿಕಸನ – ವಲಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಇಂಟರ್ಯಾಕ್ಟ್ ಕ್ಲಬ್ ನಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಶಿಕ್ಷಣ ಹಂತದಿಂದಲೇ ಸಮಾಜಮುಖಿ ಆಲೋಚನೆ ಬೆಳೆಯುತ್ತದೆ. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕಾರಿ ಆಗುತ್ತದೆ. ವಿದ್ಯಾರ್ಥಿಗಳು ಕ್ರಿಯಾಶೀಲರಾಗಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಜೀವನದಲ್ಲಿ ಉತ್ತಮ ಅವಕಾಗಳು ಸಿಗಲಿದೆ. ನಿಮ್ಮ ಆಸಕ್ತ ಕ್ಷೇತ್ರದಲ್ಲಿ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ತರಬೇತಿ ಮುಖಾಂತರ ವೃತ್ತಿಯಲ್ಲಿ ಯಶಸ್ಸು ಸಾಧಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯು ಸನ್ಮಾರ್ಗದಲ್ಲಿ ಮುನ್ನಡೆಯಬೇಕು ಎಂದರು.
ರೋಟರಿ ಶಿವಮೊಗ್ಗ ಕ್ಲಬ್ ಅಧ್ಯಕ್ಷ ಎನ್.ವಿ.ಭಟ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ ಹಾಗೂ ನಿಸ್ವಾರ್ಥ ಸೇವಾ ಮನೋಭಾವ ವೃದ್ಧಿಸುವಲ್ಲಿ ಇಂಟರ್ಯಾಕ್ಟ್ ಕ್ಲಬ್ ಸಹಕಾರಿ ಆಗುತ್ತದೆ. ವಿದ್ಯಾರ್ಥಿಗಳಿಗೆ ಉಪಯುಕ್ತ ಆಗುವ ಅಧ್ಯಯನ ವಿಧಾನ, ಪರೀಕ್ಷಾ ತಯಾರಿ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಪೂರಕ ತರಬೇತಿ ನೀಡಲಾಗುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಮನೆ ಮತ್ತು ಸುತ್ತಮುತ್ತಲಿನ ಪರಿಸರ ಆವರಣವನ್ನು ಸ್ವಚ್ಛವಾಗಿ ಇಡುವ ಬಗ್ಗೆ ಮನೆ ಹಿರಿಯರಿಗೆ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಎಲ್ಲೆಂದರಲ್ಲಿ ಕಸ ಎಸೆಯಬಾರದು. ಉತ್ತಮ ಪರಿಸರ ನಿರ್ಮಾಣ ಮಾಡಲು ಎಲ್ಲರ ಸಹಕಾರ ಮುಖ್ಯ ಎಂದು ತಿಳಿಸಿದರು.
ಇಂದಿನ ದಿನಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯದಂತೆಯೇ ಇ-ತ್ಯಾಜ್ಯ ಕೂಡ ಭೂಮಿಗೆ ಹಾನಿ ಉಂಟುಮಾಡುತ್ತಿದೆ. ಇ-ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡುವುದರಿಂದ ವಿಷಪದಾರ್ಥಗಳು ಭೂಮಿ ಸೇರುತ್ತವೆ. ಆದ್ದರಿಂದ ಈಗಿನಿಂದಲೇ ಎಚ್ಚೆತ್ತುಕೊಂಡು ವೈಜ್ಞಾನಿಕವಾಗಿ ಇ-ತ್ಯಾಜ್ಯ ವಿಲೇವಾರಿ ಮಾಡಬೇಕು ಎಂದರು.
ವಲಯ 10 ಇಂಟರ್ಯಾಕ್ಟ್ ಕೋ ಆರ್ಡಿನೇಟರ್ ಕಿಶೋರ್ ಶಿರ್ನಾಳಿ ಮಾತನಾಡಿ, ಇಂಟರ್ಯಾಕ್ಟ್ ಕ್ಲಬ್ ನಲ್ಲಿರುವ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಸೇವಾ ಚಟುವಟಿಕೆಗಳನ್ನು ನಾಯಕತ್ವ ವಹಿಸಿಕೊಂಡು ಮುನ್ನಡೆಸಬೇಕು. ಇದರಿಂದ ಪರಸ್ಪರ ಸಂವಹನ ಕೌಶಲ್ಯ ವೃದ್ಧಿ ಆಗುತ್ತದೆ ಎಂದು ತಿಳಿಸಿದರು.
ಅಧ್ಯಯನ ವಿಧಾನ, ಏಕಾಗ್ರತೆ, ಪರೀಕ್ಷಾ ತಯಾರಿ, ಉತ್ತಮ ಹವ್ಯಾಸ ಹಾಗೂ ವ್ಯಕ್ತಿತ್ವ ವಿಕಸನ, ಸಿದ್ಧತೆಯಿಂದ ಸಾಧನೆಯೆಡೆಗೆ ವಿಷಯಗಳ ಕುರಿತು ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು. ನೂರಾರು ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಪಾಲ್ಗೊಂಡಿದ್ದರು.
ರೋಟರಿ ಶಿವಮೊಗ್ಗ ಕ್ಲಬ್ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಭಟ್, ಇಂಟರ್ಯಾಕ್ಟ್ ಕಮಿಟಿ ಚೇರ್ಮನ್ ಎನ್.ಜಿ.ಉಷಾ, ರೋಟರಿ ಕ್ಲಬ್ ಮಿಡ್ ಟೌನ್ ಅಧ್ಯಕ್ಷೆ ವೀಣಾ ಸುರೇಶ್, ವೀರಣ್ಣ ಹುಗ್ಗಿ, ವಿಲಿಯಂ ಡಿಸೋಜಾ, ಕವಿತಾ ಸುಧೀಂದ್ರ, ಉದಯಶಂಕರ ಶಾಸ್ತ್ರಿ, ಗಾಯತ್ರಿ ಸುಮತೀಂದ್ರ ಮತ್ತಿತರರು ಉಪಸ್ಥಿತರಿದ್ದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.