ಏಲಿಯಟ್ ಮಹಾ ಕವಿಯ ದಿ ವೇಸ್ಟ್ ಲ್ಯಾಂಡ್ ಕಾವ್ಯ ರಚನೆಗೆ ನೂರು ವರ್ಷ ಸಂದಿದ್ದರೂ ಅದರ ಅಂತರಾಳ ಇಂದಿಗೂ ಪ್ರಸ್ತುತ. ಬಹು ಆಯಾಮದ ಚರ್ಚೆಗೆ ಈ ಕಾವ್ಯ ಕಾರಣವಾಗುತ್ತದೆ. ಹೀಗಾಗಿ ಇದೊಂದು ಸಾರ್ವಕಾಲಿಕ ಮಹತ್ವದ ಕಾವ್ಯ ಎಂದು ಹಿರಿಯ ವಿಮರ್ಶಕ ಪ್ರೊ. ರಾಜೇಂದ್ರ ಚೆನ್ನಿ ಬಣ್ಣಿಸಿದರು.
ನಗರದ ಸಮಾನ ಮನಸ್ಕರ ವೇದಿಕೆ ಬಹುಮುಖಿ ವತಿಯಿಂದ ಎಲಿಯಟ್ ಮಹಾ ಕವಿಯ ದಿ ವೇಸ್ಟ್ ಲ್ಯಾಂಡ್ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೊದಲ ಮಹಾಯುದ್ಧದ ನಂತರದ ಮನುಷ್ಯನ ಹಪಾಹಪಿತನವನ್ನು ಗಟ್ಟಿಯಾಗಿ ಅನಾವರಣಗೊಳಿಸುತ್ತಲೇ, ಆಧುನಿಕ ಮನುಷ್ಯನ ಒಬ್ಬಂಟಿತನವನ್ನು ಸಹ ಕವಿತೆ ತೆರೆದಿಡುತ್ತದೆ ಎಂದರು.
ಯೂರೋಪ್ ನಾಗರೀಕತೆಯ ಕುಸಿತ ಒಂದೆಡೆಯಾದರೆ, ಇನ್ನೊಂದೆಡೆಯಲ್ಲಿ ನಂಬಿಕೆಯೇ ಅಪನಂಬಿಕೆಯಾಗುವ ಗಂಭೀರ ಪರಿಣಾಮವನ್ನು ಈ ಕಾವ್ಯ ಅಭಿವ್ಯಕ್ತಿಸುತ್ತದೆ ಎಂದ ಅವರು, ಈ ಕಾವ್ಯ ತನ್ನ ಅಂತರ್ಗತವಾದ ಭಾವಾಭಿವ್ಯಕ್ತಿಯಲ್ಲಿ ಕೇವಲ ಯೂರೋಪ್ ನಾಗರೀಕತೆ ಮಾತ್ರವಲ್ಲ, ಜಗತ್ತಿನ ಎಲ್ಲ ಪರಂಪರಾಗತ ಮೌಲ್ಯಗಳ ಅಧಃಪತನವನ್ನು ಸಹ ವಿಶ್ಲೇಷಿಸುತ್ತದೆ. ಹೀಗಾಗಿ ಇದು ಸಾರ್ವಕಾಲಿಕ ಮಹತ್ವದ ಕೃತಿ ಎಂದು ಆರ್ಥೈಸಿದರು.
ಪರಸ್ಪರ ಕಳಚುತ್ತಿರುವ ಮಾನವೀಯ ಮೌಲ್ಯಗಳನ್ನು ನೂರು ವರ್ಷಗಳ ಹಿಂದೆಯೇ ಕವಿ ಉಲ್ಲೇಖಿಸಿದ್ದರು ಎಂಬುದು ಅಚ್ಚರಿ ಮೂಡಿಸುತ್ತದೆ ಎಂದ ಅವರು, ಸರಳವಾದ ಶಬ್ದಗಳ ಮೂಲಕ, ತನ್ನ ಸುತ್ತಲಿನ ಘಟನೆಗಳ ಅನುಭವದ ಮೂಲಕ ಕವಿ ಕಠೋರವಾದ ಸತ್ಯವನ್ನು ತೆರೆದಿಟ್ಟಿದ್ದಾರೆ. ಪುರುಷನ ದಬ್ಬಾಳಿಕೆ, ನರಹತ್ಯೆ, ಯಾಂತ್ರಿಕ ಬದುಕು, ಕಳಚಿ ಬೀಳುತ್ತಿರುವ ಮಾನವೀಯ ಮೌಲ್ಯದ ಲಯಗಳನ್ನು ವಿಶ್ಲೇಷಿಸುತ್ತಲೇ ಒಂದು ಮಹತ್ವದ ಕೃತಿಯನ್ನು ಕಟ್ಟಿಕೊಟ್ಟಿದ್ದಾರೆ ಎಂದರು.
ಈಗ ಬೇಕಿರುವುದು ಮರುಹುಟ್ಟಲ್ಲ, ಮರವು ಎಂದು ಸೂಕ್ಷ÷್ಮವಾಗಿ ಹೇಳಿರುವ ಕವಿ, ಚಲನೆ ಅಥವಾ ಸ್ಪಂದನೆಯನ್ನು ಕಳೆದುಕೊಂಡಿರುವ ಅಧುನಿಕ ಜೀವನ ಮೂರು ಧರ್ಮಗಳ ಮೌಲ್ಯಗಳನ್ನು, ಅವುಗಳ ಮೇಲಿನ ನಂಬಿಕೆಗಳನ್ನು ಈ ಕಾವ್ಯ ಅನಾವರಣಗೊಳಿಸುತ್ತದೆ ಎಂದರು.
ಜಗತ್ತಿನ ಎಲ್ಲಾ ಭಾಷೆಗಳ ಸಾಹಿತ್ಯದ ಮೇಲೆ ಇನ್ನಿಲ್ಲದಂತೆ ಪ್ರಭಾವ ಬೀರಿದ, ಹೊಸ ಕಾಲದ ಮಹಾಕಾವ್ಯ ಎಂದೇ ಪರಿಗಣಿಸಲ್ಪಡುವ ಎಲಿಯಟ್ ನ ದಿ ವೇಸ್ಟ್ ಲ್ಯಾಂಡ್ ಪ್ರಕಟವಾಗಿ ಇದೀಗ ನೂರು ವರ್ಷ. ಆಧುನಿಕ ನಾಗರಿಕತೆಯ ಭ್ರಷ್ಟತೆ, ಕುರೂಪ ಹಾಗೂ ಬಂಜೆತನವನ್ನು ಸಂಕಿರ್ಣವಾಗಿ ಚಿತ್ರಿಸುವ ಕವನ, ಈ ಕವನದ ಮೂಲಕ ಎಲಿಯಟ್ ಸಾಹಿತ್ಯ ಲೋಕದ ಧ್ರುವಧಾರೆಯಾಗಿಬಿಟ್ಟ ಎಂದ ಅವರು, ದಿ ವೇಸ್ಟ್ ಲ್ಯಾಂಡ್ ಖಂಡಿತವಾಗಿಯೂ ವಿಶ್ವ ಸಾಹಿತ್ಯದ ಒಂದು ಮೈಲಿಗಲ್ಲು ಎಂದು ಅರ್ಥೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನುಸಹ್ಯಾದ್ರಿ ಕಾಲೇಜಿನ ಇಂಗ್ಲೀಷ್ ಪ್ರಾಧ್ಯಾಪಕ ಡಾ. ಎಸ್. ಸಿರಾಜ್ ಅಹ್ಮದ್ ವಹಿಸಿ, ಮಾತನಾಡಿದರು.
ಬಹುಮುಖಿಯ ಡಾ. ಹೆಚ್. ಎಸ್. ನಾಗಭೂಷಣ, ಸ್ವಾಗತ, ಪ್ರಾಸ್ತಾವಿಕ ಹಾಗೂ ವಂದನಾರ್ಪಣೆಯನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಪ್ರೊ. ರಾಜೇಂದ್ರ ಚೆನ್ನಿಯವರು ಸಭಿಕರೊಂದಿಗೆ ಸಂವಾದ ನಡೆಸಿಕೊಟ್ಟರು..