ರಾಜ್ಯಾದ್ಯಂತ ದಾವಣಗೆರೆಯಲ್ಲಿ ಆ.3 ರಂದು ನಡೆಯಲಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬದ ಸಮಾವೇಶದ ಬಗ್ಗೆಯೇ ಚರ್ಚೆ ನಡೆದಿದೆ. ವರ್ಷದೊಳಗೆ ಎದುರಾಗಲಿರುವ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಪ್ರೀತಿಯಿಂದ ಕರೆಯುವ ಸಿದ್ದರಾಮೋತ್ಸವ ರಾಜಕೀಯ ವಲಯದಲ್ಲಿ ಮಹತ್ವ ಪಡೆದಿದೆ. ಈ ಸಮಾವೇಶಕ್ಕೆ ಪೂರ್ವಭಾವಿಯಾಗಿ ರಾಜ್ಯ ರಾಜಕೀಯದ ಬೆಳವಣಿಗೆಗಳು, ಬಿಜೆಪಿ ಆಡಳಿತ, ಕಾಂಗ್ರೆಸ್ ಮುಂದಿರುವ ಸವಾಲುಗಳ ಬಗ್ಗೆ ಸಿದ್ದರಾಮಯ್ಯನವರು ಮುಕ್ತವಾಗಿ ಮಾತನಾಡಿದ್ದಾರೆ.
ನಾನು ಯಾವತ್ತೂ ಜನ್ಮದಿನ ಆಚರಿಸಿಕೊಂಡವನಲ್ಲ. ಏಕೆಂದರೆ ಅದು ನನ್ನ ನಿಜವಾದ ಹುಟ್ಟುಹಬ್ಬವಲ್ಲ. ಶಾಲೆಯಲ್ಲಿ ಮಾಸ್ಟರ್ ನಮೂದಿಸಿದ ದಿನಾಂಕ. ನನ್ನ ಕೆಲ ಸ್ನೇಹಿತರು ಹಾಗೂ ಹಿತೈಷಿಗಳು ಆ ದಿನಾಂಕದ ಪ್ರಕಾರ 75 ವರ್ಷ ಆಗುತ್ತದೆ, ರಾಜಕಾರಣಕ್ಕೆ ಬಂದು 45 ವರ್ಷ ಆಗುತ್ತದೆ ಎಂಬ ಕಾರಣಕ್ಕೆ ಆಚರಣೆ ಮಾಡುತ್ತಿದ್ದಾರೆಯೇ ಹೊರತು ಬೇರೆ ಯಾವ ಉದ್ದೇಶವೂ ಇಲ್ಲ. ಇದು ನನಗಾಗಿ ಮಾಡುತ್ತಿರುವ ಉತ್ಸವವೂ ಅಲ್ಲ. ಇಂದಿನ ರಾಜಕೀಯ ವ್ಯವಸ್ಥೆ, ದೇಶದ ಮುಂದಿರುವ ಸಮಸ್ಯೆ ಮೆಲಕು ಹಾಕಲು, ಪರಿಹಾರ ಕಂಡುಕೊಳ್ಳಲು, ಜನರನ್ನು ಎಚ್ಚರಿಸಲು ಚರ್ಚೆಗಳು ನಡೆಯುವ ಒಂದು ಕಾರ್ಯಕ್ರಮವಾಗಿರುತ್ತದೆ. ನಾನು ನಿಮಿತ್ತ ಮಾತ್ರ ಎಂದಿದ್ದಾರೆ.