ಪ್ರಪಂಚದಲ್ಲೇ ಅತ್ಯಧಿಕ ಪ್ರಮಾಣದಲ್ಲಿರುವ ಭಾರತದ ಯುವ ಶಕ್ತಿಯ ಬಗ್ಗೆ ಜಗತ್ತೇ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದು ಭಾರತದ ಯುವಕ-ಯುವತಿಯರು ಮನಸ್ಸು ಮಾಡಿದರೆ ಭವಿಷ್ಯದಲ್ಲಿ ಜಗತ್ತನ್ನೇ ಆಳಬಹುದು ಎಂಬುದನ್ನು ನಾವು ನಿಜಮಾಡಿ ತೋರಿಸಬೇಕಾಗಿದೆ, ಇದಕ್ಕಾಗಿ ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಭವಿಷ್ಯ ದೊಂದಿಗೆ ಜಾಗತಿಕ ನಿರೀಕ್ಷೆಯನ್ನೂ ಗಮನದಲ್ಲಿಟ್ಟುಕೊಂಡು ಮುಂದುವರಿಯಬೇಕಿದೆ ಎಂದು ಹಿರಿಯ ಪತ್ರಕರ್ತ ಎಚ್.ಬಿ. ಮಂಜುನಾಥ್ ಅಭಿಪ್ರಾಯಪಟ್ಟರು.
ಅವರಿಂದು ಮಾಗನೂರು ಬಸಪ್ಪ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ವಿದ್ಯಾರ್ಥಿ ವೇದಿಕೆ ಉದ್ಘಾಟನೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಯೋಜನೆಗಳನ್ನು ರೂಪಿಸಿಕೊಳ್ಳುವಾಗ ತಮ್ಮ ಹಿತವನ್ನಷ್ಟೇ ಅಲ್ಲ ಜಗತ್ತಿನ ಹಿತವನ್ನೂ ಗಮನದಲ್ಲಿಟ್ಟು ಮುಂದಡಿ ಇಡಬೇಕಿದೆ. ಇದಕ್ಕಾಗಿ ನಾಯಕತ್ವ ಗುಣವನ್ನು ವಿದ್ಯಾರ್ಥಿದೆಸೆಯಿಂದಲೇ ರೂಢಿಸಿಕೊಳ್ಳಬೇಕಿದೆ. ನಾಯಕತ್ವ ಗುಣ ಎಂದರೆ ಕೇವಲ ಆಳುವುದು ಎಂದಲ್ಲ, ಆಳಾಗಲೂ ಸಿದ್ಧವಿರಬೇಕು, ಮುಖ್ಯವಾಗಿ ಮನಸ್ಸು ಹರಿಬಿಡದೇ ಬುದ್ಧಿಯ ನಿಯಂತ್ರಣದಲ್ಲಿರಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಗನೂರು ಬಸಪ್ಪ ಪದವಿಪೂರ್ವ ಕಾಲೇಜಿನ ನಿರ್ದೇಶಕ ಡಾ.ಜಿ.ಎನ್.ಹೆಚ್.ಕುಮಾರ್ ರವರು ಶ್ರದ್ಧೆಯಿಂದ ಓದಿದರೆ ಯಶಸ್ಸು ಸಾಧ್ಯ, ಓದಿನಲ್ಲಿ ಆಸಕ್ತಿ ಮುಖ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟಿನ ಗೌರವ ಕಾರ್ಯದರ್ಶಿ ಸಂಗಮೇಶ್ವರ ಗೌಡರು ಶೈಕ್ಷಣಿಕ ಜೀವನದಲ್ಲಿ ಸೌಲಭ್ಯ, ಸುಖ ಮುಖ್ಯವಲ್ಲ, ಅಧ್ಯಯನವೇ ಮುಖ್ಯ, ಪ್ರತಿಭಾವಂತರ ಸಾಧನೆಯಿಂದ ಪ್ರೇರೇಪಣೆಗೊಂಡು ಪ್ರತಿ ವಿದ್ಯಾರ್ಥಿಯೂ ಸಾಧನೆ ಮಾಡಬೇಕೆಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಪ್ರಸಾದ್ ಬಂಗೇರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸ್ವಾಗತವನ್ನು ವಿದ್ಯಾರ್ಥಿ ನಾಗರಾಜ ಸಿ.ಇ. ಕೋರಿದರು, ತರಗತಿ ಪ್ರತಿನಿಧಿಗಳ ಪರಿಚಯವನ್ನು ವಿದ್ಯಾರ್ಥಿ ಷಣ್ಮುಖಪ್ಪ ಮಾಡಿದರು. ಉಪನ್ಯಾಸಕ ಸಮಿತಿಗಳ ಪರಿಚಯವನ್ನು ಉಪನ್ಯಾಸಕರ ಕಾರ್ಯದರ್ಶಿ ಸುರೇಖಾ ಜಗದೀಶ್ ಮಾಡಿದರು.
ಮುಖ್ಯ ಅತಿಥಿಗಳ ಪರಿಚಯವನ್ನು ವಿದ್ಯಾರ್ಥಿನಿ ನಿಧಿ ಸಿ.ಆರ್. ಮಾಡಿದರೆ ಬಹುಮಾನಿತರ ಹೆಸರುಗಳನ್ನು ವಿದ್ಯಾರ್ಥಿ ಆದರ್ಶ ಬಿ. ವಾಚಿಸಿದರು. ದಿವ್ಶಾಶ್ರೀ ಕೆ.ಪಿ. ನಿರೂಪಿಸಿದ ಕಾರ್ಯಕ್ರಮದಲ್ಲಿ ವಂದನೆಗಳನ್ನು ಆದಿತ್ಯ ಎಂ.ಜೆ. ಸಮರ್ಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳ ನಿರೂಪಣೆಯನ್ನು ವಿದ್ಯಾರ್ಥಿನಿಯರಾದ ತೇಜು ಮತ್ತು ಝೋಹಾ ಖಾನಂ ನಡೆಸಿಕೊಟ್ಟರು.
ಕಾಲೇಜಿನ ಮಾಗನೂರು ಬಸಪ್ಪ ಸಭಾಂಗಣದಲ್ಲಿ ಕಾರ್ಯಕ್ರಮ ನೆರವೇರಿತು.