ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸದ ಅಂಗವಾಗಿ ಲಾಲ್ಬಾಗ್ನ ಗಾಜಿನ ಮನೆಯಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಕರ್ನಾಟಕ ರತ್ನ ದಿವಂಗತ ಡಾ . ರಾಜ್ಕುಮಾರ್ ಮತ್ತು ಡಾ. ಪುನೀತ್ ರಾಜ್ಕುಮಾರ್ ಅವರ ಜೀವನ ಕುರಿತು ಹೂವುಗಳ ಮೂಲಕ ಪ್ರದರ್ಶಿಸಲು ಊಟಿ, ಕೆಮ್ಮಣ್ಣುಗುಂಡಿ ಸೇರಿದಂತೆ ವಿವಿಧ ಭಾಗಗಳಿಂದ ಹಲವು ಬಗೆಯ ವೈವಿಧ್ಯಮಯ ಹೂವುಗಳನ್ನು ತರಿಸಲಾಗಿದೆ.
ಜೊತೆಗೆ, ಲಾಲ್ಬಾಗ್ನಲ್ಲೇ ಬೆಳೆಸಿದ ವಿದೇಶಿ ತಳಿಯ ಅಪರೂಪದ ಹೂವುಗಳು ಪ್ರದರ್ಶನದಲ್ಲಿ ಕಣ್ಮನ ಸೆಳೆಯಲು ಸಜ್ಜಾಗುತ್ತಿದೆ. ರಾಜ್ಯ ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ಉದ್ಯಾನ ಕಲಾ ಸಂಘಗಳ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಪ್ರದರ್ಶನ ಆಗಸ್ಟ್ 5ರಿಂದ 15ರವರೆಗೆ ನಡೆಯಲಿದೆ. ಇದಕ್ಕಾಗಿ ಲಾಲ್ಬಾಗ್ ಹಾಗೂ ಸುತ್ತಮುತ್ತ ಸುಮಾರು 50 ಸಾವಿರ ಹೂವಿನ ಕುಂಡಗಳು, ಜತೆಗೆ ಎಚ್ಎಎಲ್ ನರ್ಸರಿ, ಬಿಡಿಎ, ಬಿಬಿಎಂಪಿ ಮತ್ತಿತರ ಸಂಸ್ಥೆಗಳು ಪ್ರದರ್ಶನಕ್ಕೆಂದೇ ಬೆಳೆಸಿರುವ ನಾನಾ ಹೂವು, ತರಕಾರಿಗಳನ್ನು ತರಿಸಿಕೊಂಡು ಬೆಳೆಸಿದೆ. ಒಟ್ಟಾರೆ ಸುಮಾರು 1.25 ಲಕ್ಷಕ್ಕೂ ಹೆಚ್ಚು ಪಾಟ್ಗಳು ಪ್ರದರ್ಶನದಲ್ಲಿ ಜೋಡಣೆಯಾಗುತ್ತಿದೆ. ನೂರಾರು ಕಾರ್ಮಿಕರು ಸಿದ್ಧತಾ ಕಾರ್ಯದಲ್ಲಿ ತೊಡಗಿದ್ದಾರೆ
