ದೇಶದ 15ನೇ ರಾಷ್ಟ್ರಪತಿಯಾಗಿ, ಅತ್ಯುನ್ನತ ಸಂವಿಧಾನದ ಹುದ್ದೆ ಏರಿದ ಪ್ರಥಮ ಬುಡಕಟ್ಟು ಜನಾಂಗದ ಮಹಿಳೆಯಾಗಿ ಮತ್ತು ರಾಷ್ಟ್ರಪತಿ ಹುದ್ದೆಯ ಸ್ಥಾನಕ್ಕೇರಿದ 2ನೇ ಮಹಿಳೆಯಾಗಿ ಸಂಸತ್ತಿನ ಸೆಂಟ್ರಲ್ ಸಭಾಂಗಣದಲ್ಲಿ ಇಂದು ಪ್ರಮಾಣ ವಚನ ಸ್ವೀಕರಿಸಿದ ನಂತರ ದ್ರೌಪದಿ ಮುರ್ಮು ಐತಿಹಾಸಿಕ ಭಾಷಣ ಮಾಡಿದ್ದಾರೆ.
ಇಂದು ಎಲ್ಲಾ ಭಾರತೀಯರ ನಿರೀಕ್ಷೆಗಳು, ಆಕಾಂಕ್ಷೆಗಳು ಮತ್ತು ಹಕ್ಕುಗಳ ಸಂಕೇತವಾಗಿರುವ ಸಂಸತ್ತಿನಲ್ಲಿ ನಿಂತುಕೊಂಡು ನಾನು ನಿಮ್ಮೆಲ್ಲರಿಗೂ ವಿನಮ್ರವಾಗಿ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಈ ಹೊಸ ಜವಾಬ್ದಾರಿಯನ್ನು ನಿರ್ವಹಿಸಲು ನಿಮ್ಮ ನಂಬಿಕೆ ಮತ್ತು ಬೆಂಬಲ ನನಗೆ ಪ್ರಮುಖ ಶಕ್ತಿಯಾಗಿದೆ ಎಂದು ಮೊದಲ ನುಡಿಯನ್ನಾಡಿದರು.
ಸ್ವತಂತ್ರ ಭಾರತದಲ್ಲಿ ಜನಿಸಿದ ದೇಶದ ಮೊದಲ ರಾಷ್ಟ್ರಪತಿ ನಾನು. ಸ್ವತಂತ್ರ ಭಾರತದ ನಾಗರಿಕರೊಂದಿಗೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಹೊಂದಿದ್ದ ನಿರೀಕ್ಷೆಗಳನ್ನು ಪೂರೈಸಲು ನಾವು ನಮ್ಮ ಪ್ರಯತ್ನಗಳನ್ನು ವೇಗಗೊಳಿಸಬೇಕಾಗಿದೆ ಎಂದರು.
ರಾಷ್ಟ್ರಪತಿ ಹುದ್ದೆ ತಲುಪಿದ್ದು ನನ್ನ ವೈಯಕ್ತಿಕ ಸಾಧನೆಯಲ್ಲ. ಇದು ಭಾರತದ ಪ್ರತಿಯೊಬ್ಬ ಬಡವರ ಸಾಧನೆ. ನನ್ನ ನಾಮನಿರ್ದೇಶನವು ಭಾರತದಲ್ಲಿನ ಬಡವರ ಕನಸುಗಳನ್ನು ನನಸಾಗಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.
ವರ್ಷಗಟ್ಟಲೆ ಅಭಿವೃದ್ಧಿ ಕಾಣದ ಬಡವರು, ದಲಿತರು, ಹಿಂದುಳಿದವರು, ಗಿರಿಜನರು- ನನ್ನನ್ನು ತಮ್ಮ ಪ್ರತಿಬಿಂಬವಾಗಿ ನೋಡುತ್ತಾರೆ ಎಂಬ ತೃಪ್ತಿ ನನಗಿದೆ. ನನ್ನ ನಾಮನಿರ್ದೇಶನದ ಹಿಂದೆ ಬಡವರ ಆಶೀರ್ವಾದವಿದೆ, ಇದು ಕೋಟಿಗಟ್ಟಲೆ ಮಹಿಳೆಯರ ಕನಸುಗಳು ಮತ್ತು ಸಾಮರ್ಥ್ಯಗಳ ಪ್ರತಿಬಿಂಬವಾಗಿದೆ ಎಂದು ಕೂಡ ಪ್ರತಿಜ್ಞಾ ವಿಧಿ ಸ್ವೀಕಾರ ನಂತರ ಹೇಳಿದರು.