ಇತ್ತೀಚೆಗೆ ರಾಜ್ಯದ ರಾಜಕೀಯದಲ್ಲಿ ಅನಿರೀಕ್ಷಿತ ಏರುಪೇರುಗಳು ಕಂಡುಬರುತ್ತಿವೆ. ವಿವಿಧ ಪಕ್ಷಗಳ ನಾಯಕರು ನೀಡುವ ಹೇಳಿಕೆಗಳು ಚಾರಿತ್ರ್ಯ ಹನನ, ಹೈಕಮಾಂಡ್ ಗೆ ಇರಿಸು ಮುರಿಸು, ಪಕ್ಷಗಳ ಮುಖಕ್ಕೆ ಮಸಿ ಬಳಿಯುವಂತಹ ಪ್ರಸಂಗಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ.
ಪಕ್ಷ ಬಿಟ್ಟು ಬೇರೆ ಪಕ್ಷ ಸೇರುವ ಅಭಿಯಾನಗಳು ನಡೆಯುತ್ತವೆ. ರಾಜ್ಯದ ರಾಜಕಾರಣದಲ್ಲಿ ಗಮನಸೆಳೆಯುವ ಸಂಗತಿ ಎಂದರೆ ಜೆಡಿಎಸ್ ಕಟ್ಟಾಳು ವೈ.ಎಸ್.ವಿ. ದತ್ತಾ ಅವರು ಪಕ್ಷಕ್ಕೆ ಗುಡ್ ಬೈ ಹೇಳಿರುವುದು.
ದತ್ತಣ್ಣ, ಕಣ್ಣು ಬಿಟ್ಟಿದ್ದೇ, ದೇವೇಗೌಡರ ರಾಜಕೀಯ ಆಶ್ರಯದಲ್ಲಿ. ದೀರ್ಘಕಾಲ ಬೆಳೆದು ತಮ್ಮ ರಾಜಕೀಯ ನೆಲೆಯನ್ನ ಜೆಡಿಎಸ್ ನಲ್ಲಿ ಗುರುತಿಸಿಕೊಂಡಿದ್ದರು.
ಎಂಎಲ್ ಸಿ ಆದರು. ನಂತರ ಕಡೂರು ಕ್ಷೇತ್ರದ ಶಾಸಕರೂ ಆಗಿದ್ದರು. ನಂತರ ಬಿಜೆಪಿ ಅಲೆಯಲ್ಲಿ ಪರಾಭವಗೊಂಡಿದ್ದರು. ಜೆಡಿಎಸ್ ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷರು ಆಗಿದ್ದರು.
ಆದರೆ ,ದೊಡ್ಡ ಪ್ರಶ್ನೆ… ದತ್ತ ಯಾಕೆ ಪಕ್ಷ ಬಿಟ್ಟರು?
ಇತ್ತೀಚೆಗೆ ಜೆಡಿಎಸ್ ಕುಮಾರಣ್ಣನವರು ಸಾಮಾಜಿಕ ಜಾಲತಾಣದಲ್ಲಿ ದತ್ತಣ್ಣ ಅವರ ಬಗ್ಗೆ ಖಾರವಾಗಿಯೇ ಮಾತನಾಡಿದ ದೃಶ್ಯ ಕಂಡು ಬಂದಿತು.
ಅವರನ್ನ, ದೇವೇಗೌಡರ ಮಾನಸ ಪುತ್ರ ಅಂತ ನೀವು ಮಾಧ್ಯಮದವರು ಬರೀ ಬೇಡ್ರಿ… ಅಂತಲೇ ಹೇಳಿದ್ದಾರೆ.
ಇನ್ನೊಂದೆಡೆ ದತ್ತಣ್ಣ ಅವರು ಪಕ್ಷ ತೆರೆಯುವ ನಿರ್ಧಾರದ ಬಗ್ಗೆ ನೀಡಿದ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿದೆ. ದೇವೇಗೌಡರ ಹೇಳಿಕೆ ಮತ್ತು ಕುಮಾರಣ್ಣ ಅವರ ಹೇಳಿಕೆಗಳು ಪಕ್ಷದಲ್ಲಿ ಭಿನ್ನ-ಭಿನ್ನವಾಗಿ ಬರುತ್ತಿವೆ. ಅದನ್ನ ತಾನು ಅವರ ಗಮನಕ್ಕೆ ತಂದಿದ್ದೇನೆ ಎಂದಿದ್ದಾರೆ ದತ್ತಣ್ಣ.
ಜೆಡಿಎಸ್ ಪಕ್ಷದ ಅಭಿಮಾನವನ್ನೇ ಹಾಸಿಹೊದ್ದುಕೊಂಡಿದ್ದ ದತ್ತಣ್ಣ ಅವರ ಕೊಡುಗೆ ಆ ಪಕ್ಷಕ್ಕೆ ಕಡಿಮೆಯೇನಿಲ್ಲ… ಆದರೆ, ದೇವೇಗೌಡರನ್ನು ಮೀರಿದ ಶಕ್ತಿಯಿಂದ ಅವರಿಗೆ ‘ ಕೊಕ್ ‘ ಗ್ಯಾರೆಂಟಿ ಯಿತ್ತೋ ಏನೊ?
ದತ್ತಣ್ಣ ಅವರ ಕಾಂಗ್ರೆಸ್ ಸೇರ್ಪಡೆ ಹೆಚ್ಚುವರಿ ಅಂಕ ಸಿಗುತ್ತೆ ಅಂತ ಕಾಂಗ್ರೆಸ್ ಎಣಿಕೆ ಸಹಜ. ಪಕ್ಷ ಸೇರುವುದು, ಬಿಡುವುದು ಅವರವರ ವೈಯಕ್ತಿಕ. ಆದರೆ, ಪಕ್ಷಾಂತರ ಪರ್ವದಲ್ಲಿ ಹಿನ್ನೆಲೆಯ ಬಗ್ಗೆ ಸಾಮಾನ್ಯರು ಲೆಕ್ಕಚಾರ ಹಾಕೇ ಹಾಕುತ್ತಾರೆ.
ಪಕ್ಷದಲ್ಲಿ ಅವರಿಗೆ ಬೆಲೆ ಇಲ್ಲ. ಶಾಸಕರನ್ನಾಗಿ ಮಾಡಲು ಟಿಕೆಟ್ ನೀಡಲು ಇಷ್ಟವಿಲ್ಲ. ಅಧಿಕಾರ ಸಿಗಲಿಲ್ಲ ಅಂತ ಬೇರೆ ಪಾರ್ಟಿ ಸೇರ್ತಾರೆ… ಇವೆಲ್ಲ ಅಂಬೋಣಗಳು.
ಅಚ್ಚರಿ ಎಂದರೆ ದತ್ತಣ್ಣ ಅವರು, ನಾನು ಎಡಪಂಥೀಯ ಎಂಬ ಹೇಳಿಕೆ ಕೊಟ್ಟಿದ್ದಾರೆ. ಇದು ಕಾಂಗ್ರೆಸ್ ನಾಯಕರ ಓಲೈಕೆಯಷ್ಟೆ ಇಡೀ ಕಾಂಗ್ರೆಸ್ ಎಡಪಂಥೀಯರಿಗೆ ಮಣೆ ಹಾಕಿದೆ ಎಂಬ ಅಭಿಪ್ರಾಯ ಮೂಡಿಸಬಹುದು.
ಯಾವುದೇ ಷರತ್ತಿಲ್ಲದೇ ಕಾಂಗ್ರೆಸ್ ಸೇರಿರುವೆ ಎಂದಿದ್ದಾರೆ. ಶಾಸಕರಾಗಿದ್ದಾಗಿನ ಅವಧಿಯ ಯಾವ ಕಪ್ಪು ಚುಕ್ಕೆಯು ಅವರಿಗಿಲ್ಲ” ಮಿಸ್ಟರ್ ಕ್ಲೀನ್” ಅವರು ಮಿಸ್ಟರ್ ಕ್ಲೀನ್ ಅವರ ಗುಂಪಿಗೆ ಸೇರ್ಪಡೆಯಾಗಿದ್ದಾರೆ.
ಒಂದು ಮಾತಂತೂ ಸತ್ಯ. ದತ್ತಣ್ಣ ಕಾಂಗ್ರೆಸ್ ನಲ್ಲಿ ಮತ್ತೆ ಪ್ರಜ್ವಲಿಸುತ್ತಾರೋ, ಏನೋ ಗೊತ್ತಿಲ್ಲ… ಅಲ್ಲಿ ಬಹಳ ತಾರೆಗಳಿವೆ. ಆದರೆ, ಜೆಡಿಎಸ್ ಅವರನ್ನ ಈ ಪರಿಸ್ಥಿತಿಯಲ್ಲಿ ನಡೆಸಿಕೊಂಡ ಬಗ್ಗೆ ಮಾತ್ರ ಅಸಮಾಧಾನಕರ.