ಕೊಮ್ಮಘಟ್ಟದಲ್ಲಿ ನಡೆದ ಸಾರ್ವಜನಿಕ ಸಮಾವೇಶದ ವೇದಿಕೆಯ ಹಿಂಭಾಗದಲ್ಲಿ ಉಕ್ರೇನ್ ನಲ್ಲಿ ಮೃತಪಟ್ಟ ಎಂಬಿಬಿಎಸ್ ವಿದ್ಯಾರ್ಥಿ ನವೀನ್ ಗ್ಯಾನ ಗೌಡರ್ ಕುಟುಂಬ ಸದಸ್ಯರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ನವೀನ್ ತಂದೆ ಶೇಖರ ಗೌಡ, ತಾಯಿ, ಸಹೋದರ ಪ್ರಧಾನಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ವೇಳೆ ಹಾಜರಿದ್ದರು.
ಖಾರ್ಕಿವ್ ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ , ಮಾರ್ಚ್ 1 ರಂದು ಬೆಳಗ್ಗೆ ತಿಂಡಿ ತರಲೆಂದು ಹೊರಗೆ ಬಂದಿದ್ದ ವೇಳೆ ರಷ್ಯಾ ಪಡೆಗಳ ಶೆಲ್ ದಾಳಿಗೆ ಸಿಲುಕಿ ಮೃತಪಟ್ಟಿದ್ದ. 20 ದಿನಗಳ ನಂತರ ಕೇಂದ್ರ ಸರಕಾರ ಶತ ಪ್ರಯತ್ನಗಳನ್ನು ಮಾಡಿ ಮೃತ ದೇಹವನ್ನು ತಾಯ್ನಾಡಿಗೆ ತರಲಾಗಿತ್ತು.