ಸಹ್ಯಾದ್ರಿ ಕಲಾ – ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಆಶ್ರಯದಲ್ಲಿ ಆಯೋಜನೆಗೊಂಡಿರುವ ಕುವೆಂಪು ವಿಶ್ವವಿದ್ಯಾಲಯ ಮಟ್ಟದ 35ನೇ ಅಥ್ಲೆಟಿಕ್ ಕ್ರೀಡಾಕೂಟದ ಸಮಾರೋಪ ಸಮಾರಂಭವು ನೆಹರು ಕ್ರೀಡಾಂಗಣದಲ್ಲಿ ನೆರವೇರಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಎಸ್ ಶಿವಕುಮಾರ್ ಮಹಾಪೌರವರು ಮಹಾನಗರ ಪಾಲಿಕೆ ಶಿವಮೊಗ್ಗ ಇವರು ಆಗಮಿಸಿದ್ದರು. ಅವರು ತಮ್ಮ ಭಾಷಣದಲ್ಲಿ” ಶೈಕ್ಷಣಿಕ ಆಸಕ್ತಿಯ ಜೊತೆಗೆ ಕ್ರೀಡಾ ಆಸಕ್ತಿಯು ಕೂಡ ಯುವಜನತೆಗೆ ಅತಿ ಮುಖ್ಯವಾಗಿದೆ. ರಾಂಕ್ ಪಡೆದ ವಿದ್ಯಾರ್ಥಿಗಳಿಗಿಂತ ಪ್ರತಿಶತ 35 ಅಂಕಗಳನ್ನು ಪಡೆದ ಕ್ರೀಡಾಪಟುಗಳೇ ಹೆಚ್ಚಿನ ಸಾಧಕರಾಗಿ ದೇಶದಲ್ಲಿ ಮಿಂಚುತ್ತಿರುವುದು ನಮಗೆ ಗೊತ್ತಿರುವ ಸಂಗತಿ. ನಮ್ಮ ಆಸಕ್ತಿಯ ಕ್ಷೇತ್ರಗಳನ್ನು ಗುರುತಿಸಿಕೊಂಡು ಆ ದೆಸೆಯಲ್ಲಿ ಯಲ್ಲಿ ಮುಂದುವರಿದರೆ ಅತ್ಯುತ್ತಮ ಸಾಧಕರಾಗಲು ಸಾಧ್ಯವಾಗುತ್ತದೆ. ದೇಶಕ್ಕೆ ಏನಾದರೂ ಕೊಡುಗೆ ಕೊಡುವ ಸಾಧನೆಯು ನಮ್ಮದಾಗಬೇಕಾಗಿದೆ. ಆರೋಗ್ಯವಂತರಾಗಿ ಬದುಕಲು ನಮಗೆ ಕ್ರೀಡೆ ಮತ್ತು ವ್ಯಾಯಾಮ ಪೂರಕ” ಎಂದು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆ ವಹಿಸಿರುವ ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾದ ಶ್ರೀಮತಿ ಅನುರಾಧ ಜಿ ಅವರು, ” ಇಂದಿನ ಶೈಕ್ಷಣಿಕ ವಿದ್ಯಮಾನಗಳಲ್ಲಿ ಕ್ರೀಡೆ ಅತ್ಯಂತ ಅವಶ್ಯಕವಾಗಿದೆ. ಆರೋಗ್ಯವಂತ ಮನಸ್ಸು ಮತ್ತು ದೇಹ ನಮ್ಮದಾಗ ಬೇಕಾದರೆ ಕ್ರೀಡಾ ಹವ್ಯಾಸಗಳಲ್ಲಿ ತೊಡಗಿ ಕೊಳ್ಳಬೇಕು.ಈ ದೇಶದ ಆಸ್ತಿ ಎಂದರೆ ಯುವಜನರು.ಅವರ ಕನಸುಗಳ ಮೇಲೆ ಈ ದೇಶದ ಭವಿಷ್ಯವಿದೆ. ಪಠ್ಯಧಾರಿತ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಯ ಆಸಕ್ತಿಯನ್ನು ಬೆಳೆಸಿಕೊಳ್ಳಲು ಇಂದಿನ ಹೊಸ ಶಿಕ್ಷಣ ನೀ ತಿಯಲ್ಲಿ ಬೇಕಾದಷ್ಟು ಅವಕಾಶವಿದೆ. ಅದನ್ನು ಸೂಕ್ತವಾಗಿ ಬಳಸಿಕೊಂಡು ಹೊಸ ಸಾಧನೆಗಳನ್ನು ಮಾಡಬೇಕಾಗಿದೆ.” ಎಂದು ಹೇಳುತ್ತಾ ವಿಜೇತರಿಗೆ ಹಾಗೂ ಭಾಗವಹಿಸಿದ ಕ್ರೀಡಾಪಟುಗಳಿಗೆ ಶುಭಾಶಯ ಕೋರಿದರು.
ಈ ಕ್ರೀಡಾಕೂಟದಲ್ಲಿ ನೂತನ ದಾಖಲೆಯನ್ನು ಮಾಡಿರುವ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಪುರುಷರ ವಿಭಾಗದ ಸಮಗ್ರ ಚಾಂಪಿಯನ್ ಶಿಪ್ ಡಿವಿಎಸ್ ಕಾಲೇಜು ಪಡೆದುಕೊಂಡರೆ, ಜ್ಞಾನ ಸಹ್ಯಾದ್ರಿ ಶಂಕರಘಟ್ಟ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ತೀರ್ಥಹಳ್ಳಿಯ ತುಂಗಾ ಕಾಲೇಜು ತೃತೀಯ ಸ್ಥಾನವನ್ನು ಪಡೆದುಕೊಂಡಿತು.
ಮಹಿಳಾ ವಿಭಾಗದ ಸಮಗ್ರ ಚಾಂಪಿಯನ್ ಶಿಪ್ ನ್ನು ಶ್ರೀಮತಿ ಇಂದಿರಾಗಾಂಧಿ ಕಾಲೇಜು ಸಾಗರ ವಿದ್ಯಾರ್ಥಿನಿಯರು ಪಡೆದುಕೊಂಡರು.
ಡಿವಿಎಸ್ ಕಾಲೇಜಿನ ವಿದ್ಯಾರ್ಥಿಯಾದ ಶ್ರೀ ಧನಂಜಯ ಅವರು ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಯನ್ನು ಪಡೆದುಕೊಂಡರು. ಅದೇ ಕಾಲೇಜಿನ ಕುಮಾರಿ ಅಕ್ಷತಾ ಅವರು ಮಹಿಳೆಯರ ವಿಭಾಗದ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಯನ್ನು ಪಡೆದುಕೊಂಡರು.
ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾದ ಡಾ.ರಾಜೇಶ್ವರಿ ಎನ್ ಅವರು ಸರ್ವರನ್ನು ಸ್ವಾಗತಿಸಿದರು. ಕ್ರೀಡಾಕೂಟದ ಸಂಚಾಲಕರಾದ ಡಾ. ಶಿವಮೂರ್ತಿ ಅವರು ಸಾಧಕರನ್ನು ಪರಿಚಯಿಸಿದರು. ವಾಣಿಜ್ಯ ಕಾಲೇಜಿನ ಪ್ರಾಚಾರ್ಯರಾದ ಡಾ ವೀಣಾ ಎಂ ಕೆ.ಅವರು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ಧ್ವಜವನ್ನು ಕುಲಸಚಿವರಿಗೆ ಹಸ್ತಾಂತರಿಸಲಾಯಿತು.