ಚಿಕ್ಕಮಗಳೂರು ನಗರದ ಕೋಟೆ ಬಡಾವಣೆ ಸಮೀಪದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿರುವ ಪರಿಣಾಮ ದಿನನಿತ್ಯ ಸಂಚರಿಸುವ ಮಕ್ಕಳು ಹಾಗೂ ವೃದ್ದರಿಗೆ ತೀವ್ರ ಸಮಸ್ಯೆ ಎದುರಾಗುತ್ತಿದ್ದು ಶ್ವಾನಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ವಹಿಸಬೇಕು ಎಂದು ಬಡಾವಣೆಯ ನಿವಾಸಿಗಳು ನಗರಸಭಾ ಪೌರಾಯುಕ್ತರನ್ನು ಒತ್ತಾಯಿಸಿದರು.
ಈ ಸಂಬಂಧ ನಗರಸಭಾ ಆಯುಕ್ತ ಬಿ.ಸಿ.ಬಸವರಾಜ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿ ಕೋಟೆ, ದೋಣ ಕಣ ಹಾಗೂ ಹೊಸಮನೆ ಬಡಾವಣೆ ನಿವಾಸಿಗಳು ಕೂಡಲೇ ಬೀದಿನಾಯಿಗಳ ಹಾವಳಿ ತಪ್ಪಿಸಿ ಸುಗಮ ಓಡಾಟಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಹಳ್ಳಿಕಾರ ಯುವಕರ ಸಂಘದ ಅಧ್ಯಕ್ಷ ಕೋಟೆ ಸೋಮಣ್ಣ ಬಡಾವಣೆಯ ಸುತ್ತಮುತ್ತಲು ಹಲವಾರು ಬೀದಿನಾಯಿಗಳು ವಾಸಿಸುತ್ತಿರುವ ಪರಿಣಾಮ ಮಹಿಳೆಯರು, ವೃದ್ದರು ಹಾಗೂ ಮಕ್ಕಳು ಹಗಲು ಸಮಯದಲ್ಲಿ ಭಯದಿಂದ ಓಡಾಡಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಇದೇ ಮಾರ್ಗವಾಗಿ ಬೈಕ್ಗಳಲ್ಲಿ ಸಂಚರಿಸುತ್ತಿರುವವರಿಗೆ ಬೀದಿನಾಯಿಗಳ ಏಕಾಏಕಿ ದಾಳಿ ಯಿಂದಾಗಿ ಕೆಲವು ಮಂದಿಗೆ ಅಪಘಾತಗಳು ಸಂಭವಿಸಿವೆ. ಈ ದಾರಿಯಲ್ಲಿ ಅನೇಕ ಮಂದಿ ರೈತಾಪಿ ವರ್ಗದವರು ವಾಸಿಸುತ್ತಿದ್ದು ಇತೀಚೆಗೆ ಹಸುಗಳಿಗೂ ಸಹ ಬೀದಿನಾಯಿಗಳು ಕಚ್ಚಿರುವ ಪರಿಣಾಮ ಸಾವನ್ನಪ್ಪಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೂಡಲೇ ಸಾರ್ವಜನಿಕರು ಸುಗಮ ಸಂಚಾರ ಹಾಗೂ ರೈತಾರ್ಪಿ ವರ್ಗದವರ ಹಸುಗಳಿಗೆ ಅನು ಕೂಲವಾಗುವ ನಿಟ್ಟಿನಲ್ಲಿ ಬೀದಿನಾಯಿಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ನಿವಾಸಿಗಳಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.
ಈ ವೇಳೆಯಲ್ಲಿ ಬಡಾವಣೆಯ ನಿವಾಸಿಗಳಾದ ಭುಜೇಂದ್ರ ರಾಜ್ ಅರಸ್, ಸಿ.ಹೆಚ್. ಶ್ರೀನಿವಾಸ್, ಚಲುವರಾಜ್, ಕುಮಾರ್ರಾಜ್, ಶ್ರೀಧರ್ ದೋಣ ಕಣ, ಸಿ.ಎಸ್.ರಘಣ್ಣ, ನಾಗಣ್ಣ, ಬಸವಣ್ಣ, ಧರ್ಮಣ್ಣ ಮತ್ತಿತರರು ಹಾಜರಿದ್ದರು.