ಚಿಕ್ಕಮಗಳೂರು: ಜ್ಞಾನದೇಗುಲದಲ್ಲಿ ಗುರುಗಳು ಕಲಿಸುವ ಪಾಠವನ್ನು ಕರಗತ ಮಾಡಿಕೊಂಡು ಮುಂದಿನ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಗಳಿಸಲು ಮಕ್ಕಳು ಪ್ರಯತ್ನಿಸಬೇಕು ಎಂದು ಸಫಾಯಿ ಕರ್ಮಚಾರಿ ನಿಗಮದ ಅಧ್ಯಕ್ಷ ಕೆ.ಪಿ.ವೆಂಕಟೇಶ್ ಅವರು ಹೇಳಿದರು.
ಚಿಕ್ಕಮಗಳೂರಿನ ಕುರುವಂಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿದೆಸೆಯಲ್ಲಿ ಮಕ್ಕಳು ಕಠಿಣ ಶ್ರಮವಹಿಸಿ ವಿದ್ಯಾಭ್ಯಾಸದಲ್ಲಿ ತೊಡಗಿದರೆ ಸಮಾಜದಲ್ಲಿ ಉನ್ನತ ಮಟ್ಟದ ಹುದ್ದೆ ಅಲಂಕರಿಸಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ಮಕ್ಕಳು ಶಾಲೆಯಲ್ಲಿ ಆಯೋಜಿಸುವ ಕ್ರೀಡಾ ಚಟುವಟಿಕೆ, ರಸಪ್ರಶ್ನೆ ಸ್ಪರ್ಧೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು. ತಮ್ಮಲ್ಲಿರುವ ಪ್ರತಿಭೆಯನ್ನು ಶಿಕ್ಷಕರ ತಿಳಿಸುವ ಮೂಲಕ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಮುಂದಾಗಬೇಕು ಎಂದು ತಿಳಿಸಿದರು.
ಗ್ರಾಮೀಣ ಶಾಲೆಯ ಮಕ್ಕಳು ಖಾಸಗೀ ಶಾಲೆಯ ಮಕ್ಕಳಿಗಿಂತ ಹೆಚ್ಚು ಕ್ರಿಯಾಶೀಲರಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ ಮತ್ತು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸುತ್ತಿದ್ದು, ಇದಕ್ಕೆ ಪೂರಕವಾಗಿ ಶಾಲಾ ಶಿಕ್ಷಕರು ಕಾರ್ಯನಿರ್ವಹಿಸಿದ್ದಲ್ಲಿ ರಾಜ್ಯಮಟ್ಟದಲ್ಲಿ ಮಕ್ಕಳು ಹೆಸರು ಗಳಿಸಬಹುದು ಎಂದು ತಿಳಿಸಿದರು.
ಗ್ರಾಮದ ಶಾಲೆಯು 97 ವರ್ಷಗಳಿಂದ ಮುನ್ನಡೆಯುತ್ತಿದೆ. ಮುಂದಿನ 3 ವರ್ಷಗಳು ಕಳೆದರೆ ಶತಮಾನೋತ್ಸವ ಪೂರೈಸಲಿರುವ ಹಿನ್ನೆಲೆಯಲ್ಲಿ ಆ ಸಮಯಕ್ಕೆ ಗ್ರಾಮದ ಶಾಲೆಯಲ್ಲಿ ದೊಡ್ಡಮಟ್ಟದ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಕರ್ತಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಯತೀಶ್ ಮಾತನಾಡಿ ಮೊಬೈಲ್ ಆನ್ಲೈನ್ ಆಟಗಳಲ್ಲಿ ಹೆಚ್ಚು ತೊಡಗಿಸುತ್ತಿರುವ ಇಂದಿನ ಸಮಯದಲ್ಲಿ ಗ್ರಾಮೀಣ ಶಾಲೆಯ ಮಕ್ಕಳು ದೊಡ್ಡಮಟ್ಟದಲ್ಲಿ ಪಾಲ್ಗೊಂಡು ಪ್ರತಿಭೆ ಅನಾವರಣಗೊಳಿಸುತ್ತಿರುವುದು ಖುಷಿ ತಂದಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಕುಮಾರ್ ಶಾಲೆಯು ಸ್ವಾತಂತ್ರ್ಯ ಪೂರ್ವದ ಮೊದಲೇ ಪ್ರಾರಂಭಗೊಂಡಿದೆ. ಸಾವಿರಾರು ವಿದ್ಯಾರ್ಥಿಗಳು ಅಭ್ಯಾಸ ಮಾಡಿದ್ದಾರೆ. ಕೆಲವು ಮಕ್ಕಳು ಅತ್ಯಂತ ಉನ್ನತ ಹುದ್ದೆಯನ್ನು ಅಲಂಕರಿಸಿ ಗ್ರಾಮಕ್ಕೂ ಹಾಗೂ ಶಾಲೆಗೂ ಕೀರ್ತಿ ತರುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಇದೇ ವೇಳೆ ಶಾಲೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಂಡು ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನೇತ್ರ ಕುಮಾರ್, ಸದಸ್ಯರಾದ ಮೋಹನ್, ಲೋಕೇಶ್, ಸೌಮ್ಯ ಪರಮೇಶ್, ಪುಟ್ಟಸ್ವಾಮಿಶೆಟ್ಟಿ, ರೇಖಾ ಶಂಕರ್, ಆಶಾ ಗುರುಸ್ವಾಮಿ, ಪಿಡಿಓ ಪ್ರಕಾಶ್, ಶಾಲೆಯ ಹಳೆಯ ಶಿಕ್ಷಕ ವಿಜಯಕುಮಾರ್, ವ್ಯವಸಾಯ ಸಹಕಾರ ಸಂಘದ ಅಧ್ಯಕ್ಷ ಜಗದೀಶ್, ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷ ಗಂಗಪ್ಪ, ಕೆ.ಟಿ.ಮರಿಶೆಟ್ಟಿ ಮತ್ತು ಗ್ರಾಮಸ್ಥರು, ಮಕ್ಕಳು ಉಪಸ್ಥಿತರಿದ್ದರು.