ಶಿವಮೊಗ್ಗ ನಗರದ ಮಲಿನ ನೀರು ಶುದ್ದೀಕರಣಗೊಳ್ಳದೆ ತುಂಗೆಯ ಒಡಲು ಸೇರುವುದನ್ನು ನಿರ್ಬಂಧಿಸಿ, ಅದಕ್ಕೆ ಪರ್ಯಾಯವಾಗಿ ನೀರನ್ನು ಬೇರೆಡೆಗೆ ಪರಿವರ್ತಿಸಿ, ಶುದ್ಧೀಕರಣಗೊಳಿಸಿ ತುಂಗಾನದಿಗೆ ಬಿಡುವ ೧೫೧೫.೦೦ಲಕ್ಷ ರೂ.ಗಳ ಯೋಜನೆಗೆ ಶಾಸಕ ಕೆ.ಎಸ್.ಈಶ್ವರಪ್ಪ ಅವರು ಇಂದು ಕೆ.ಆರ್.ವಾಟರ್ವರ್ಕ್ಸ್ ಸಮೀಪದಲ್ಲಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈಗಾಗಲೇ ಸ್ಮಾರ್ಟ್ಸಿಟಿ ಯೋಜನೆಯಡಿ ನಗರದ ಇಮಾಂಬಾಡ, ಮಂಡಕ್ಕಿ ಭಟ್ಟಿ, ಅಯ್ಯಪ್ಪಸ್ವಾಮಿ ದೇವಸ್ಥಾನ, ಕೊಲ್ಲೂರಯ್ಯನ ಬೀದಿ, ಭೀಮೇಶ್ವರ ದೇವಸ್ಥಾನ, ಬಿ.ಸಿ.ಎಂ.ಹಾಸ್ಟೆಲ್ ಹಾಗೂ ಬೆಕ್ಕಿನಕಲ್ಮಠದ ಸಮೀಪ ಸೇರಿದಂತೆ ನದಿ ತೀರದ ೭ಸ್ಥಗಳನ್ನು ಗುರುತಿಸಿ, ನದಿಗೆ ಸೇರುತ್ತಿರುವ ಕೊಳಚೆ ನೀರನ್ನು ತಡೆದು, ಸಂಸ್ಕರಿಸಿ ನದಿಗೆ ಬಿಡುವ ರೂ.೧.೨೮ಕೋ. ವೆಚ್ಚದ ಕಾಮಗಾರಿಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲಿ ಚಾಲನೆ ನೀಡಲಾಗುವುದು.
ಪ್ರಸ್ತುತ ಸಂದರ್ಭದಲ್ಲಿ ಕರ್ನಾಟನ ನಗರ ನೀರು ಸರಬರಾಜು ಮತ್ತು ಒಳಚರಂಡ ಮಂಡಳಿಯ ವತಿಯಿಂದ ತ್ಯಾವರಚಟ್ನಳ್ಳಿ, ಗುಂಡಪ್ಪಶೆಡ್, ಗುರುಪುರ, ಕಂಟ್ರಿಕ್ಲಬ್, ವಿದ್ಯಾನಗರ, ಕೆ.ಆರ್.ವಾಟರ್ವರ್ಕ್ಸ್, ಮಂಡ್ಲಿ ಹಾಗೂ ವಾದಿ-ಎ-ಹುದಾ ಸ್ಥಳಗಳಲ್ಲಿ ನದಿಗೆ ಸೇರುತ್ತಿರುವ ಕೊಳಚೆ ನೀರನ್ನು ನಿಯಂತ್ರಿಸಿ ಬಿಡಲು ೦೯ಸ್ಥಳಗಳನ್ನು ಗುರುತಿಸಲಾಗಿದ್ದು, ೧೫೧೫.೦೦ಲಕ್ಷ ವೆಚ್ಚದ ಕಾಮಗಾರಿಗಳಿಗೆ ಇಂದು ಚಾಲನೆ ನೀಡಲಾಗಿದೆ. ಈ ಕಾಮಗಾರಿಯನ್ನು ಮುಂದಿನ ಒಂದು ವರ್ಷದ ಅವಧಿಯೊಳಗಾಗಿ ಪೂರ್ಣಗೊಳಿಸಿ ಸೇವೆಗೆ ಮುಕ್ತಗೊಳಿಸಲಾಗುವುದು ಎಂದರು.
ನಗರ ಬೆಳೆದಂತೆಲ್ಲಾ ನಗರದ ನಿವಾಸಿಗಳ ಬೇಡಿಕೆಯು ಹೆಚ್ಚುತ್ತಲೇ ಇದೆ. ಅವರ ಆಶಯಗಳಿಗೆ ಪೂರಕವಾಗಿ ಕಾಲಕಾಲಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸಿ, ನಗರದ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗಿದೆ. ಆದಾಗ್ಯೂ ದಿನದ ೨೪ಗಂಟೆಯೂ ನೀರನ್ನು ಕೊಡುವ ಕಾರ್ಯ ಪ್ರಗತಿಯಲ್ಲಿದೆ. ಅಲ್ಲದೇ ಯು.ಜಿ.ಡಿ. ಸಂಪರ್ಕ ವ್ಯವಸ್ಥೆ ಪೂರ್ಣಗೊಂಡಿದ್ದು, ಮನೆಮನೆಗೆ ಸಂಪರ್ಕ ಕಲ್ಪಿಸುವ ಯತ್ನ ಮುಂದುವರೆದಿದೆ ಎಂದರು.
ರಾಷ್ಟಿçÃಯ ಹಸಿರು ನ್ಯಾಯ ಮಂಡಳಿಯ ನಿರ್ದೇಶನದ ಮೇರೆಗೆ ನದಿಗಳ ಪುನರುಜ್ಜೀವನ ಸಲಹಾ ಸಮಿತಿಯ ೩೫ನಗರ ಪಟ್ಟಣಗಳಿಂದ ಉತ್ಪತ್ತಿಯಾಗುವ ಒಳಚರಂಡಿ ತ್ಯಾಜ್ಯದಿಂದಾಗಿ ಕಲುಶಿತಗೊಳ್ಳುತ್ತಿರುವ ರಾಜ್ಯದ 18 ನದಿ ಪ್ರದೇಶಗಳಲ್ಲಿ ಶಿವಮೊಗ್ಗವೂ ಒಂದಾಗಿದೆ. ಆದ್ದರಿಂದ ಶಿವಮೊಗ್ಗ ನಗರದ ಹಲವೆಡೆ ಮಲಿನ ನೀರು ನದಿಪಾತ್ರಕ್ಕೆ ಶುದ್ಧೀಕರಣಗೊಳ್ಳದೇ ಸೇರುವುದನ್ನು ತಡೆಯಲು ಪ್ರಸ್ತುತ ಇರುವ ಒಳಚರಂಡಿ ವ್ಯವಸ್ಥೆಯನ್ನು ಉತ್ತಮಗೊಳಿಸಲು ಉದ್ದೇಶಿಸಲಾಗಿದೆ ಎಂದರು.
ಈ ಯೋಜನೆಯ ಸಮರ್ಪಕ ಅನುಷ್ಠಾನದಿಂದಾಗಿ ತುಂಗೆಗೆ ಮಲಿನ ನೀರುವುದನ್ನು ನಿಯಂತ್ರಿಸಬಹುದಾಗಿದೆ. ಈ ಯೋಜನೆಯ ಅನುಷ್ಠಾನದಲ್ಲಿ ಸಾರ್ವಜನಿಕರೂ ಸಹಕರಿಸುವಂತೆ ಹಾಗೂ ತ್ವರಿತಗತಿಯಲ್ಲಿ ಗುಣಮಟ್ಟದ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಈ ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆಯ ಚನ್ನಬಸಪ್ಪ ಅವರು ಮಾತನಾಡಿ, ನಗರದ ಜನರ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಿ, ಸರ್ಕಾರದಿಂದ ಅನುಷ್ಠಾನಗೊಳಿಸುತ್ತಿರುವ ಶಾಸಕ ಕೆ.ಎಸ್.ಈಶ್ವರಪ್ಪ ಅವರು ಅಭಿನಂದನಾರ್ಹರು ಎಂದರು.
ಈ ಸಂದರ್ಭದಲ್ಲಿ ಮಹಾನಗರಪಾಲಿಕೆಯ ಮಹಾಪೌರ ಶಿವಕುಮಾರ್, ಉಪಮೇಯರ್ ಶ್ರೀಮತಿ ಲಕ್ಷ್ಮೀಶಂಕರ್, ಜ್ಞಾನೇಶ್ವರ್, ಸೂಡಾ ಅಧ್ಯಕ್ಷ ನಾಗರಾಜ್, ಕೆ.ಇ.ಕಾಂತೇಶ್, ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಿಥುನ್ಕುಮಾರ್, ಸ್ಮಾರ್ಟ್ಸಿಟಿ ಇಂಜಿನಿಯರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
