ನಾಗರೀಕರು ಮಾನವ ಹಕ್ಕುಗಳಿಗೆ ಹೋರಾಡುವ ಸಲುವಾಗಿ ಬಾಯಿಗೆ ಹಾಕಿಕೊಂಡಿರುವ ಬೀಗವನ್ನು ತೆಗೆದರೆ ಮಾತ್ರ ಹಕ್ಕುಗಳ ಸಮಾನತೆ, ಸ್ವಾತಂತ್ರ್ಯ ಪಡೆಯಲು ಸಾಧ್ಯ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಮಾಹಿತಿ ಸಮಿತಿ ಸಂಸ್ಥಾಪಕ ಅಧ್ಯಕ್ಷ ರಘುಕುಮಾರ್ ಅವರು ಹೇಳಿದರು.
ಚಿಕ್ಕಮಗಳೂರು ತಾಲ್ಲೂಕಿನ ಬ್ಯಾಗದಹಳ್ಳಿ ಗ್ರಾಮದ ಸ.ಕಿ.ಪ್ರಾ.ಶಾಲೆಯಲ್ಲಿ ಸಮಾನ ಪತ್ತಿನ ಸೌಹಾರ್ದ ಸಹಕಾರ ನಿಯಮಿತ ಸಹಯೋಗದೊಂದಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಮಾಹಿತಿ ಸಮಿತಿಯ 2ನೇ ವರ್ಷದ ವಾರ್ಷಿಕೋತ್ಸವ ಹಾಗೂ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ಅಧಿಕಾರಿ ಹಾಗೂ ರಾಜಕಾರಣಿಗಳು ಮಾನವ ಹಕ್ಕುಗಳ ಅರಿವಿಲ್ಲದ ಶೋಷಿತ ಸಮುದಾಯವನ್ನು ತುಳಿಯುತ್ತಾ ಬಂದಿದೆ. ಇವುಗಳ ವಿರುದ್ಧ ಹೋರಾಡಲು ಪ್ರತಿಯೊಬ್ಬ ನಾಗರೀಕರು ಹಕ್ಕುಗಳ ಅರಿವು ಹೊಂದುವುದರ ಜೊತೆಗೆ ಸೂಕ್ತ ದಾಖಲಾತಿ ಒದಗಿಸಿಕೊಂಡು ಕಿರುಕುಳ ನೀಡುವ ಅಧಿಕಾರಿಗಳು ಹಾಗೂ ಇತರರ ವಿರುದ್ಧ ಮೊಖದ್ದಮೆ ದಾಖಲಿಸಬಹುದು ಎಂದರು.
ಪ್ರಸ್ತುತ ಕಾಲಘಟ್ಟದಲ್ಲಿ ನಾಗರೀಕರಾಗಿ ಬದುಕಲು ಮಾನವನ ಹಕ್ಕುಗಳು ಅತಿಮುಖ್ಯವಾಗಿದೆ. ಪ್ರಜಾ ಪ್ರಭುತ್ವದ ಜೀವಂತಿಕೆ ಇರುವುದೇ ನಾಗರೀಕ ಸಮಾಜದ ಸ್ವಾತಂತ್ರ್ಯ ಬದುಕಿನಿಂದ, ಹಾಗಾಗಿ ಸಂವಿಧಾನ ಹಾಗೂ ಕಾನೂನು ನೀಡಿರುವ ಮಾನವ ಹಕ್ಕುಗಳನ್ನು ಬೆಂಬಲಿಸಿ ಬದುಕಬೇಕಾಗಿದೆ ಎಂದರು.
ಸಮಿತಿ ರಾಷ್ಟ್ರೀಯ ಗೌರವಾಧ್ಯಕ್ಷ ರಮಾನಂದ್ ನಾಯಕ್ ಮಾತನಾಡಿ ಸಮಾಜದಲ್ಲಿ ಪೊಲೀಸ್, ರಾಜಕಾರಣಿ ಹಾಗೂ ಸರ್ಕಾರಿ ನೌಕರರುಗಳು ಸೂಕ್ತ ಸಮಯದಲ್ಲಿ ಮಾನವನ ಹಕ್ಕುಗಳಿಗೆ ನ್ಯಾಯಬದ್ಧ ವಾಗಿ ಕಾರ್ಯನಿರ್ವಹಿಸಿದ್ದಲ್ಲಿ ಸಾರ್ವಜನಿಕರಿಗೆ ಎಂದಿಗೂ ತೊಂದರೆಯಾಗುವುದಿಲ್ಲ ಎಂದು ತಿಳಿಸಿದರು.
ಆ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಮಾನವ ಹಕ್ಕುಗಳ ಸಮಿತಿ ಬಗ್ಗೆ ಅರಿವು ಮೂಡಿಸುವ ಸಲುವಾಗಿ ರಾಜ್ಯದ 28 ಜಿಲ್ಲೆ ಹಾಗೂ 5 ಹೊರರಾಜ್ಯಗಳಲ್ಲಿ ಸಮಿತಿ ಕಾರ್ಯನಿರ್ವಹಿಸುತ್ತಿದೆ. ಅನ್ಯಾಯ ಗೊಂಡವರಿಗೆ ನ್ಯಾಯ ಒದಗಿಸುವಲ್ಲಿ ಸಮಿತಿಯು ಕಾರ್ಯನಿರ್ವಹಿಸುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಿತಿ ಜಿಲ್ಲಾಧ್ಯಕ್ಷ ಎಂ.ರಾಜೇಶ್ ಮನುಷ್ಯನು ಲಕ್ಷಣವಂತನಾಗುವ ಮೊದಲು ಮಾನವ ಹಕ್ಕುಗಳ ಅರಿವು ಹೊಂದಿರಬೇಕು. ಇದರಿಂದ ಸಮಾಜದಲ್ಲಿ ನಡೆಯುವ ಅನ್ಯಾಯದ ವಿರುದ್ಧ ಹೋರಾಡುವ ಶಕ್ತನಾಗುತ್ತೇನೆ ಎಂದು ತಿಳಿಸಿದರು.
ಸಮಾನ ಪತ್ತಿನ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಕೆ.ಬಿ.ದೇವರಾಜ್ ಮಾತನಾಡಿ ವ್ಯಕ್ತಿಯ ಸ್ವಾತಂತ್ರ್ಯವನ್ನು ಗೌರವಿಸಿ ಬದುಕುವುದೇ ಮಾನವ ಹಕ್ಕುಗಳನ್ನು ಪಾಲನೆ ಮಾಡಿದಂತೆ. ಪ್ರತಿಯೊಬ್ಬ ಪ್ರಜೆಯೂ ಸ್ವತಂತ್ರವಾಗಿ ಜೀವಿಸುವ ಹಕ್ಕನ್ನು ಪಡೆದಿದ್ದು ಅವುಗಳ ರಕ್ಷಣೆ ಮಾಡುವ ಕಾರಣಕ್ಕಾಗಿ ಪ್ರತಿ ವರ್ಷವು ಡಿ.10 ರಂದು ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಗೀತೆಗಳನ್ನು ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬಳಿಕ,ಮಕ್ಕಳಿಗೆ ಸ್ಕೂಲ್ ಬ್ಯಾಗ್, ಸೂಟ್, ಸಮವಸ್ತç ಸೇರಿದಂತೆ ಅನೇಕ ಪರಿಕರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಮಾನ ಪತ್ತಿನ ನಿರ್ದೇಶಕರಾದ ಎಂ.ಎ.ರವಿಕುಮಾರ್, ಚೇತನ್ ಜಿ ನಾಯಕ್, ಕೆ.ಎನ್.ದೊಡ್ಡೇಗೌಡ, ಟಿ.ಎಂ.ದೇವಿಕಾ, ಹೆಚ್.ಎಂ.ನೀಲಕಂಠಪ್ಪ, ಸಿಇಓ ಬಿ.ವೈ.ವೆಂಕಟೇಶ್, ಸಮಾಜ ಸೇವಕ ಮಣಿವೇಲು, ಜಿಲ್ಲಾ ಸಮಿತಿಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶ್ರೀಮತಿ ವಿನುತಾ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಶಾಂತಿ ಫರ್ನಾಂಡೀಸ್, ನಗರ ಅಧ್ಯಕ್ಷೆ ಸಮೀಮ ಬಾನು, ತಾಲ್ಲೂಕು ಅಧ್ಯಕ್ಷ ರಾಜೇಶ್, ಉಪಾಧ್ಯಕ್ಷ ವಿಜಯ್ ಕುಮಾರ್, ತರೀಕೆರೆ ಅಧ್ಯಕ್ಷ ಸೈಯದ್, ಗ್ರಾ.ಪಂ. ಉಪಾಧ್ಯಕ್ಷೆ ಕಮಲ ಸೋಮಶೇಖರ್, ಸದಸ್ಯೆ ಶಿಲ್ಪಾ, ಶಾಲೆಯ ಮುಖ್ಯೋಪಾಧ್ಯಾಯ ನಾರಾಯಣಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.