ಜಾರ್ಖಂಡ್ ಸರ್ಕಾರವು ಜೈನ ಸಮುದಾಯದ ಪವಿತ್ರ ಕ್ಷೇತ್ರವಾದ ಶಿಖರಜಿ ಕ್ಷೇತ್ರವನ್ನು ಪ್ರವಾಸೋದ್ಯಮ ಕೇಂದ್ರವಾಗಿ ಪರಿವರ್ತಿಸುವುದನ್ನು ಖಂಡಿಸಿ ತಾಲ್ಲೂಕು ಜೈನ ಸಮಾಜದ ವತಿಯಿಂದ ಡಿಸೆಂಬರ್ 22 ರಂದು ಬೆಳಿಗ್ಗೆ 10 ಗಂಟೆಗೆ ನೆಹರು ಮೈದಾನದ ದಿಗಂಬರ ಜೈನ ಬಸದಿಯಿಂದ ಉಪವಿಭಾಗಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಅಧ್ಯಕ್ಷ ಎಂ.ಪಿ.ಲೋಕರಾಜ್ ಜೈನ್ ಹೇಳಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ಅಕಲಂಕಕೇಸರಿ ಜಗದ್ಗುರು ಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಶ್ರೀ ಕ್ಷೇತ್ರ ಸ್ವಾದಿ ದಿಗಂಬರ ಜೈನ ಮಠ ಸೋಂದಾ ಮತ್ತು ಶ್ರೀ ಕ್ಷೇತ್ರ ಲಕ್ಕವಳ್ಳಿಯ ಶ್ರೀ ವೃಷಭ ಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಈ ರ್ಯಾಲಿಯು ನಡೆಯಲಿದೆ. ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ರವರಿಗೆ ಉಪವಿಭಾಗಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಗುವುದು ಎಂದರು.
ಸಮ್ಮೇದ ಶಿಖರಜಿ ಕ್ಷೇತ್ರವು ಜೈನರ ಅತ್ಯಂತ ಪವಿತ್ರ ಕ್ಷೇತ್ರವಾಗಿದೆ. 24 ತೀರ್ಥಂಕರರಲ್ಲಿ ಸುಮಾರು 20 ತೀರ್ಥಂಕರರು ಅಲ್ಲಿ ತಪಸ್ಸು ಹಾಜರಿದ್ದರು
ಮೋಕ್ಷ ಹೊಂದಿದ್ದಾರೆ. ಇದಕ್ಕೆ ಸುಮಾರು ಮೂರು ಸಾವಿರ ವರ್ಷಗಳ ಇತಿಹಾಸವಿದೆ. ಇಂಥ ಧಾರ್ಮಿಕ ಕ್ಷೇತ್ರವೊಂದಕ್ಕೆ ತನ್ನದೇ ಆದ ನೀತಿ ನಿಯಮಗಳಿರುತ್ತವೆ. ಪ್ರವಾಸೋದ್ಯಮ ಇಲಾಖೆಯ ಹಸ್ತಕ್ಷೇಪದಿಂದ ಇಡೀ ಕ್ಷೇತ್ರವು ಅಪವಿತ್ರವಾಗುವುದರಲ್ಲಿ ಸಂದೇಹವಿಲ್ಲ. ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡುವ ಆದೇಶ ಹೊರಡಿಸಿ ನಮ್ಮ ಸಮುದಾಯದಲ್ಲಿ ಆತಂಕ ಸೃಷ್ಟಿಸಲಾಗಿದೆ. ಈ ಬೆಳವಣ ಗೆಯಿಂದ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗುತ್ತದೆ. ಈ ಆದೇಶವನ್ನು ಜಾರ್ಖಂಡ ಸರ್ಕಾರ ವಾಪಸ್ ಪಡೆಯಬೇಕು ಎಂದು ದೇಶದ ಎಲ್ಲ ಭಾಗದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
ಸಮಾಜದ ಪ್ರಮುಖರಾದ ಎಸ್.ವಿ.ಹಿತಕರ ಜೈನ್ ಮಾತನಾಡಿ, ದೇಶದಲ್ಲೇ ಜೈನ ಸಮುದಾಯದ ಜನಸಂಖ್ಯೆ ಸುಮಾರು 5 ಕೋಟಿ 50 ಲಕ್ಷ ಇದೆ. ಕರ್ನಾಟಕ ರಾಜ್ಯದಲ್ಲಿ ಸುಮಾರು 4 ಲಕ್ಷ 40 ಸಾವಿರ ಜನಸಂಖ್ಯೆಯಿದೆ. ರಾಜ್ಯದಲ್ಲಿ 6 ಸಾವಿರ ಬಸದಿಗಳಿದ್ದವು. ಆದರೆ ಈಗ ಸರ್ಕಾರಿ ದಾಖಲೆ ಪ್ರಕಾರ ಕೇವಲ 106 ಬಸದಿ ಮಾತ್ರ ಇದೆ. ಒಂದು ಕಾಲದಲ್ಲಿ ಉಚ್ಛಾçಯ ಸ್ಥಿತಿಯಲ್ಲಿದ್ದ ಜೈನ ಸಮುದಾಯದ ಜನಸಂಖ್ಯೆಯೂ ಈಗ ಕ್ಷೀಣ ಸುತ್ತಿದೆ. ಮಹಾರಾಷ್ಟದಲ್ಲಿ ಅತಿ ಹೆಚ್ಚು 16 ಲಕ್ಷ ಜನಸಂಖ್ಯೆಯಿದೆ. ದೇಶದ ವಾಣಿಜ್ಯ, ಸಾಂಸ್ಕೃತಿಕ ಮತ್ತು ಸಾಹಿತ್ಯ ಮತ್ತು ಆಡಳಿತದಲ್ಲಿ ಜೈನರ ಕೊಡುಗೆ ಅಪಾರವಾಗಿದೆ ಎಂದರು.
ಹಿಂದೂಗಳಿಗೆ ಕಾಶಿ, ರಾಮೇಶ್ವರ, ಮಂತ್ರಾಲಯ ಮುಂತಾದ ಪವಿತ್ರ ಕ್ಷೇತ್ರಗಳಿದ್ದಂತೆ ಜೈನರಿಗೆ ಶಿಖರಜಿ ಕ್ಷೇತ್ರ ಅತ್ಯಂತ ಪವಿತ್ರವಾದುದು.
ಈ ಸ್ಥಳದಲ್ಲಿ ಪಾವಿತ್ರ್ಯಕ್ಕೆ ಹೆಚ್ಚು ಮಹತ್ವವಿದೆ. ಮೌನ ದ್ಯಾನಕ್ಕೆ ಒತ್ತು ನೀಡುವ ಮೂಲಕ ನೆಮ್ಮದಿಯಿಂದ ಪ್ರಾರ್ಥಿಸುವ ಸ್ಥಳ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆಯಾಗಬಾರದು.
ಇಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಬರಬಾರದು. ರಾಜ್ಯಸಭಾ ಸದಸ್ಯರೂ ಆಗಿರುವ ನಮ್ಮ ಸಮುದಾಯದ ಗಣ್ಯರಾದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಜಾಖಂಡ್ ಸರ್ಕಾರದ ಮೇಲೆ ಈ ಆದೇಶವನ್ನು ವಾಪಸ್ ಪಡೆಯಲು ಒತ್ತಡ ತರಲಾಗುತ್ತದೆ ಎಂದರು.
ಸಮಾಜದ ಪ್ರಮುಖರಾದ ವಿದ್ಯುತ್ ಗುತ್ತಿಗೆದಾರರು ರಾಜ್ಕುಮಾರ್ ಜೈನ್,ನಿವೃತ್ತ ಪ್ರಾಂಶುಪಾಲರು ಎಸ್.ಆರ್.ನಾಗರಾಜ್ ಜೈನ್ ಹಾಜರಿದ್ದರು.
