ಚಿಕ್ಕಮಗಳೂರು: ಆಧುನಿಕ ಜಗತ್ತಿನಲ್ಲಿ ಗ್ರಾಮೀಣ ಕ್ರೀಡೆಗಳು ನಶಿಸುತ್ತಿರುವ ಹಿನ್ನೆಲೆಯಲ್ಲಿ ವಾಲಿಬಾಲ್ ಸೇರಿದಂತೆ ವಿವಿಧ ಕ್ರೀಡೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಆಸಕ್ತಿ ತೋರಬೇಕು ಎಂದು ಗ್ರಾಮದ ಹಿರಿಯ ಮುಖಂಡ ಕೆ.ಸಿ.ಧರ್ಮೇಶ್ ಅವರು ಹೇಳಿದರು.
ಚಿಕ್ಕಮಗಳೂರು ಧರಗುಣಿ ಗ್ರಾಮದಲ್ಲಿ ಜೈ ಭೀಮ್ ಯುವಕರ ಸಂಘವು ಆಯೋಜಿಸಿದ್ದ ಗ್ರಾಮೀಣ ಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕ್ರೀಡೆ ಸಾಮಾಜಿಕ ಮತ್ತು ಸಾಮರಸ್ಯವನ್ನು ಸಾರುತ್ತದೆ. ಮನುಷ್ಯ ಜೀವನದಲ್ಲಿ ಆರೋಗ್ಯದಿಂದ ಜೀವಿಸಲು ಕ್ರೀಡೆ ಅತ್ಯಂತ ಸಹಕಾರಿಯಾಗಲಿದೆ ಎಂದ ಅವರು ಸದೃಢ ಶರೀರವನ್ನು ಪಡೆಯಲು ಕ್ರೀಡಾಚಟುವಟಿಕೆಗಳಲ್ಲಿ ಭಾಗವಹಿಸಿದರೆ ದೈಹಿಕವಾಗಿ ಶಕ್ತಿ ತುಂಬುತ್ತದೆ ಎಂದು ತಿಳಿಸಿದರು.
ಕೆ.ಪಿ.ಎಸ್. ಸಂಘಟನೆ ಜಿಲ್ಲಾ ಕಾರ್ಯದರ್ಶಿ ಉಮೇಶ್ಕುಮಾರ್ ಮಾತನಾಡಿ ಧರಗುಣಿ ಗ್ರಾಮವು ಹಲವು ವಿಶೇಷತೆ ಯನ್ನು ಒಳಗೊಂಡಿರುವಂತಹ ಗ್ರಾಮ. ಸ್ಥಳೀಯ ಯುವಕರ ಬಳಗದ ಶ್ರಮದಿಂದ ಪ್ರತಿವರ್ಷವು ಪಂದ್ಯಾವಳಿ ನಡೆಸಿ ಪ್ರೇರೇಪಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜೈಭೀಮ್ ಯುವಕರ ಸಂಘದ ಅರುಣ್ಕುಮಾರ್ ಯುವಕರ ಬಳಗದ ಶ್ರಮದಿಂದ ಇಷ್ಟು ದೊಡ್ಡ ಮಟ್ಟದ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿದೆ. ಪ್ರಸ್ತುತ 60ಕ್ಕೂ ಅಧಿಕ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿವೆ. ಎಲ್ಲಾ ತಂಡಗಳಿಗೂ ಶುಭ ಕೋರಿದರು.
ಈ ಸಂದರ್ಭದಲ್ಲಿ ಹಿರೇಕೊಳಲೆ ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಕುಮಾರ್, ಪೂರ್ಣೇಶ್, ಮಾಜಿ ಸದಸ್ಯ ಸುರೇಶ್, ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ.ಮಂಜುನಾಥ್, ಜೈ ಭೀಮ್ ಯುವಕರ ಸಂಘದ ಮುಖಂಡ ಕೆ.ಆರ್.ಮಂಜುನಾಥ್, ಕಬ್ಬಿನಹಳ್ಳಿ ಶಾಲೆಯ ಮುಖ್ಯೋಪಾಧ್ಯಾಯ ಸಿದ್ದೇಶ್ವರ್, ಅಂಗನವಾಡಿ ಶಿಕ್ಷಕಿ ಕು.ಕೃಪ.ಕೆ.ಎಲ್. ಮುಖಂಡರುಗಳಾದ ಕೆ.ಕೆ.ಮೋಹನ್, ಅಜೀಜ್, ದುಗ್ಗೇಶ್, ವಸಂತ್ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.