ನಮ್ಮ ದೇಶದಲ್ಲಿ ವಾರ್ಷಿಕ ಸರಾಸರಿ ಸುಮಾರು 12 ಸಾವಿರದಷ್ಟು ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಇದರಲ್ಲಿ ಶೇಕಡಾ 65 ರಷ್ಟು ಅಪಘಾತಗಳಿಗೆ ಕುಡಿತವೇ ಕಾರಣವಾಗಿದೆ ಎಂದು ಹಿರಿಯ ಪತ್ರಕರ್ತ ಎಚ್. ಬಿ. ಮಂಜುನಾಥ್ ಅಭಿಪ್ರಾಯ ಪಟ್ಟರು.
ಅವರು ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ದಾವಣಗೆರೆ ಜಿಲ್ಲಾ ಜನಜಾಗೃತಿ ವೇದಿಕೆ ಹಾಗೂ ಹರಿಹರ ತಾಲೂಕು ನವಜೀವನ ಸಮಿತಿ ಸದಸ್ಯರು ಸಂಯುಕ್ತವಾಗಿ ಹರಿಹರದ ಶ್ರೀ ಸೀತಾರಾಮ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಗಾಂಧಿ ಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಪ್ರಧಾನ ಉಪನ್ಯಾಸ ನೀಡುತ್ತಾ ದೇಶದಲ್ಲಿ ವಾರ್ಷಿಕ ಸರಾ ಸರಾಸರಿ ಸುಮಾರು ಒಂದುವರೆ ಲಕ್ಷ ಮಂದಿ ಕುಡಿತದಿಂದಾಗಿ ಸಾಯುತ್ತಿದ್ದು ಇದರಲ್ಲಿ ಶೇಕಡಾ 75 ರಷ್ಟು ಪುರುಷರು ಹಾಗೂ ಶೇಕಡಾ 25ರಷ್ಟು ಸ್ತ್ರೀಯರು ಇರುತ್ತಾರೆ, ಮಹಿಳೆಯರ ಮೇಲೆ ಮತ್ತು ಅಪ್ರಾಪ್ತರ ಮೇಲೆ ನಡೆಯುವ ಅತ್ಯಾಚಾರ ಪ್ರಕರಣಗಳಲ್ಲಿ ಶೇಕಡ 85 ರಷ್ಟು ಪ್ರಕರಣಗಳಿಗೆ ಮದ್ಯಸೇವನೆಯೇ ಕಾರಣ ಆಗಿರುತ್ತದೆ, ಹೀಗಿರುವಾಗ ಸರ್ಕಾರಗಳು ಪಾನನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಅನಿವಾರ್ಯತೆ ಇದೆ, ಅಬಕಾರಿ ಆದಾಯವನ್ನು ನಿರೀಕ್ಷಿಸದೆ ಪರ್ಯಾಯವಾಗಿ ಪ್ರವಾಸೋದ್ಯಮ ಮುಂತಾದ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಿ ತನ್ಮೂಲಕ ಸರ್ಕಾರಗಳು ಆದಾಯವನ್ನು ವೃದ್ಧಿಸಿಕೊಳ್ಳಬೇಕಾಗಿದೆ ಎಂದರು.
ಧರ್ಮಸ್ಥಳ ಸಂಸ್ಥೆಯು ಏರ್ಪಡಿಸುವ ಮಧ್ಯವರ್ಜನ ಶಿಬಿರಗಳು ಅತ್ಯಂತ ಪರಿಣಾಮಕಾರಿಯಾಗಿದ್ದು ಈ ಶಿಬಿರಗಳಲ್ಲಿ ಮಧ್ಯವ್ಯಸನಿ ಗಳು ವ್ಯಸನ ಮುಕ್ತ ರಾಗಿ ನವ ಜೀವನಕ್ಕೆ ಕಾಲಿಡುವುದು ದೇಶಕ್ಕೆ ಮಾದರಿಯಾಗಿದೆ ಎಂದರು.
“ಕುಡಿತವು ಮನುಷ್ಯ ತನ್ನನ್ನು ತಾನೇ ಮರೆಯುವಂತೆ ಮಾಡುತ್ತದೆ, ಮದ್ಯ ಸೇವನೆ ಮಾಡಿದವರು ತಮ್ಮ ನಾಲಿಗೆ, ಇಂದ್ರಿಯಗಳ ಹತೋಟಿ, ನಿಯಂತ್ರಣ ಕಳೆದುಕೊಳ್ಳುವ ಮೂಲಕ ಅಪರಾಧಗಳಿಗೆ ಕಾರಣರಾಗುತ್ತಾರೆ” ಎಂಬ ಮಹಾತ್ಮ ಗಾಂಧೀಜಿಯವರ ಉಕ್ತಿಯನ್ನು ಪುನರುಚ್ಚರಿಸಿದ ಹೆಚ್. ಬಿ. ಮಂಜುನಾಥ್ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಯವರ ಜೀವನದ ಅನೇಕ ಆದರ್ಶ, ನಿದರ್ಶನಗಳನ್ನು ಸ್ವಾರಸ್ಯಕರವಾಗಿ ಹೇಳಿದ ರಲ್ಲದೆ ಕುಡಿತದ ಚಟದಿಂದ ಹೊರಬಂದವರು ಮತ್ತೆಂದೂ ವ್ಯಸನದ ಬಗ್ಗೆ ಗಮನಹರಿಸದೆ ಮುಂದಿನ ಪೀಳಿಗೆಗೆ ಆದರ್ಶರಾಗಬೇಕು ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚಿತ್ರದುರ್ಗ ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ಬಿ. ಗೀತಾ ರವರು ಬದುಕು ಸುಂದರವಾಗಬೇಕೆಂದರೆ ಅಂತರಂಗದ ಕೊಳಕು ನಿವಾರಣೆಯಾಗಬೇಕು, ಇದರಿಂದ ಸಾತ್ವಿಕ ಸಮಾಜ ಸಾಕಾರವಾಗಲು ಸಾಧ್ಯ ಇದಕ್ಕಾಗಿ ಪ್ರತಿಯೊಬ್ಬರೂ ದುಶ್ಚಟಗಳಿಂದ ದೂರಾಗಬೇಕು ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಾವಣಗೆರೆ ಜಿಲ್ಲಾ ಹಿರಿಯ ನಿರ್ದೇಶಕ ವಿ. ವಿಜಯಕುಮಾರ್ ನಾಗನಾಳ ಪ್ರಾಸ್ತಾವಿಕ ಮಾತುಗಳ ನಾಡಿದರು.
ಮುಖ್ಯ ಅತಿಥಿಗಳಾಗಿ ಹರಿಹರದ ಪೊಲೀಸ್ ಇಲಾಖೆಯ ರಾಜಶೇಖರ್, ದಾವಣಗೆರೆ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಹೊನ್ನಾಳಿ ಬಾಬಣ್ಣ, ಹರಿಹರದ ಎ. ಪದ್ಮರಾಜ ಜೈನ್ ಹಾಗೂ ಅಧ್ಯಕ್ಷ ಸ್ಥಾನದಿಂದ ದಾವಣಗೆರೆ ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ರಾಜಶೇಖರ ಕೊಂಡಜ್ಜಿ ಮುಂತಾದವರು ಮಾತುಗಳನ್ನಾಡಿದರು.
ದಾವಣಗೆರೆ ಜಿಲ್ಲಾ ತಂಬಾಕು ನಿಯಂತ್ರಣ ಅಧಿಕಾರಿ ದೇವರಾಜ್, ಸೀತಾರಾಮ ಸಮುದಾಯ ಭವನದ ಮೆನೇಜರ್ ರಂಗನಾಥ ಮುಂತಾದವರು ಉಪಸ್ಥಿತರಿದ್ದ ವೇದಿಕೆಯಲ್ಲಿ ನಿರೂಪಣೆಯನ್ನು ಮೃತ್ಯುಂಜಯ ಮಾಡಿದರು.
ಪ್ರಾರ್ಥನೆಯನ್ನು ಅರ್ಪಿತಾ ಹಾಡಿದರು, ಸ್ವಾಗತವನ್ನು ಗಣಪತಿ ಮಾಳಂಜೆ ಕೋರಿದರು, ವರದಿಯನ್ನು ಶಿಲ್ಪಾ ವಾಚಿಸಿದರು, ಸಂತೋಷ್ ವಂದನೆ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳು ಮಹಾತ್ಮ ಗಾಂಧೀಜಿ ಸ್ವಾಮಿ ವಿವೇಕಾನಂದ ಮುಂತಾದ ವೇಶಗಳಿಂದ ಆಕರ್ಷಣೆ ತಂದರು.