ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯ 3ನೇ ಅಭ್ಯರ್ಥಿ ಲೇಹರ್ಸಿಂಗ್ ಗೆಲ್ಲಲು , ಕಾಂಗ್ರೆಸ್ ಪಕ್ಷದ ಮುಸ್ಲಿಂ ಅಭ್ಯರ್ಥಿ ಸೋಲಲು ಹಾಗೂ ಜೆಡಿಎಸ್ ಅಭ್ಯರ್ಥಿ ಸೋಲಲು ವಿಪಕ್ಷ ನಾಯಕ ಸಿದ್ದರಾಮಯ್ಯ ನೇರ ಕಾರಣ ಎಂದು ಮಾಜಿ ಸಚಿವ ಹಾಗೂ ಶಾಸಕ ಕೆ.ಎಸ್.ಈಶ್ವರಪ್ಪ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದ, ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದಿಂದ ಗೆದ್ದ 3 ಅಭ್ಯರ್ಥಿಗಳಿಗೆ ಅಭಿನಂದಿಸುತ್ತೇನೆ. ಅದರಂತೆ ಪಕ್ಷದ 3ನೇ ಅಭ್ಯರ್ಥಿ ಗೆಲ್ಲಲು ಕಾರಣರಾಗಿರುವ ಸಿದ್ದರಾಮಯ್ಯ ಅವರಿಗೂ ಸಹ ಅಭಿನಂದಿಸುತ್ತೇನೆ ಎಂದು ಟಾಂಗ್ ನೀಡಿದ್ದಾರೆ.
ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯ ಘಟಕದ ಬೆಂಬಲ ಜೊತೆಗೆ ಮೋದಿ ಅವರ ರಾಷ್ಟಭಕ್ತಿ ಮತ್ತು ಸ್ಪೂರ್ತಿ ಬೆಂಬಲಕ್ಕೆ ನಿಂತಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಮುಸ್ಲಿಂ ಅಭ್ಯರ್ಥಿ ಮನ್ಸೂರ್ ಅವರ ಸೋಲಿಗೆ ಕಾರಣರಾಗಿರುವ ಸಿದ್ದರಾಮಯ್ಯ ಮುಸ್ಲಿಂ ಸಮುದಾಯಕ್ಕೆ ದ್ರೋಹ ಬಗೆದಿರುವುದನ್ನು ಆ ಸಮುದಾಯ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಬಿಜೆಪಿ ಕೋಮು ಶಕ್ತಿ ಎಂದು ಹೇಳುವುದನ್ನು ಕಾಂಗ್ರೆಸ್ ಸುಳ್ಳು ಮಾಡಿದೆ. ಮುಸ್ಲಿಂ ಅಭ್ಯರ್ಥಿ ಸೋಲಿಗೆ ಮಾತ್ರವಲ್ಲದೆ, ಜೆಡಿಎಸ್ ಅಭ್ಯರ್ಥಿ ಸೋಲಿಗೂ ಕಾರಣವಾಗಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿಯ ನಿಲುವಿನಿಂದ ಜಾತ್ಯಾತೀತ ಶಕ್ತಿಗೆ ಸೋಲುಂಟಾಗಿದೆ ಎಂದು ತಿಳಿಸಿದ್ದಾರೆ.
ಪಕ್ಷದ ಸಂಘಟನಾತ್ಮಕ ಶಕ್ತಿಯಿಂದ ಪಕ್ಷದ 3ನೇ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಕಳೆದ ಬಾರಿ ಚುನಾವಣೆಯಲ್ಲಿ ಪೂರ್ಣಬಹುಮತ ಮತದಾರರು ನೀಡದೆ, ಇದ್ದಿದ್ದರಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನಲೆಯಾಗಿದೆ. ಮುಂಬರುವ ಚುನಾವಣೆಯಲ್ಲಿ ಪೂರ್ಣ ಬಹುಮತ ನೀಡಿದರೆ, ರಾಜ್ಯ ಅಭಿವೃದ್ಧಿ ಪಥದತ್ತ ಸಾಗಲಿದೆ ಎಂದ ಅವರು, ಪೂರ್ಣಬಹುಮತ ನೀಡುವಂತೆ ರಾಜ್ಯದ ಜನರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಯಾರ ಪರ ಇರುತ್ತಾರೆ ಎಂಬುದು ಗೊತ್ತಾಗುವುದಿಲ್ಲ. ವೀರಶೈವ ಮತ್ತು ಲಿಂಗಾಯಿತ ಸಮುದಾಯದವರನ್ನು ಹೊಡೆದರು. ಗೋ ಹತ್ಯೆ ನಿಷೇಧಕ್ಕೆ ವಿರೋಧಿಸಿದರು. ಕಾನೂನು ಮೀರಿ ಹಿಜಾಬ್ ಬೆಂಬಲಿಸಿದ ಅವರು ಮಹಾ ಮೋಸಗಾರ ಹಾಗೂ ದೇಶದ್ರೋಹಿ ಎಂದು ವಾಗ್ದಾಳಿ ನಡೆಸಿದರು.ಸಿದರಾಮಯ್ಯ ಯಾರಿಗೂ ಒಳ್ಳೆಯದನ್ನು ಮಾಡಿಲ್ಲ. ಕುರುಬ ಸಮಾಜದ ನಾಯಕರಾದ ಹೆಚ್.ವಿಶ್ವನಾಥ್, ವೈ.ಟಿ.ಮೇಟಿ, ಹೆಚ್.ಎಂ.ರೇವಣ್ಣ, ಎಂಟಿಬಿ ನಾಗರಾಜ್, ಭೈರತಿಬಸವರಾಜ್ ಅವರವನ್ನು ಕೈ ಬಿಟ್ಟರು. ಬಾದಾಮಿ ಕ್ಷೇತ್ರವನ್ನು ಬಿಟ್ಟುಕೊಟ್ಟ ಚಿಮ್ಮನ ಕಟ್ಟಿಯವರನ್ನೇ ಕಡೆಗಣಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ಉಪಮೇಯರ್ ಶಂಕರ್ ಗನ್ನಿ, ಪಾಲಿಕೆ ಸದಸ್ಯರಾದ ಎಸ್.ಎನ್.ಚನ್ನಬಸಪ್ಪ, ಎಸ್.ಜ್ಞಾನೇಶ್ವರ್, ಧೀರರಾಜ್ ಹೊನ್ನವಿಲೆ, ಪ್ರಮುಖರಾದ ಕೆ.ವಿ.ಅಣ್ಣಪ್ಪ, ಸುಧೀಂದ್ರಕಟ್ಟಿ, ಬಾಲು ಉಪಸ್ಥಿತರಿದ್ದರು.