Thursday, March 19, 2026
Thursday, March 19, 2026

ತಾಯಿರೂಪದ ಜನ ಪೌರ ಕಾರ್ಮಿಕರು-ಈಶ್ವರಪ್ಪ

Date:

ಮನೆಯಲ್ಲಿ ತಾಯಿ ಹೇಗೆ ಬೇಸರವಿಲ್ಲದೆ ಎಲ್ಲ ರೀತಿಯ ಸ್ವಚ್ಚತೆ ಕಾರ್ಯ ಕೈಗೊಳ್ಳುವಳೋ ಅದೇ ರೀತಿಯಲ್ಲಿ ಎಲ್ಲ ರೀತಿಯ ಸ್ವಚ್ಚತೆಯನ್ನು ಕೈಗೊಳ್ಳುವ ತಾಯಿ ರೂಪದ ಜನ ಪೌರ ಕಾರ್ಮಿಕರು ಎಂದು ಶಾಸಕರಾದ ಕೆ.ಎಸ್.ಈಶ್ವರಪ್ಪ ಪೌರಕಾರ್ಮಿಕರನ್ನು ಕೊಂಡಾಡಿದರು.

ಮಹಾನಗರಪಾಲಿಕೆ ವತಿಯಿಂದ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಪೌರಕಾರ್ಮಿಕ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮನೆಯಲ್ಲಿ ತಾಯಿ ಹೇಗೆ ಸ್ವಚ್ಚತೆ ಸೇರಿದಂತೆ ಎಲ್ಲ ರೀತಿಯ ಕೆಲಸಗಳನ್ನು ಬೇಸರವಿಲ್ಲದೆ ಮಾಡುತ್ತಾಳೋ ಅದೇ ರೀತಿ ಪೌರಕಾರ್ಮಿಕರು ಯಾವುದೇ ಬೇಸರವಿಸಲ್ಲದೆ ನಗರ, ಊರುಗಳಲ್ಲಿನ ಎಲ್ಲ ರೀತಿಯ ಕಸ, ಕೊಳೆಗಳನ್ನು ಸ್ವಚ್ಚಗೊಳಿಸುತ್ತಾರೆ. ಬೇಡಿಕೆ ಹಲವಾರು ಇದ್ದರೂ, ಈಡೇರದಿದ್ದರೂ ತಮ್ಮ ಕಾಯಕವನ್ನು ಬಿಡದೇ ಮುಂದುವರೆಸಿಕೊಂಡು ಹೋಗುವ ತಾಯಿಯಂತಹ ಜನ ನೀವು ಎಂದ ಅವರು ನಾವು ಎಂದಿಗೂ ಪೌರಕಾರ್ಮಿಕರನ್ನು ತಾತ್ಸಾರ ಮಾಡುವಂತಿಲ್ಲ. ನಾವೆಲ್ಲ ಒಂದೇ, ಸಮಾಜ ಶುದ್ದಿ ಮಾಡುವ ಕೆಲಸವನ್ನು ಎಲ್ಲ ಸೇರಿ ಮಾಡೋಣ ಎಂದರು.

ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆಯಡಿ 6 ಎಕರೆ 9 ಗುಂಟೆ ಜಮೀನಿನಲ್ಲಿ ಒಟ್ಟು 168 ಮನೆಗಳ ನಿರ್ಮಾಣ ಆಗುತ್ತಿದೆ. ಈ ಜಾಗ ಪಡೆಯಲು ಪೌರಕಾರ್ಮಿಕರು ಬಹಳ ಶ್ರಮಪಟ್ಟಿದ್ದಾರೆ. ಶೇ.60 ರಷ್ಟು ಕೆಲಸ ಆಗಿದೆ. ಒಂದು ಮನೆಗೆ ರೂ.8.25 ಲಕ್ಷ ವೆಚ್ಚ ತಗುಲುತ್ತದೆ. ಅದರಲ್ಲಿ ಫಲಾನುಭವಿ ತಲಾ ರೂ.1.5 ಲಕ್ಷ ನೀಡಬೇಕು. ಆದರೆ ಇದುವರೆಗೆ ಯಾರೂ ಹಣ ಕಟ್ಟಿಲ್ಲ. ಈ ಹಣವನ್ನು ಸಹ ಪಾಲಿಕೆಯ 24.10 ಅನುದಾನದಲ್ಲಿ ಭರಿಸಬಹುದೆಂದು ತಿಳಿಸಿದ್ದೀರಿ. ಈ ರೀತಿ ಹಣ ಭರಿಸಿ ಸಂಪೂರ್ಣವಾಗಿ ತಮಗೆ ಉಚಿತವಾಗಿ ಮನೆಗಳನ್ನು ನೀಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ನಗರದ ಮಾರ್ನಮಿಬೈಲ್ ಮತ್ತು ಹೊಸಮನೆಯಲ್ಲಿ ಪೌರಕಾರ್ಮಿಕರು ವಾಸಿಸುತ್ತಿರುವ 80+40 ಒಟ್ಟು 120 ಮನೆಗಳನ್ನು ಸಕ್ರಮೀಕರಣಗೊಳಿಸಲು ಸರ್ವೇ ಕಾರ್ಯ ನಡೆಸಿ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದು. ಸಿದ್ದೇಶ್ವರ ನಗರದಲ್ಲಿ ರೂ.4.5 ಕೋಟಿ ಅನುದಾನದಲ್ಲಿ ರಾಜ್ಯದಲ್ಲಿಯೇ ಮೊದಲ ಪೌರಕಾರ್ಮಿಕರ ಸಮುದಾಯ ಭವನ ನಿರ್ಮಾಣವಾಗುತ್ತಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ಪೌರ ಕಾರ್ಮಿಕರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ನೀಡಬಹುದಾದ ಯಾವುದೇ ರೀತಿಯ ಸೌಲಭ್ಯಗಳನ್ನು ಕೊಡಿಸುವ ಪ್ರಯತ್ನ ಮಾಡುವೆ ಎಂದು ಶಾಸಕರಾದ ಕೆ. ಎಸ್ ಈಶ್ವರಪ್ಪನವರು ತಿಳಿಸಿದರು.

ಸಂಸದರಾದ ಬಿ.ವೈ.ರಾಘವೇಂದ್ರ ಮಾತನಾಡಿ, ದೇಶದ ಆರೋಗ್ಯ ಕಾಪಾಡುವ ಕೆಲಸ ಮಾಡುವ ನಿಮಗೆ ಅಭಿನಂದನೆಗಳು. ಕೋವಿಡ್ ಸಂಕಷ್ಟ ಸಮಯದಲ್ಲಿ ನೀವು ನಿಮ್ಮ ಜೀವದ ಹಂಗನ್ನು ತೊರೆದು ಸೇವೆ ನೀಡಿರುವುದು ಅವಿಸ್ಮರಣೀಯ. ನಾಡಿಗೆ ನಿಮ್ಮ ಸೇವೆ ವಿಶೇಷವಾಗಿದ್ದು, ನಮ್ಮ ಪ್ರಧಾನಿಯವರು ಉತ್ತರ ಪ್ರದೇಶದಲ್ಲಿ ಪೌರಕಾರ್ಮಿಕನ ಪಾದ ತೊಳೆದು ಪೂಜ್ಯರಿಗೆ ಸರಿಸಮನಾದ ಸ್ಥಾನವನ್ನು ನಿಮಗೆ ನೀಡಿದ್ದಾರೆ ಎಂದರು.

ಪೌರಕಾರ್ಮಿಕರನ್ನು ನೇರ ಪಾವತಿಯಿಂದ ಖಾಯಂ ಪಾವತಿಗೆ ಮತ್ತು ಗೌರವಧನವನ್ನು ರೂ.3500 ದಿಂದ 7000 ದವರೆಗೆ ಹೆಚ್ಚಿಸುವ ಮೂಲಕ ಸರ್ಕಾರ ಉತ್ತಮ ನಿಲುವು ಕೈಗೊಂಡಿದೆ. ಹಾಗೆಯೇ ಲೋಡರ್ಸ್, ಡ್ರೈವರ್‍ಗಳು, ಕ್ಲೀನರ್ಸ್ ಇತರೆ ಹೊರಗುತ್ತಿಗೆ ಸಿಬ್ಬಂದಿಗಳ ಬೇಡಿಕೆಗಳನ್ನು ಸಹ ಹಂತ ಹಂತವಾಗಿ ಈಡೇರಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಪೌರಕಾರ್ಮಿಕರು ತಮ್ಮ ಆರೋಗ್ಯದ ಕಡೆ ಗಮನ ಹರಿಸಿ, ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ರೀತಿ ಮಕ್ಕಳು ಸಾಧನೆ ಮಾಡಬೇಕು. ಈ ನಿಟ್ಟಿನಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದ ಅವರು ಸೈನಿಕರಷ್ಟೇ ತ್ಯಾಗದ ಕೆಲಸ ನಿಮ್ಮದು. ದೇಶದ ವಿಚಾರ ಬಂದಾಗ ನಾವೆಲ್ಲ ಒಟ್ಟಾಗಿರಬೇಕೆಂದರು.

ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಮಾತನಾಡಿ, ಪೌರಕಾರ್ಮಿಕರ ದಿನಾಚರಣೆ ಒಂದು ಅತ್ಯುತ್ತಮ ಕಾರ್ಯಕ್ರಮವಾಗಿದೆ. ಸ್ವಚ್ಚತೆ ಕಾಪಾಡುವ ನಿಮ್ಮ ಕಾರ್ಯಕ್ಕೆ ಅನಂತ ಅಭಿನಂದನೆಗಳು. ಜಿಲ್ಲಾಡಳಿತ ಸದಾ ನಿಮ್ಮ ಜೊತೆ ಇರಲಿದೆ ಎಂದು ತಿಳಿಸಿದರು.

ಮಹಾನಗರಪಾಲಿಕೆ ಮಹಾಪೌರರಾದ ಸುನೀತ ಅಣ್ಣಪ್ಪ, ಪಾಲಿಕೆ ಆಡಳಿತ ಪಕ್ಷದ ನಾಯಕರಾದ ಚನ್ನಬಸಪ್ಪ, ಪಾಲಿಕೆ ನೌಕರರ ಸಂಘದ ಅಧ್ಯಕ್ಷರಾದ ಮಾರಪ್ಪ ಮಾತನಾಡಿದರು.

ಪಾಲಿಕೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎನ್ ಗೋವಿಂದರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾಲಿಕೆ ಆಯುಕ್ತ ಕೆ.ಮಾಯಣ್ಣಗೌಡ ಸ್ವಾಗತಿಸಿದರು. ಪಾಲಿಕೆ ಉಪಮೇಯರ್ ಶಂಕರ್ ಗನ್ನಿ, ಪಾಲಿಕೆ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು, ನಾಮ ನಿರ್ದೇಶಿತ ಸದಸ್ಯರು, ಪೌರಕಾರ್ಮಿಕರು, ಅಧಿಕಾರಿ, ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...