ಯುಪಿಎಸ್ಸಿ ಪರೀಕ್ಷೆಗಳೆಂದರೆ ಕಬ್ಬಿಣದ ಕಡಲೆ ಎಂಬ ಮಾತೇ ಇದೆ. ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕೆಂದರೆ ಅಷ್ಟೇ ತಯಾರಿ ಕೂಡ ಮುಖ್ಯ.
ಐಎಎಸ್ ಅಧಿಕಾರಿಯಾಗಿರುವ ಅರುಣ್ ಕುಮಾರ್ ಅವರು ಹಿಂದುಳಿದ ಯುಪಿಎಸ್ಸಿ ಆಕಾಂಕ್ಷಿಗಳಿಗಾಗಿಯೇ ತಮ್ಮ ಐಎಎಸ್ ಸ್ಥಾನಕ್ಕೆ ರಾಜೀನಾಮೆ ನೀಡಿ ಬೋಧಿಸುವ ಕಾಯಕಕ್ಕೆ ಮುನ್ನುಡಿ ಬರೆದಿದ್ದಾರೆ.
ಯುಪಿಎಸ್ಸಿ ಆಕಾಂಕ್ಷಿಗಳಿಗೆ ಬೋಧಿಸಲು ಉದ್ಯೋಗವನ್ನೇ ತೊರೆದ ಐಎಎಸ್ ಅಧಿಕಾರಿ
ಸ್ವಂತ ಸುಖಕ್ಕಿಂತ ಸೇವೆಯೇ ಮೊದಲು ಎಂಬ ಮನೋಭಾವವನ್ನು ಮೈಗೂಡಿಸಿಕೊಂಡಿರುವ ಒಬ್ಬ ಅಸಾಧಾರಣ ವ್ಯಕ್ತಿ ಅರುಣ್ ಕುಮಾರ್. ಮಾಜಿ ಐಎಎಸ್ ಅಧಿಕಾರಿಯಾಗಿದ್ದ ಅರುಣ್ ಕುಮಾರ್ ಬಿಹಾರದ ಪಾಟ್ನಾದಲ್ಲಿರುವ ಹಿಂದುಳಿದ ಯುಪಿಎಸ್ಸಿ ಆಕಾಂಕ್ಷಿಗಳಿಗೆ ಬೋಧಿಸುವ ಸಲುವಾಗಿ ತಮ್ಮ ಪ್ರತಿಷ್ಠಿತ ಕೆಲಸವನ್ನು ತೊರೆದರು. ಅವರ ನಿಸ್ವಾರ್ಥತೆ ಮತ್ತು ಪರಹಿತಚಿಂತನೆಯು ಈಗ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಪ್ರಶಂಸೆ ಮತ್ತು ಮೆಚ್ಚುಗೆಯನ್ನು ಗಳಿಸುತ್ತಿದೆ.
ಯುಪಿಎಸ್ಸಿ ಕೋಚಿಂಗ್ ತರಗತಿಯ ಹೆಚ್ಚುವರಿ ಶುಲ್ಕವನ್ನು ಭರಿಸಲಾಗದೇ ಇರುವ ವಿದ್ಯಾರ್ಥಿಗಳಿಗೆ 1994 ರ ಬ್ಯಾಚ್ನ IAS ಅಧಿಕಾರಿ, ಅರುಣ್ ಕುಮಾರ್ ಉಚಿತ ತರಗತಿಗಳನ್ನು ನಡೆಸುತ್ತಾರೆ ಎಂಬುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ಪರೀಕ್ಷೆ ಬರೆಯಲು ಆರ್ಥಿಕ ಸ್ಥಿತಿ ಅಡಚಣೆಯಾಗಿರಬಾರದು ಎಂಬುದೇ ಇವರ ಉದ್ದೇಶವಾಗಿದೆ.
ಗಂಗಾ ನದಿಯ ದಡದಲ್ಲಿ ತಮ್ಮ ಪತ್ನಿ ರಿತು ಜೈಸ್ವಾಲ್ ಮುಕ್ತ ತರಗತಿಗಳನ್ನು ನಡೆಸುತ್ತಿದ್ದಾಗ ಅದರಿಂದ ಸ್ಫೂರ್ತಿ ಪಡೆದ ಅರುಣ್ ಕುಮಾರ್ ಯಾವುದೇ ವಿದ್ಯಾರ್ಥಿಗೂ UPSC ನಾಗರಿಕ ಸೇವೆಗಳ ಪರೀಕ್ಷೆಯನ್ನು ಭೇದಿಸಲು ಆರ್ಥಿಕ ಸ್ಥಿತಿ ಅಡಚಣೆಯಾಗಿರಬಾರದು ಎಂಬುದಾಗಿ ತಿಳಿಸಿದ್ದಾರೆ.