ವಿಜಯಪುರದ ಜ್ಞಾನಯೋಗಾಶ್ರಮದ ಯೋಗಿ
ಶ್ರೀ ಸಿದ್ಧೇಶ್ವರ ಸ್ವಾಮಿಗಳು ಕೊನೆಯುಸಿರೆಳೆದ ಸಂಗತಿ ನಮಗೆಲ್ಲಾ ಜೀರ್ಣಿಸಿಕೊಳ್ಳಲಾಗುತ್ತಿಲ್ಲ.
ನಡೆದಾಡುವ ದೇವರು ಎಂದೇ
ಭಕ್ತಿಯಿಂದ ಕರೆಸಿಕೊಂಡ ಗುರುಗಳೀಗ ಬರೀ ನೆನಪಿನ ಚೇತನ.
ತಮ್ಮ ಪ್ರವಚನಗಳಿಂದ ಆಧ್ಯಾತ್ಮದ
ಸುಧೆ ಹಂಚಿದ ಸಂತರಿಂದ ಪ್ರಭಾವಿತರಾದವರೆಷ್ಟೋ ಮಂದಿ.
ತಮ್ಮ ವಿಚಾರಧಾರೆಗಳಿಂದ ಕರ್ನಾಟಕದ ವಿವೇಕಾನಂದರೆಂದೇ ಖ್ಯಾತರಾಗಿದ್ದರು. ಎಂಭತ್ತೆರಡು ವರ್ಷಗಳ ತುಂಬು ಬಾಳ್ವೆಯ ಜೀವಕ್ಕೆ ವಯೋ ಸಹಜ ಅನಾರೋಗ್ಯ ಕಾಡಿತ್ತು.
ಅವರ ಉಪನ್ಯಾಸಗಳಿಂದ ಎಷ್ಟೋ ಜನ ಬದಲಾಗಿದ್ದಾರೆ. ಜೀವನದ ಸತ್ಯ ಕಂಡುಕೊಂಡಿದ್ದಾರೆ.
ಬದುಕೇ ನಶ್ವರ.ಆಸೆಗಳ ಬೆಂಬತ್ತುವ
ಮಾನವರ ಅಜ್ಞಾನದ ಬಗ್ಗೆ ನಸುನಗುತ್ತಾ ಮರುಳ ಮನುಜ ಎಂದು ಜ್ಞಾನೋದಯ ಮೂಡಿಸುವ ಅವರ ನುಡಿಗಳಿಗೆ ಮಾಂತ್ರಿಕ ಸ್ಪರ್ಶವಿತ್ತು.
ಅವರ ಕೊನೆಯಾಸೆಯನ್ನ ಬರೆದಿಟ್ಟಿದ್ದಾರೆ.
ಸ್ಮಾರಕ ನಿರ್ಮಿಸ ಬೇಡಿ.
ದೇಹವನ್ನ ಅಗ್ನಿಯಲ್ಲಿ ಸುಡಬೇಕು.
ಶ್ರಾದ್ಧ ಕರ್ಮ ಗಳು ಬೇಡ.
ಚಿತಾಭಸ್ಮವನ್ನ ನದಿ ಸಾಗರಗಳಲ್ಲಿ ವಿಸರ್ಜಿಸಬೇಕು.
ಬದುಕೇ ಭ್ರಮೆ.ಅದರಲ್ಲಿ ಸನ್ಮಾನ ಸತ್ಕಾರ, ಪದವಿ , ಬಿರುದು, ಪಾರಿತೋಷಿ ಮುಂತಾಗಿ ಎಲ್ಲವನ್ನೂ
ನಿರಾಕರಿಸಿದ ಸರಳ ಮನುಷ್ಯ.
ಪದ್ಮಶ್ರೀ ಮತ್ತು ಡಾಕ್ಟರೇಟ್ ಗಳನ್ನ
ಅತ್ಯಂತ ನಮ್ರವಾಗಿಯೇ ನಿರಾಕರಿಸಿದ್ದರು.
ವರ್ತಮಾನದಲ್ಲಿ ಎಷ್ಟೋ ಪೀಠ ಗುರುಪರಂಪರೆಗಳಿಗೆ ಅವರ ನಡೆ ನುಡಿ ಆದರ್ಶಪ್ರಾಯವಾಗಿದೆ ಎಂದರೆ ಅತಿಶಯೋಕ್ತಿಯಲ್ಲ.
ಅಪಾರ ಶಿಷ್ಯವೃಂದ ಶ್ರೀ ಸಿದ್ಧೇಶ್ವರ ಸ್ವಾಮಿಗಳ ಅಗಲಿಕೆಯಿಂದ ಅಪಾರ ಶೋಕದಲ್ಲಿ ಮುಳುಗಿದೆ.
ಮತ್ತೆ ಅಂತಹ ಚೇತನ ಹುಟ್ಟಿ ಬರಲಿ
ಜ್ಞಾನದೀವಿಗೆ ಬೆಳಗಲಿ ಎಂದು ನಾವು ಹಾರೈಸಬೇಕಷ್ಟೆ.
ಹಿರಿಯ ಅನುಭಾವಿಗೆ ನಮನಗಳು.