ಕಮಲಪಡೆಯ ತಳಮಟ್ಟದ ಕಾರ್ಯಪಡೆ ಬಿಡುವಿಲ್ಲದ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು, 2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಮತ್ತೊಮ್ಮೆ ಜಯಭೇರಿ ಬಾರಿಸುವುದಕ್ಕೆ ಪೂರಕ ವಾತಾವರಣ ಸೃಷ್ಟಿಗೆ ಬೆವರಿಳಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿದ ಪ್ರತಿ ಬಾರಿ ‘ಡಬಲ್ ಇಂಜಿನ್ ಸರ್ಕಾರ’ದ ಪ್ರಯೋಜನದ ಮೇಲೆ ಹೆಚ್ಚೆಚ್ಚು ಬೆಳಕು ಚೆಲ್ಲಿ, ಪಕ್ಷದ ರಾಜ್ಯ ನಾಯಕರ ಮಾರ್ಗಪಥ ಏನೆಂಬುದು ಸೂಚ್ಯವಾಗಿ ತಿಳಿಸಿದ್ದಾರೆ.
ಮೋದಿ ಸೂಚನೆಯಂತೆ ಪಕ್ಷದ ಸಂಘಟನಾ ಕಾರ್ಯಯೋಜನೆಯಲ್ಲಿ ‘ಮನೆ ಮನೆಗೆ ಅಭಿಯಾನ’ ಸೇರಿಸಿ, ಜನರ ಮನೆ ಬಾಗಿಲಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಮಾಹಿತಿ ನೀಡುವ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ.
ಪ್ರತಿಯೊಂದು ಬೂತ್ಗೆ 12 ಜನ ಸಕ್ರಿಯ ಸದಸ್ಯರ ತಂಡವನ್ನು ನೇಮಿಸಿ ಅಭಿಯಾನದ ಹೊಣೆ ಒಪ್ಪಿಸಿದ್ದು, ವಿವಿಧ ಹಂತದ ಪದಾಧಿಕಾರಿಗಳು ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ನಗರ-ಗ್ರಾಮೀಣ ಪ್ರದೇಶದ ಪ್ರತಿಯೊಂದು ಅರ್ಹ ಕುಟುಂಬ ಡಬಲ್ ಇಂಜಿನ್ ಸರ್ಕಾರದ ಒಂದಲ್ಲ, ಒಂದು ಯೋಜನೆ ಫಲಾನುಭವಿ ಆಗಿರುವ ಮಾಹಿತಿಯನ್ನೂ ನಿಯೋಜಿತ ತಂಡಗಳು ಹಂಚಿಕೊಳ್ಳುತ್ತಿವೆ. ಕೇಂದ್ರ-ರಾಜ್ಯ ಸರ್ಕಾರದ ಬಗ್ಗೆ ವ್ಯಾಪಕ ಪ್ರಚಾರವೆಂದು ಮೇಲ್ನೋಟಕ್ಕೆ ಕಂಡು ಬಂದರೂ ಜನಪರ ಯೋಜನೆ, ಕಾರ್ಯಕ್ರಮಗಳ ಗರಿಷ್ಠ ಲಾಭ ಪಡೆಯಲಿ ಎಂಬುದು ಅಭಿಯಾನದ ಆಶಯವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.