ಕಳೆದ ಒಂಬತ್ತು ತಿಂಗಳಲ್ಲಿ ಪಾಕಿಸ್ತಾನದಲ್ಲಿ ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಿದ್ದ ಆರು ಭಾರತೀಯ ಕೈದಿಗಳು ಸಾವನ್ನಪ್ಪಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಅಲ್ಲದೆ, ಈ ಘಟನೆ ಬಹಳ ಆತಂಕಕಾರಿ ಬೆಳವಣಿಗೆ ಎಂದು ಹೇಳಿದೆ.
ಎಂಇಎ ವಕ್ತಾರ ಅರಿಂದಮ್ ಬಾಗ್ಚಿ ಈ ಬಗ್ಗೆ ಮಾಹಿತಿ ನೀಡಿದ್ದು, ಕಳೆದ ಒಂಬತ್ತು ತಿಂಗಳುಗಳಲ್ಲಿ ಐವರು ಮೀನುಗಾರರು ಸೇರಿದಂತೆ ಆರು ಭಾರತೀಯರು ಪಾಕಿಸ್ತಾನದ ವಶದಲ್ಲಿ ಸಾವನ್ನಪ್ಪಿದ್ದಾರೆ. ಈ ವಿಚಾರ ಅತ್ಯಂತ ಕಳವವಳಕಾರಿಯಾಗಿದೆ. ಭಾರತೀಯ ಕೈದಿಗಳಿಗೆ ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸುವುದು ಪಾಕ್ ಜವಾಬ್ದಾರಿಯಾಗಿದೆ. ಈ ವಿಚಾರವನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ ಎಂದಿದ್ದಾರೆ.
ಮೃತಪಟ್ಟ ಎಲ್ಲಾ ಆರು ಮಂದಿ ತಮ್ಮ ಶಿಕ್ಷೆಯನ್ನು ಪೂರ್ಣಗೊಳಿಸಿದ್ದರು. ಅವರ ಶಿಕ್ಷೆಯನ್ನು ಪೂರ್ಣಗೊಳಿಸಿದ ಹೊರತಾಗಿಯೂ ಮತ್ತು ಅವರ ಬಿಡುಗಡೆ ಮತ್ತು ವಾಪಸಾತಿಗಾಗಿ ಭಾರತದ ಕಡೆಯಿಂದ ಅನೇಕ ಬೇಡಿಕೆಗಳ ಹೊರತಾಗಿಯೂ ಪಾಕಿಸ್ತಾನವು ಅಕ್ರಮವಾಗಿ ಬಂಧನದಲ್ಲಿಸಿತ್ತು ಎಂದು ಬಾಗ್ಚಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವಿಷಯವನ್ನು ಇಸ್ಲಾಮಾಬಾದ್ನಲ್ಲಿರುವ ನಮ್ಮ ಹೈಕಮಿಷನ್ ಮತ್ತು ಇಲ್ಲಿನ ಪಾಕಿಸ್ತಾನಿ ಹೈಕಮಿಷನ್ನಲ್ಲಿ ಪ್ರಸ್ತಾಪಿಸಲಾಗಿದೆ, “ಎಂದು ಅವರು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ಭಾರತೀಯ ಮೀನುಗಾರರ ಸಾವಿನ ಸಂಖ್ಯೆ ಹೆಚ್ಚುತ್ತಿದೆ ಎಂದು ವಕ್ತಾರರು ಹೇಳಿದ್ದಾರೆ. ಹೆಚ್ಚುತ್ತಿರುವ ಭಾರತೀಯ ಮೀನುಗಾರರ ಸಾವಿನ ಘಟನೆಗಳು ಆತಂಕಕಾರಿ ಮತ್ತು ಪಾಕಿಸ್ತಾನದ ಜೈಲುಗಳಲ್ಲಿ ಅವರ ಸುರಕ್ಷತೆ ಮತ್ತು ಭದ್ರತೆಯ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ.
“ಎಲ್ಲಾ ಭಾರತೀಯ ಕೈದಿಗಳನ್ನು ತಕ್ಷಣವೇ ಬಿಡುಗಡೆ ಮಾಡಲು ಮತ್ತು ಸ್ವದೇಶಕ್ಕೆ ಕಳುಹಿಸಲು ನಾವು ಪಾಕಿಸ್ತಾನ ಸರ್ಕಾರವನ್ನು ಮತ್ತೊಮ್ಮೆ ಕೋರುತ್ತೇವೆ” ಎಂದು ಅವರು ಹೇಳಿದರು.