ಮಕ್ಕಳು ಪರೀಕ್ಷೆಗಾಗಿ ಅಂಕಗಳಿಸಲು ಸೀಮಿತವಾಗಿ ಕಲಿಯದೆ ಜ್ಞಾನ ಸಂಪಾದನೆ ಮಾಡುವ ಜಾಗೃತಿ ವಹಿಸುವುದು ಮುಖ್ಯ. ಅರಿವು ಎನ್ನುವುದು ಪಠ್ಯ ಮತ್ತು ತರಗತಿಯ ಒಳಗೆ ಮಾತ್ರ ಅಡಗಿಲ್ಲ. ಅದು ಎಲ್ಲೆಡೆಯೂ ಪಸರಿಸಿಸಿದೆ. ಅದನ್ನು ಬಳಸಿಕೊಳ್ಳುವ ಜಾಣ್ಮೆ ನಿಮ್ಮದಾಗಬೇಕು. ಅದಕ್ಕಾಗಿ ಸಾಹಿತ್ಯದ ಸಹವಾಸ ಮಾಡಿ. ಪುಸ್ತಕ, ಪತ್ರಿಕೆ ಓದುವುದನ್ನು ಅಭ್ಯಾಸ ಮಾಡಿಕೊಳ್ಳಲು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ವಿವರಿಸಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಡಿಸೆಂಬರ್ ೫ ರಂದು ನಗರದ ಗಾಡಿಕೊಪ್ಪ ಬಡಾವಣೆಯಲ್ಲಿರುವ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಕಥೆ, ಕವನ, ಪ್ರಬಂಧ ರಚನಾ ಕಮ್ಮಟ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು
ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕರಾದ ಹನುಮಂತಪ್ಪ ಅವರು ಕಲಿಕೆಗೆ ಪೂರಕವಾದ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣವಾಗಿವೆ. ಕನ್ನಡ ನಮ್ಮೆಲ್ಲರ ಹೆಮ್ಮೆ ಎಂದು ಬಣ್ಣಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಸಾಹಿತಿಗಳಾದ ಡಿ. ಎಚ್. ಸೂರ್ಯಪ್ರಕಾಶ್, ಸಾಹಿತಿಗಳು, ಉಪನ್ಯಾಸಕರಾದ ಡಾ. ಅನಿತಾ ಹೆಗ್ಗೋಡು ಅವರು ಭಾಗವಹಿಸಿ ಮಾರ್ಗದರ್ಶನ ನೀಡಿದರು. ತಾ. ಕಸಾಪ ಕಾರ್ಯದರ್ಶಿ ಅನುರಾಧ ಜೊತೆಯಲ್ಲಿದ್ದರು
ವಿದ್ಯಾರ್ಥಿಗಳಾದ ಇಂಚರ ಸಂಗಡಿಗರು ನಾಡಗೀತೆ ಹಾಡಿದರು. ಶಿಕ್ಷಕರಾದ ಎಚ್. ಜೆ. ಗಣಪತಿ ಸ್ವಾಗತಿಸಿದರು. ಸುಮನ ವಂದಿಸಿದರು. ಷಫೀಉಲ್ಲಾ, ಮಹದೇವಿ ಪಂಡಿತ್, ಭೈರಾಪುರ ಶಿವಪ್ಪಮೇಷ್ಟ್ರುಸೇರಿದಂತೆ ಹಲವರು ಉಪಸ್ಥಿತರಿದ್ದರು.