ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾದಾಗಿನಿಂದಲೂ ಉಭಯ ಸದನಗಳಲ್ಲಿ ಉಂಟಾಗಿದ್ದ 2 ವಾರದ ಬಿಕ್ಕಟ್ಟು ಸೋಮವಾರದಿಂದ ಶಮನಗೊಳ್ಳುವ ಸಾಧ್ಯತೆ ಇದೆ.
ವಿಪಕ್ಷಗಳ ಪ್ರಮುಖ ಬೇಡಿಕೆಯಾಗಿದ್ದ ಬೆಲೆ ಏರಿಕೆಯ ಕುರಿತಾಗಿ ಚರ್ಚೆ ಆರಂಭವಾಗಲಿದೆ.
ಉದ್ಧವ್ ಠಾಕ್ರೆ ಬಣದಲ್ಲಿರುವ ಶಿವಸೇನೆಯ ಸಂಸದ ವಿನಾಯಕ್ ರಾವುತ್ ಮತ್ತು ಕಾಂಗ್ರೆಸ್ನ ಮನೀಶ್ ತಿವಾರಿ ಬೆಲೆ ಏರಿಕೆ ಚರ್ಚೆಯನ್ನು ಆರಂಭಿಸಲಿದ್ದಾರೆ. ಹಾಗಾಗಿ ಈ ವಾರದಿಂದ ಉಪಯುಕ್ತ ಚರ್ಚೆ ನಡೆಯಬಹುದು ಎಂದು ಭರವಸೆಯಿಡಲಾಗಿದೆ.
ಲೋಕಸಭೆಯಲ್ಲಿ ಮಂಗಳವಾರ ರಾಜ್ಯಸಭೆಯಲ್ಲಿ ಬೆಲೆ ಏರಿಕೆ ಕುರಿತಾದ ಚರ್ಚೆ ನಡೆಯಲಿದೆ. ಅಗತ್ಯ ವಸ್ತು ಬೆಲೆ ಏರಿಕೆ ಹಾಗೂ ಜಿಎಸ್ಟಿ ಹೇರಿಕೆ ವಿಷಯಕ್ಕೆ ಸಂಬಂಧಿಸಿದಂತೆ ಸಂಸತ್ತಿನ ಉಭಯ ಸದನಗಳಲ್ಲಿ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವೆ ಜಟಾಪಟಿ ನಡೆಯುತ್ತಲೇ ಇದೆ. ಈ ವೇಳೆ, ರಾಜ್ಯಸಭೆ ಉಪ ಸಭಾಪತಿಗಳ ಮುಖದ ಮೇಲೆ ಕಾಗದ ಎಸೆದ ಆಪ್ ಸಂಸದ ಸಂಜಯ ಸಿಂಗ್ ಅವರನ್ನು ಶುಕ್ರವಾರದವರೆಗೆ ಸದನದಿಂದ ಅಮಾನತು ಮಾಡಲಾಗಿತ್ತು.
ಇದರೊಂದಿಗೆ ರಾಜ್ಯಸಭೆಯಲ್ಲಿ ಅಮಾನತಾದ ಸಂಸದರ ಸಂಖ್ಯೆ 20ಕ್ಕೇರಿತ್ತು.
ಮುಂಗಾರು ಅಧಿವೇಶ ಆರಂಭದಿಂದಲೂ ಪ್ರತಿಭಟನೆಗೆ ಒಳಗಾಗಿರುವುದರಿಂದ 2ನೇ ವಾರದ ಅಂತ್ಯಕ್ಕೆ ರಾಜ್ಯಸಭೆಯ ಉತ್ಪಾದಕತೆ ಕೇವಲ ಶೇ.16ರಷ್ಟಿದೆ. ಅಲ್ಲದೇ ರಾಜ್ಯಸಭೆಯಲ್ಲಿ ಯಾವುದೇ ಮಸೂದೆಗಳು ಅಂಗೀಕಾರ ಪಡೆದುಕೊಂಡಿಲ್ಲ. 10 ದಿನಗಳಲ್ಲಿ ರಾಜ್ಯಸಭೆಯ ಕಲಾಪ ಕೇವಲ 11 ಗಂಟೆ 8 ನಿಮಿಷಗಳ ಕಾಲ ಮಾತ್ರ ನಡೆದಿದೆ.
ಇದನ್ನು ಪ್ರಜಾಪ್ರಭುತ್ವದ ವಿನಾಶ ಎಂದು ಕರೆದಿರುವ ಸಭಾಧ್ಯಕ್ಷ ವೆಂಕಯ್ಯನಾಯ್ಡು ಬೇಸರ ವ್ಯಕ್ತಪಡಿಸಿದ್ದಾರೆ.