ಪೋಷಕಾಂಶಗಳ ಕೊರತೆ, ರಕ್ತಹೀನತೆಯಂತಹ ಸಮಸ್ಯೆಗಳಿಂದ ಜನತೆಯನ್ನು ಪಾರು ಮಾಡಲು ಸರ್ಕಾರ 2024 ರ ವೇಳೆಗೆ ದೇಶದಲ್ಲಿ ಸಾರವರ್ಧಿತ ಅಕ್ಕಿ ಒದಗಿಸುವ ಗುರಿಯನ್ನು ಹೊಂದಿದೆ ಎಂದು ದೆಹಲಿಯ ಪಾಥ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಸತ್ಯಬ್ರತ್ ಪಧಿ ಅವರು ತಿಳಿಸಿದರು.
ಶಿವಮೊಗ್ಗದಲ್ಲಿ ಮಾತನಾಡಿ, ಸಾರವರ್ಧಿತ ಅಕ್ಕಿಯ ಮಹತ್ವ, ಅದರ ಗುಣಮಟ್ಟ, ಉತ್ಪಾದನೆ ಹಾಗೂ ವಿತರಣೆ ಬಗ್ಗೆ ನ್ಯಾಯಬೆಲೆ ಅಂಗಡಿ, ಅಕ್ಷರ ದಾಸೋಹ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು.
ರಾಜ್ಯದಲ್ಲಿ ಶೇ.65 ರಷ್ಟು ಮಕ್ಕಳು, ಶೇ.49.4 ರಷ್ಟು ಮಹಿಳೆಯರು, ಶೇ.26.5 ಪುರುಷರು ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಶೇ.19.5 ರಷ್ಟು ಜನರು ವಯಸ್ಸಿಗೆ ತಕ್ಕಂತೆ ಎತ್ತರವಿಲ್ಲ. ಹಾಗೂ ಶೇ.32.9 ರಷ್ಟು ಜನರು ವಯಸ್ಸಿಗೆ ತಕ್ಕಂತೆ ತೂಕವಿಲ್ಲದಿರುವುದು ಕಾಣಬಹುದು ಎಂದರು.
ದೇಶದಲ್ಲಿ ಶೇಕಡ 65 ರಷ್ಟು ಜನರು ಆಹಾರಕ್ಕಾಗಿ ಅಕ್ಕಿಯನ್ನು ಬಳುಸುತ್ತಿದ್ದಾರೆ. ಅವರು ಬಳಸುವ ಅಕ್ಕಿಯನ್ನು ಪಾಲಿಶ್ ಮಾಡಿಸುವುದರಿಂದ ಅದರಲ್ಲಿ ಯಾವುದೇ ಸತ್ವ ಇರುವುದಿಲ್ಲ. ಹಾಗಾಗಿ ದೇಶದಲ್ಲಿ ಜನರು ಪೋಷಕಾಂಶಗಳ ಕೊರತೆಯಿಂದ ರಕ್ತ ಹೀನತೆ, ಇರುಳು ಕುರುಡು ಮುಂತಾದ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ ಎಂದರು.
ಈ ಸಮಸ್ಯೆಗಳನ್ನು ತಪ್ಪಿಸುವ ಉದ್ದೇಶದಿಂದ 2024ರ ವೇಳೆಗೆ ನ್ಯಾಯಬೆಲೆ ಅಂಗಡಿ, ಮಾಲ್ಗಳಲ್ಲಿ, ಅಕ್ಕಿ ಸರಬರಾಜು ಕೇಂದ್ರಗಳು ಸೇರಿದಂತೆ ಎಲ್ಲ ಕಡೆಗಳಲ್ಲೂ ಸಾರವರ್ಧಿತ ಅಕ್ಕಿಯನ್ನು ಸುಲಭವಾಗಿ ಒದಗಿಸುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದರು.
ಅಕ್ಕಿಯ ಬ್ಯಾಗ್ಗಳ ಮೇಲೆ ಪ್ಲಸ್ ಎಫ್ (+ಈ) ಚಿಹ್ನೆಯನ್ನು ಬಳಸಲಾಗುತ್ತದೆ. ಇದು ಸಾರವರ್ಧಿತ ಅಕ್ಕಿಯಾಗಿದ್ದು, ಈ ಚಿಹ್ನೆಯಿಂದಾಗಿ ಸಾಮಾನ್ಯ ಅಕ್ಕಿ ಹಾಗೂ ಸಾರವರ್ಧಿತ ಅಕ್ಕಿಯನ್ನು ಗುರುತಿಸುವುದು ಬಹಳ ಸುಲಭ ಎಂದು ಹೇಳಿದರು.
ಕೇವಲ ಅಕ್ಕಿ ಮಾತ್ರವಲ್ಲದೆ ಹಾಲು, ಉಪ್ಪು, ಎಣ್ಣೆ, ಗೋಧಿ ಹಿಟ್ಟು, ಮುಂತಾದ ಆಹಾರ ಸಾಮಗ್ರಿಗಳಲ್ಲಿ ಕಬ್ಬಿಣಾಂಶಗಳು, ಫಾಲಿಕ್ ಆಸಿಡ್, ವಿಟಮಿನ್ ಬಿ -12, ವಿಟಮಿನ್ ಡಿ ಮುಂತಾದ ಪೋಷಕಾಂಶಗಳನ್ನು ಸೂಕ್ತ ಪ್ರಮಾಣದಲ್ಲಿ ಮಿಶ್ರಣ ಮಾಡಿ ಆಹಾರ, ನಾಗರೀಕ ಸರಬರಾಜು ಕೇಂದ್ರಗಳಲ್ಲಿ ಹಾಗೂ ಮಧ್ಯಾಹ್ನದ ಬಿಸಿ ಊಟದಲ್ಲಿ ನೀಡಲಾಗುವುದು ಎಂದು ತಿಳಿಸಿದರು.