ಮುಂಬಡ್ತಿ ಮತ್ತು ವಾರ್ಷಿಕ ವೇತನ ಬಡ್ತಿ ಪಡೆಯಲು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಯಲ್ಲಿ ಉತ್ತೀರ್ಣರಾಗುವುದನ್ನು ಕಡ್ಡಾಯಗೊಳಿಸಿರುವ ರಾಜ್ಯ ಸರ್ಕಾರದ ನಿಯಮವೇ ಈಗ ಅವ್ಯವಹಾರಕ್ಕೆ ಆಸ್ಪದವಾಗಿದೆ.
ಅನೇಕ ಬಾರಿ ಪರೀಕ್ಷೆ ಬರೆದರೂ ಅನುತ್ತೀರ್ಣರಾಗಿರುವವರು ಮತ್ತು ಕಂಪ್ಯೂಟರ್ ಜಜ್ಞಾನವಿಲ್ಲದೆ ಪರೀಕ್ಷೆಗೆ ಹಾಜರಾಗಲು ಹೆದರುತ್ತಿರುವ ನೌಕರರು ಅಡ್ಡದಾರಿ ಹಿಡಿದಿದ್ದಾರೆ.
ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷಾ ಕೇಂದ್ರದ ಸಿಬ್ಬಂದಿ, ತಲಾ ನೌಕರನಿಂದ 20ರಿಂದ 30 ಸಾವಿರ ರೂ. ಲಂಚ ಪಡೆದು ಪಾಸ್ ಆಗಲು ಸಹಾಯ ಮಾಡುತ್ತಿರುವ ಆರೋಪಗಳು ಕೇಳಿಬಂದಿವೆ.
ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಮತ್ತು ನೌಕರರು, ನಿಗಮ ಮಂಡಳಿಗಳ ಅಧಿಕಾರಿ ಮತ್ತು ನೌಕರರು ಪರೀಕ್ಷೆ ತೆಗೆದುಕೊಳ್ಳುವ ಅವಧಿಯನ್ನು 2022ರ ಡಿ.31ರವರೆಗೂ ಸರ್ಕಾರ ವಿಸ್ತರಿಸಿದೆ. ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ನಿಗಮ-ಮಂಡಳಿ ಸೇರಿ ಕೆಲ ಇಲಾಖೆಗಳ ನೌಕರರು ಅನೇಕ ಬಾರಿ ಪರೀಕ್ಷೆಗೆ ಹಾಜರಾದರೂ, ಉತ್ತೀರ್ಣರಾಗಿಲ್ಲ. ಪ್ರಥಮ ಬಾರಿ ಪರೀಕ್ಷೆಗೆ ಉಚಿತ ಅವಕಾಶ ಇರುತ್ತದೆ. ಬಳಿಕ ಅವಕಾಶಗಳಿಗೆ 359 ರೂ. ಮತ್ತು ಬ್ಯಾಂಕ್ ಸರ್ವೀಸ್ ಶುಲ್ಕವನ್ನು ನೌಕರನೇ ಪಾವತಿಸಬೇಕು.
2021ರ ಅಂತ್ಯದವರೆಗೆ 2.55 ಲಕ್ಷ ನೌಕರರು ನೋಂದಣಿ ಮಾಡಿಕೊಂಡಿದ್ದು, 2.46 ಲಕ್ಷ ನೌಕರರು ಪರೀಕ್ಷೆ ಬರೆದಿದ್ದಾರೆ. ಇದರಲ್ಲಿ 1.65 ಲಕ್ಷ ನೌಕರರ ಮಾತ್ರವೇ ಉತ್ತೀರ್ಣರಾಗಿದ್ದರು. ಉಳಿದ 90 ಸಾವಿರಕ್ಕೂ ಅಧಿಕ ಮಂದಿ ಫೇಲ್ ಆಗಿದ್ದರು. ರಾಜ್ಯದಲ್ಲಿ ಇನ್ನೂ ಅಂದಾಜು 3.50 ಲಕ್ಷಕ್ಕೂ ಅಧಿಕ ಅಧಿಕಾರಿಗಳು ಮತ್ತು ನೌಕರರು ಪರೀಕ್ಷೆ ತೆಗೆದುಕೊಳ್ಳಬೇಕಿದೆ. ಹೀಗಾಗಿಯೇ 2022ರ ಅಂತ್ಯದವರೆಗೂ ಅವಧಿ ವಿಸ್ತರಿಸಲಾಗಿದೆ. ಆದರೆ, ಈಗಾಗಲೆ ಹಲವರು ಹಲವು ಸಲ ಪರೀಕ್ಷೆ ತೆಗೆದುಕೊಂಡರೂ ಪಾಸ್ ಆಗಿಲ್ಲ. ಪ್ರತಿ ಬಾರಿಯೂ ಒ ಒ ಮೂಲಕ ಜೇಬಿಗೂ ಕತ್ತರಿ. ಆದ್ದರಿಂದ, ಲಂಚ ಕೊಟ್ಟು ಪಾಸ್ ಆಗೋಣ ಎನ್ನುವ ಮನಃಸ್ಥಿತಿಗೆ ನೌಕರರು ಬಂದಿದ್ದಾರೆ.
ಯಾವುದೇ, ಇಲಾಖೆ ಪರೀಕ್ಷೆಯಾದರೂ ತರಬೇತಿ ಕೊಟ್ಟು ಬಳಿಕ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ಕೊಡಬೇಕು. ಆದರೆ, ಸಿಎಲ್ಟಿ ಪರೀಕ್ಷೆ ಬಗ್ಗೆ ಯಾವುದೇ ಟ್ರೖೆನಿಂಗ್ ಕೊಡದೆ ನೇರವಾಗಿ ಹೋಗಿ ಪರೀಕ್ಷೆ ಬರೆಯಬೇಕಿದೆ. ಹೀಗಾಗಿ ಕಂಪ್ಯೂಟರ್ ಜ್ಞಾನ ಇಲ್ಲದ ನೌಕರರು, ಎಷ್ಟು ಬಾರಿ ಪರೀಕ್ಷೆ ಬರೆದರೂ ಉತ್ತೀರ್ಣರಾಗಲು ಸಾಧ್ಯವಾಗುತ್ತಿಲ್ಲ. ಗಣಕೀಕೃತ ಪದಗಳಾಗಿರುವುದರಿಂದ ಅಷ್ಟು ಸುಲಭವಾಗಿ ಅರ್ಥ ಮಾಡಿಕೊಳ್ಳಲೂ ಆಗಲ್ಲ.
ಎಂಎಸ್ ವರ್ಡ್ನಲ್ಲಿ ಫಾಂಟ್ ಸೈಜ್ ಹೆಚ್ಚು ಮಾಡಲು ಯಾವ ಮೆನುಗೆ ಹೋಗಬೇಕು? ಕೀ ಪ್ಯಾಡ್ನಲ್ಲಿ ಎಷ್ಟು ಅಕ್ಷರಗಳಿವೆ? ಸಿಪಿಯು ಎಂದರೇನು? ಹೀಗೆ 80 ಪ್ರಶ್ನೆಗಳಿಗೆ 90 ನಿಮಿಷದಲ್ಲಿ ಉತ್ತರಿಸಬೇಕು. ಟೆಕ್ನಿಕಲ್ ಕೋರ್ಸ್ ಮಾಡಿರುವವರು ಹಾಗೂ ದಿನನಿತ್ಯ ಕಂಪ್ಯೂಟರ್ ಒಡನಾಟ ಇರುವ ಕ್ಲರಿಕಲ್ ಸಿಬ್ಬಂದಿ ಹೊರತುಪಡಿಸಿ ಬೇರೆಯವರು ಸರಳವಾಗಿ ಉತ್ತರಿಸಲು ಸಾಧ್ಯವಿಲ್ಲ ಎನ್ನುವುದು ಬಹುತೇಕ ಅಧಿಕಾರಿ ಮತ್ತು ನೌಕರರ ಅಭಿಪ್ರಾಯವಾಗಿದೆ.