ಕಾರ್ಯಕರ್ತರನ್ನು ಮತೀಯ ವ್ಯಸನಿಗಳನ್ನಾಗಿ ಮಾಡಿ ಸ್ವಾರ್ಥ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ರಾಜ್ಯ ಬಿಜೆಪಿಯ ಅಸಲಿ ಮುಖವಾಡ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಯಿಂದ ಬಹಿರಂಗವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಮಾಧ್ಯಮವರ ಮೇಲೆ ಹಲ್ಲೆ ಮಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಬಿಜೆಪಿ ವಿರುದ್ಧ ಕುಮಾರಸ್ವಾಮಿ ಸರಣಿ ಟ್ವಿಟ್ ಮಾಡಿದ್ದಾರೆ. ಕಂಡ ಕಂಡವರ ಬಡ ಮಕ್ಕಳ ಕಗ್ಗೊಲೆ, ಬಡ ಯುವಕರ ನೆತ್ತರಿನ ಮೇಲೆ ಸುಖದಸೌಧ ಕಟ್ಟುತ್ತಿರುವ ಬಿಜೆಪಿಗೆ ಪಾಪಪ್ರಜ್ಞೆ ಇಲ್ಲ. ಇದು ಅತ್ಯಂತ ಹೇಯ ಮತ್ತು ಪಾತಕ, ರಾಕ್ಷಸೀ ರಾಜಕಾರಣದ ಪರಾಕಾಷ್ಠೆ ಎಂದು ಅವರು ಖಾರವಾಗಿ ಬಿಜೆಪಿಯ ನಾಯಕರ ವರ್ತನೆ ಕುರಿತು ಜರಿದಿದ್ದಾರೆ.
ಬಿಜೆಪಿ ಯುವ ಮೋರ್ಚಾ ಕಾರ್ಯಾಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ವಿರೋಧಿಸಿ ಕೆಲವು ಬಿಜೆಪಿ ಕಾರ್ಯಕರ್ತರು ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಕಾರ್ಯಕರ್ತರಲ್ಲಿ ಪ್ರಬುದ್ಧತೆ ಇಲ್ಲ. ಹೀಗಾಗಿ ಹತ್ಯೆ ಖಂಡಿಸಿ ರಾಜೀನಾಮೆ ನೀಡುತ್ತಿದ್ದಾರೆ.
ರಾಜೀನಾಮೆ ವಾಪಸ್ ಪಡೆಯಬೇಕು. ಬಿಜೆಪಿ ರಾಜ್ಯ ಘಟಕ ಒಂದೇ ವೇಳೆ ರಾಜೀನಾಮೆ ಸ್ವೀಕರಿಸಿದರೆ ಬೇರೆ ಕಾರ್ಯಕರ್ತರು ಬರುತ್ತಾರೆ. ಬಿಜೆಪಿಗೇನು ಕಾರ್ಯಕರ್ತರು ಸಿಗುವುದಿಲ್ಲವೇ ಎಂದರು.
ಕೆ.ಎಸ್. ಈಶ್ವರಪ್ಪನವರ ಈ ಹೇಳಿಕೆ ವಿರುದ್ಧ ಹಾಗೂ ಕಾರ್ಯಕರ್ತರ ವಿಚಾರದ, ಕೊಲೆ ಪ್ರಕರಣಗಳಲ್ಲಿ ಬಿಜೆಪಿ ನಡೆದುಕೊಳ್ಳುವ ಕುರಿತು ಮಾಜಿ ಕುಮಾರಸ್ವಾಮಿ ಸರಣಿ ಟ್ವಟ್ ಮಾಡಿ ಕಿಡಿ ಕಾರಿದ್ದಾರೆ.