ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತು ಬಿಜೆಪಿ ಮಾಜಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ನೀಡಿದ್ದ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಯುಎಇ, ಇಂಡೊನೇಷ್ಯಾ, ಸೌದಿ ಅರೇಬಿಯಾ, ಬಹರೈನ್, ಜೋರ್ಡನ್ ಮತ್ತು ಅಫ್ಗಾನಿಸ್ತಾನ ಸೇರಿದಂತೆ ಹಲವು ಮುಸ್ಲಿಂ ರಾಷ್ಟ್ರಗಳು ನೂಪುರ್ ಶರ್ಮಾ ಹೇಳಿಕೆ ವಿರುದ್ಧ ತಿರುಗಿ ಬಿದ್ದಿವೆ.
ಇನ್ನೊಂದೆಡೆ ಭಾರತದಲ್ಲಿರು. ಮುಸ್ಲಿಮರು ಕೂಡ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ.
ಉತ್ತರ ಪ್ರದೇಶದ ಮೊರಾದಾಬಾದ್, ಪ್ರಯಾಗ್ ರಾಜ್, ದೆಹಲಿ ಜಾಮಿಯ ಮಸೀದಿ, ಹೈದರಾಬಾದ್, ಅಹ್ಮದಾಬಾದ್, ಕಾಶ್ಮೀರದ ಶ್ರೀನಗರ, ಪಶ್ಚಿಮ ಬಂಗಾಳದ ಹಲವೆಡೆ ಮತ್ತು ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ.
ಇಸ್ಲಾಂ ಧರ್ಮದ ಸಂಕೇತದ ವಿರುದ್ಧದ ಪೂರ್ವಗ್ರಹವನ್ನು ತಿರಸ್ಕರಿಸುತ್ತೇವೆ. ಯಾವುದೇ ಧರ್ಮದವರು ಇಸ್ಲಾಂ ಧರ್ಮದ ವಿರುದ್ಧ ಮಾತಾಡಿದ್ರೆ ಹೋರಾಟ ಮಾಡುತ್ತೇವೆ ಎಂದು ಸೌದಿ ಅರೇಬಿಯಾದ ವಿದೇಶಾಂಗ ಸಚಿವಾಲಯ ಹೇಳಿದೆ.
ಇನ್ನು, ಮುಸ್ಲಿಮರ ಪ್ರತಿಭಟನಾ ಕಾವು ಹಲವು ಕಡೆ ಹಿಂಸಾಚಾರಕ್ಕೂ ಕಾರಣವಾಗಿದೆ. ಉತ್ತರಪ್ರದೇಶದ ಪ್ರಯಾಗ್ರಾಜ್ ಹಾಗೂ ಪಶ್ಚಿಮ ಬಂಗಾಳದ ಹೌರಾದಲ್ಲಿ ಕಲ್ಲು ತೂರಾಟ ನಡೆಸಲಾಗಿದೆ. ಈ ಪರಿಸ್ಥಿತಿ ನಿಯಂತ್ರಿಸಲು ಹೋದ ಪೊಲೀಸರ ಮೇಲೂ ಹಲ್ಲೆ ನಡೆದ ವರದಿಗಳಾಗಿವೆ. ದೆಹಲಿ, ಹೈದಾರಾಬಾದ್, ಲಖನೌ, ಶ್ರೀನಗರ ಮತ್ತು ಅಹಮದಾಬಾದ್ನಲ್ಲೂ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಭಾರತ ಕ್ಷಮೆಗೆ ಪಟ್ಟು
ಇನ್ನೊಂದೆಡೆ ನೂಪುರ್ ಶರ್ಮಾ ಹೇಳಿಕೆಗೆ ಭಾರತ ಕ್ಷಮೆ ಯಾಚಿಸಬೇಕು ಎಂದು ಮುಸ್ಲಿಂ ರಾಷ್ಟ್ರಗಳು ಪಟ್ಟು ಹಿಡಿದಿವೆ.
ನೂಪುರ್ ಶರ್ಮಾ ಬಿಜೆಪಿ ಮಾಜಿ ರಾಷ್ಟ್ರೀಯ ವಕ್ತಾರರು. ಸುದ್ದಿ ವಾಹಿನಿಯೊಂದರ ಚರ್ಚೆಯ ಸಂದರ್ಭದಲ್ಲಿ ಪ್ರವಾದಿ ಮೊಹಮ್ಮದ್ ಕುರಿತು ನೀಡಿದ ಹೇಳಿಕೆ ಕಾರಣದಿಂದಾಗಿ ನೂಪುರ್ ಶರ್ಮಾ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.
ನೂಪುರ್ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಸದಸ್ಯೆಯಾಗಿದ್ದರು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಿಂದ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.