ಹೊಸ ಶಿಕ್ಷಣ ನೀತಿಯಲ್ಲಿ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಭಾರತ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲು ಇದು ಪೂರಕವಾಗಿದೆ ಎಂದು ರಾಜ್ಯಪಾಲ ತ್ಯಾವರಚಂದ್ ಗೆಹ್ಲೂಟ್ ಅವರು ಹೇಳಿದ್ದಾರೆ.
ಕುವೆಂಪು ವಿವಿ ಜ್ಞಾನ ಸಹ್ಯಾದ್ರಿಯಲ್ಲಿ ಆಯೋಜಿಸಿದ್ದ 31 ಮತ್ತು 32 ನೇ ಘಟಿಕೋತ್ಸವದಲ್ಲಿ ಅಭ್ಯರ್ಥಿಗಳಿಗೆ ವಿವಿಧ ಪದವಿ ಪ್ರಧಾನ ಮಾಡಿ ಮಾತನಾಡಿದರು.
ಪ್ರಸ್ತುತ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಭಾರತದ ಸಾಧನೆ ತೃಪ್ತಿಕರವಾಗಿಲ್ಲ. ಈ ಬಾರಿ ಒಲಂಪಿಕ್ ಕ್ರೀಡಾಕೂಟದಲ್ಲಿ ಹೆಚ್ಚಿನ ಪದಕಗಳು ಬಂದಿಲ್ಲ. ಆದರೆ, ದಿವ್ಯಾಂಗರ ಒಲಂಪಿಕ್ ನಲ್ಲಿ ಹೆಚ್ಚಿನ ಪದಕಗಳು ಬಂದಿರುವುದು ಶ್ಲಾಘನೀಯ ಎಂದು ತಿಳಿಸಿದ್ದಾರೆ.
ಪದವಿ ಪಡೆದ ವಿದ್ಯಾರ್ಥಿಗಳುಗಳು ದೇಶದ ಹಿತಕ್ಕಾಗಿ ಕೆಲಸ ಮಾಡಬೇಕು. ರಾಷ್ಟ್ರ ಕವಿ ಕುವೆಂಪು ಹೆಸರೇ ವಿವಿ ಗೆ ಪ್ರೇರಣಾದಾಯಕವಾಗಿದೆ. ವಿವಿ ಕೂಡ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವುದರಿಂದ ಇಲ್ಲಿ ಕಲಿಯುವುದೇ ಒಂದು ಹೆಮ್ಮೆ ಎಂದು ಹೇಳಿದ್ದಾರೆ.
ಡಿಗ್ರಿ ಆದ ನಂತರ ಕೇವಲ ಕೆಲಸಕ್ಕಾಗಿ ಹುಡುಕಾಟ ನಡೆಸದೆ ಅಧ್ಯಯನ ನಡೆಸುವ ಮೂಲಕ ದೇಶಕ್ಕೆ ಕೊಡುಗೆ ನೀಡುವಂತಾಗಬೇಕು.ಗುಣಮಟ್ಟದ ನೈತಿಕ ಶಿಕ್ಷಣದಿಂದ ದೇಶದ ಅಭಿವೃದ್ಧಿ ಸಾಧ್ಯವಾಗಲಿದೆ. ದೇಶದ ಉಜ್ವಲ ಭವಿಷ್ಯಕ್ಕೆ ಸರ್ಕಾರ ಜಾರಿಗೆ ತರುವ ಯೋಜನೆಗಳಲ್ಲಿ ನಿಮ್ಮ ಸಹಭಾಗಿತ್ವ ಇರಬೇಕು ಎಂದು ತಿಳಿಸಿದ್ದಾರೆ.
ಗೌರವ ಡಾಕ್ಟರೇಟ್ ಪದವಿ ಪಡೆದವರು ಅವರವರ ಕ್ಷೇತ್ರದಲ್ಲಿ ಅತ್ಯುತಮ ಸಾಧನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಸಾಧನೆ ಮಾದುವಂತಾಗಲಿ. ನಿಮ್ಮ ಜ್ಞಾನ ಯುವ ಪೀಳಿಗೆಗೆ ಹೆಚ್ಚು ಪ್ರೇರಣಾದಾಯಕವಾಗಿರಲಿ ಎಂದು ಹೇಳಿದ್ದಾರೆ.