ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಹುಟ್ಟಿದ ಊರು ಉಪರಬೇಡ ಗ್ರಾಮದ ಜನ ಕಡೆಗೂ ವಿದ್ಯುತ್ ಸಂಪರ್ಕದ ಭಾಗ್ಯ ಪಡೆದುಕೊಂಡಿದ್ದಾರೆ.
ದೇಶಕ್ಕೆ ಎನ್ಡಿಎಯಿಂದ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆದಿವಾಸಿ ಮಹಿಳೆ ದ್ರೌಪದಿ ಮುರ್ಮು ಘೋಷಣೆ ಆಗುವವರೆಗೆ ಹಲವರು ಅವರ ಹೆಸರನ್ನು ಕೇಳಿರಲಿಲ್ಲ. ಇದೀಗ ದ್ರೌಪದಿ ಮುರ್ಮು ದೇಶಕ್ಕೆ ಪರಿಚಯವಾಗಿದ್ದಾರೆ. ಆದರೆ, ವಿಪರ್ಯಾಸವೆಂದರೆ ದ್ರೌಪದಿ ಮುರ್ಮು ಅವರ ಹುಟ್ಟೂರು ಒಡಿಸ್ಸಾದ ಮಾಯರ್ಭಾಂಜ್ ಜಿಲ್ಲೆಯ ಉಪರಬೇಡ ಗ್ರಾಮಕ್ಕೆ ಇಷ್ಟು ವರ್ಷಗಳ ವರೆಗೂ ವಿದ್ಯುತ್ ಸಂಪರ್ಕ ಮರೀಚಿಕೆಯಾಗಿತ್ತು. ಮಾಯರ್ಭಾಂಜ್ ಜಿಲ್ಲೆಯ ಕುಸುಮ್ ಬ್ಲಾಕ್ನ ಡುಂಗುರಿಶಾಹಿ ಗ್ರಾಮದಲ್ಲಿ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ವಿದ್ಯುತ್ ಸಂಪರ್ಕ ಮಾತ್ರ ಇರಲಿಲ್ಲ.
ದ್ರೌಪದಿ ಮುರ್ಮು ಮಾಯರ್ಭಾಂಜ್ ಜಿಲ್ಲೆಯ ಉಪರಬೇಡ ಗ್ರಾಮದಲ್ಲಿ ಜನಿಸಿದರು. 3,500 ಜನಸಂಖ್ಯೆ ಹೊಂದಿರುವ ಈ ಹಳ್ಳಿಯಲ್ಲಿ ಎರಡು ಕುಗ್ರಾಮಗಳಿವೆ. ಬಡಾ ಶಾಹಿ ಮತ್ತು ಡುಂಗ್ರಿ ಶಾಹಿ. ಬಡಾ ಶಾಹಿಯಲ್ಲಿ ವಿದ್ಯುತ್ ಸಂಪರ್ಕ ಇದೆ. ಆದರೆ, ಡುಂಗ್ರಿ ಶಾಹಿ ಕತ್ತಲೆಯಲ್ಲಿ ಮುಳುಗಿತ್ತು. ಸೀಮೆಎಣ್ಣೆ ದೀಪದ ಮೂಲಕ ರಾತ್ರಿ ವೇಳೆ ಬೆಳಕನ್ನು ಉಪರಬೇಡ ಗ್ರಾಮದ ಜನ ಕಾಣುತ್ತಿದ್ದರು. ಇದೀಗ ದ್ರೌಪದಿ ಮುರ್ಮು ರಾಷ್ಟ್ರಪತಿ ಅಭ್ಯರ್ಥಿಯಾದ ನಂತರ ಹುಟ್ಟೂರಿಗೆ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲಾಗಿದೆ.
ಒಡಿಸ್ಸಾ ಸರ್ಕಾರ ಇಂದು ಮಾಯರ್ಭಾಂಜ್ ಜಿಲ್ಲೆಯ ಉಪರಬೇಡ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯವನ್ನು ಪ್ರಾರಂಭಿಸಿದೆ.
ಹಳ್ಳಿಯ ಜನರು ವಿದ್ಯುತ್ ಇಲ್ಲದೆ ವಾಸಿಸುತ್ತಿದ್ದಾರೆ ಎಂದು ಮಾಧ್ಯಮ ವರದಿ ನಂತರ ಇದೀಗ ಸರ್ಕಾರ ಎಚ್ಚೆತ್ತುಕೊಂಡಿದೆ.
ದ್ರೌಪದಿ ಮುರ್ಮು ಪ್ರಸ್ತುತ ಉಪರಬೇಡ ಗ್ರಾಮದಲ್ಲಿ ವಾಸಿಸುತ್ತಿಲ್ಲ. ಉಪರಬೇಡ ಡುಂಗುರಿಶಾಹಿಯಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಪಟ್ಟಣವಾದ ರೈರಂಗಪುರದಲ್ಲಿ ವಾಸಿಸುತ್ತಿದ್ದಾರೆ.
ದ್ರೌಪದಿ ಮುರ್ಮು ಅವರು ಒಡಿಸ್ಸಾದ ಮಾಯರ್ಭಾಂಜ್ ಜಿಲ್ಲೆಯವರಾಗಿದ್ದಾರೆ. ಬುಡಕಟ್ಟು ಜನಾಂಗ ಮೂಲದ ಮಹಿಳೆ. ಈ ಹಿಂದೆ ಬಿಜೆಪಿ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು. 2015-21ರ ಅವಧಿಯಲ್ಲಿ ಜಾರ್ಖಂಡ್ನ ರಾಜ್ಯಪಾಲರಾಗಿದ್ದರು. ಇದೀಗ 16ನೇ ರಾಷ್ಟ್ರಪತಿ ಚುನಾವಣೆಯ ಎನ್ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.