ಸಮಾಜಮುಖಿ ಮನೋಭಾವ ಬೆಳೆಸುವಲ್ಲಿ ಹಾಗೂ ನಾಯಕತ್ವ ಬೆಳೆಸುವಲ್ಲಿ ಇಂಟರ್ಯಾಕ್ಟ್ ಕ್ಲಬ್ ಸಹಕಾರಿಯಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ಅಧ್ಯಕ್ಷ ಸರ್ಜಾ ಜಗದೀಶ್ ಹೇಳಿದರು.
ಶಿವಮೊಗ್ಗದ ಮಿಳಘಟ್ಟ ಸರ್ಕಾರಿ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ಇಂಟರ್ಯಾಕ್ಟ್ ಕ್ಲಬ್ಗೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ವೃದ್ಧಿಸುವ ಜತೆಯಲ್ಲಿ ಸಮಾಜಕ್ಕೆ ಕೊಡುಗೆ ನೀಡಲು ಆರಂಭಿಸುತ್ತಾರೆ. ನಾಯಕತ್ವ ಭಾವದಿಂದ ಎಲ್ಲರೂ ಮುಂದಾಳತ್ವ ವಹಿಸಿ ಸೇವೆ ಮಾಡಬೇಕು ಎಂದು ತಿಳಿಸಿದರು.
ಮಾಜಿ ಸಹಾಯಕ ಗವರ್ನರ್ ರವೀಂದ್ರನಾಥ ಐತಾಳ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ಲಬ್ ಆಶ್ರಯದಲ್ಲಿ ಆಯೋಜಿಸುವ ಸಾಮಾಜಿಕ ಕಾರ್ಯಗಳಲ್ಲಿ ವಿದ್ಯಾರ್ಥಿಗಳು ನಿರಂತರವಾಗಿ ಪಾಲ್ಗೊಳ್ಳಬೇಕು. ಇದರಿಂದ ಸ್ವಯಂ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ತರಬೇತಿ ಹಾಗೂ ವ್ಯಕ್ತಿತ್ವ ವಿಕಸನ ಸೇರಿದಂತೆ ಮಕ್ಕಳ ಶಿಕ್ಷಣಕ್ಕಾಗಿ ಅನುಕೂಲವಾಗುವ ಹಾಗೂ ಸೇವಾ ಕಾರ್ಯಗಳನ್ನು ನಡೆಸಲಾಗುತ್ತದೆ. ಉತ್ತಮ ಮೌಲ್ಯಯುತ ಅಂಶಗಳನ್ನು ಕ್ಲಬ್ ಮುಖಾಂತರ ಕಲಿಸಲಾಗುತ್ತದೆ ಎಂದು ಹೇಳಿದರು.
ಮಿಳಘಟ್ಟ ಸರ್ಕಾರಿ ಪ್ರೌಢಶಾಲೆಯಲ್ಲಿ ನೂತನ ಇಂಟರ್ಯಾಕ್ಟ್ ಕ್ಲಬ್ ನ ನೂತನ ಅಧ್ಯಕ್ಷರಾಗಿ ನಿರಂಜನ ಮತ್ತು ಕಾರ್ಯದರ್ಶಿಯಾಗಿ ಪಾರ್ಥ ಅವರು ಆಡಳಿತ ಮಂಡಳಿಯೊಂದಿಗೆ ಅಧಿಕಾರ ಸ್ವೀಕರಿಸಿದರು. ಇಂಟರ್ಯಾಕ್ಟ್ ಕ್ಲಬ್ ನಿಯಮಾವಳಿಯನ್ನು ಯುವಜನ ನಿರ್ದೇಶಕ ಬಸವರಾಜಪ್ಪ ತಿಳಿಸಿದರು.
ಮುಖ್ಯಶಿಕ್ಷಕ ಉಮಾಶಂಕರ ಮಾತನಾಡಿ, ಮಕ್ಕಳಲ್ಲಿ ಯುವ ಮುಖಂಡತ್ವ, ಸೇವಾ ಮನೋಭಾವ ಮತ್ತು ಅಂತರಾಷ್ಟ್ರೀಯ ತಿಳುವಳಿಕೆಗೆ ಒತ್ತು ನೀಡುವ ರೋಟರಿಯ ಕಾರ್ಯ ಪ್ರಶಂಸನೀಯ ಎಂದು ತಿಳಿಸಿದರು.
ಸಭೆಯಲ್ಲಿ ವಾರಿಜಾ ಜಗದೀಶ್ ಕಾರ್ಯಕ್ರಮದ ನಿರೂಪಣೆ ಮಾಡಿದರು. ಕಾರ್ಯದರ್ಶಿ ವೆಂಕಟೇಶ ವಂದನಾರ್ಪಣೆ ಮಾಡಿದರು.