ಪಾಕಿಸ್ತಾನದೊಂದಿಗೆ ನಾಲ್ಕು ಯುದ್ಧಗಳು, ರಣರಂಗದಲ್ಲಿ ಅವಿಸ್ಮರಣೀಯ ಗೆಲುವುಗಳು, ಭಯೋತ್ಪಾದಕರನ್ನು ಕೊಂದ ವೈಮಾನಿಕ ದಾಳಿ ಇವುಗಳ ಜೊತೆಗೆ ಮತ್ತು ಇತರ ಹಲವು ಮೈಲಿಗಲ್ಲುಗಳು ಎಲ್ಲಾ ಒಟ್ಟಾದರೆ ಭಾರತೀಯರ ಹೆಮ್ಮೆಯ ವಾಯುಪಡೆ.
ಅಂದಹಾಗೆ ಭಾರತೀಯ ವಾಯುಸೇನೆ ಇಂದಿಗೆ 90 ವರ್ಷ ಪೂರೈಸಿದೆ. ಅಕ್ಟೋಬರ್ 8ರಂದು ವಾಯುದಳದ ಅಭೂತಪೂರ್ವ ಸಾಧನೆಯ ಸಂಕೇತವಾಗಿ ಈ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಭಾರತೀಯ ಸೇನೆ, ನೌಕಾಸೇನೆ, ವಾಯುಸೇನೆ ಭಾರತದ ರಕ್ಷಣೆಯಲ್ಲಿ ಈ ಮೂರು ಪಡೆಗಳ ಪಾತ್ರ ಬಹಳ ನಿರ್ಣಾಯಕ. ಭೂಮಿ, ಜಲ, ಆಕಾಶ ಯಾವುದೇ ವಿಧಾನದಿಂದ ಬಂದರೂ ಶತ್ರುಗಳ ಆಕ್ರಮಣವನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯ ಭಾರತಕ್ಕಿದೆ.
ದೇಶದ ಮೂರು ಪಡೆಗಳ ಪೈಕಿ ಭಾರತೀಯ ವಾಯುಸೇನೆ ಬಗ್ಗೆ ವಿಶೇಷವಾಗಿ ಸ್ಮರಿಸಬೇಕು. 9 ದಶಕಗಳ ಇತಿಹಾಸದಲ್ಲಿ ಐಎಎಫ್ ಹಲವು ಮೈಲಿಗಲ್ಲುಗಳನ್ನು ದಾಟಿದೆ. ನಮ್ಮ ವಾಯುಪಡೆಯು ಜರ್ಮನಿ, ಆಸ್ಟ್ರೇಲಿಯಾ, ಜಪಾನ್ಗಿಂತ ಉತ್ತಮವಾಗಿದೆ.
90ನೇ ವಾರ್ಷಿಕೋತ್ಸವದ ಅಂಗವಾಗಿ ಇಂದು ಚಂಡೀಗಢದಲ್ಲಿ ವಾಯುಪಡೆಯ ಸುಮಾರು 80 ವಿಮಾನಗಳು ಆಕಾಶದಲ್ಲಿ ಅದ್ದೂರಿ ಪ್ರದರ್ಶನ ನೀಡಲಿವೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮವನ್ನು ಸುಖ್ನಾ ಸರೋವರದ ಮೇಲೆ ನಡೆಸಲು ಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ವಿಂಟೇಜ್ ಹಾಗೂ ಪ್ರಸ್ತುತ ಆಧುನಿಕ ವಿಮಾನಗಳಾದ ರಫೇಲ್, ಪ್ರಚಂಡ್, ಚಿನೂಕ್, ಅಪಾಚೆ, ಹೂವಾರ್ಡ್ ಎಂಐ-35, ಸು-30, ಎಂಎ- 17, ಜ್ವಾಗರ್ ಮತ್ತು ಡಕೋಟಾ ಆಕಾಶಗಂಗಾ, ಎನ್ಸೈನ್, ಏಕಲವ್ಯ, ತ್ರಿಶೂಲ್, ಮೆಹರ್, ಶಂಶೇರ್, ವಜ್ರ, ಸಾರಂಗ್ ಮತ್ತು ರ್ಸೂಕಿರಣ್ ಸೇರಿದಂತೆ ಹಲವು ವಿಶೇಷ ವಿಮಾನಗಳ ಪ್ರದರ್ಶನವಿರಲಿದೆ.
ಭಾರತೀಯ ವಾಯುಪಡೆಯ ಇತಿಹಾಸ
ಅಕ್ಟೋಬರ್ 1932 ರ ಎಂಟನೇ ತಾರೀಖಿನಂದು ಭಾರತೀಯ ವಾಯುಪಡೆಯು ಬ್ರಿಟಿಷ್ ಸರ್ಕಾರದ ಸಹಾಯಕ ಪಡೆಯಾಗಿ ರೂಪುಗೊಂಡಿತು. ಭಾರತೀಯ ವಾಯುಪಡೆಯ ಗುರಿ ಭಾರತೀಯ ವಾಯುಪ್ರದೇಶವನ್ನು ಸುರಕ್ಷಿತವಾಗಿರಿಸುವುದು ಮಾತ್ರವಲ್ಲ, ಯುದ್ಧದ ಸಮಯದಲ್ಲಿ ಶತ್ರುಗಳನ್ನು ನಾಶಪಡಿಸುವುದು.
ಎರಡನೆಯ ಮಹಾಯುದ್ಧದ ಸಮಯದಲ್ಲಿ, ಭಾರತೀಯ ವಾಯುಪಡೆಯನ್ನು ʻರಾಯಲ್ʼ ಎಂಬ ಹೆಸರಿನಿಂದ ಗೌರವಿಸಲಾಯಿತು. 1947 ರಲ್ಲಿ ಸ್ವಾತಂತ್ರ್ಯದ ನಂತರ. ʻರಾಯಲ್ ಇಂಡಿಯನ್ ಏರ್ ಫೋರ್ಸ್ʼ ಅನ್ನು ʻಡೊಮಿನಿಯನ್ ಆಫ್ ಇಂಡಿಯಾʼ ಎಂದು ಹೆಸರಿಸಲಾಯಿತು. 1950 ರಿಪಬ್ಲಿಕನ್ ಇಂಡಿಯಾದಲ್ಲಿ ರಾಯಲ್ ಪದವನ್ನು ಕೈಬಿಡಲಾಯಿತು.
ಇಂಡಿಯಾ ಏರ್ಫೋರ್ಸ್ ನ ಧ್ಯೇಯವಾಕ್ಯ ‘ ನಭ ಸ್ಪರ್ಶಂ ದೀಪ್ತಮ್’, ಅಂದರೆ ‘ ಆಕಾಶವನ್ನು ವೈಭವದಿಂದ ಸ್ಪರ್ಶಿಸಿ’ ಎಂದರ್ಥ.