ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಳ್ಳಾರಿ ಘಟಕದ ವತಿಯಿಂದ 2022-23ನೇ ಸಾಲಿನ ವಿವಿಧ ದರ್ಜೆಯ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ರಿಯಾಯಿತಿ ದರದ ಬಸ್ ಪಾಸ್ಗಳನ್ನು ಜೂ.06ರಿಂದ ವಿತರಿಸಲಾಗುತ್ತದೆ ಎಂದು ಕಕರಸಾ ಸಂಸ್ಥೆ ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಇನಾಯತ್ ಬಾಗ್ಖಾನ್ ಅವರು ಹೇಳಿದ್ದಾರೆ.
ಅಗತ್ಯ ದಾಖಲಾತಿಗಳನ್ನು ಸಲ್ಲಿಸುವುದರೊಂದಿಗೆ ಬಸ್ಪಾಸ್ಗಳನ್ನು ಬಳ್ಳಾರಿ ಕೇಂದ್ರ ಬಸ್ನಿಲ್ದಾಣ, ಕುರುಗೋಡು, ಕಂಪ್ಲಿ, ಸಿರುಗುಪ್ಪ ಹಾಗೂ ಸಂಡೂರು ಬಸ್ನಿಲ್ದಾಣಗಳಲ್ಲಿ ಪಡೆಯಬಹುದು.
ವಿಧ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸುವ ವಿಧಾನ ಹೀಗಿದೆ. ವಿದ್ಯಾರ್ಥಿಗಳು ಬಸ್ ಪಾಸ್ ಪಡೆಯಲು ಆನ್ಲೈನ್ ಸೇವಾಸಿಂಧು ಪೋರ್ಟಲ್ ಮುಖಾಂತರ ಅರ್ಜಿ ಸಲ್ಲಿಸಿ ಅರ್ಜಿಯನ್ನು ಶಾಲಾ ಕಾಲೇಜು ಮುಖ್ಯಸ್ಥರು, ದೃಢೀಕರಣ ಮಾಡಿದ ಅರ್ಜಿ, ಶಾಲಾ ಕಾಲೇಜಿನಲ್ಲಿ ಪ್ರವೇಶ ಪಡೆದ ಬಗ್ಗೆ ಶುಲ್ಕ ಪಾವತಿ ಚೀಟಿಗಳೊಂದಿಗೆ ಶಾಲಾ ಕಾಲೇಜುಗಳಿಂದ ನಿಯೋಜಿಸಿದ ಜವಾಬ್ದಾರಿಯುತ ಪ್ರತಿನಿಧಿಗೆ ಸಲ್ಲಿಸುವುದು. ಮನೆ ವಿಳಾಸಕ್ಕೆ ಸಂಬಂಧಿಸಿದಂತೆ ಕುಟುಂಬ ಪಡಿತರಚೀಟಿ ಅಥವಾ ದೂರವಾಣಿ ಅಥವಾ ವಾಸಸ್ಥಳ ಪ್ರಮಾಣಪತ್ರ ಅಥವಾ ಮತದಾರರ ಗುರುತಿನ ಚೀಟಿ ಅಥವಾ ಗ್ರಾಮ ಲೆಕ್ಕಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ. ಕಡ್ಡಾಯವಾಗಿ ವಿದ್ಯಾರ್ಥಿ ಆಧಾರ್ಕಾರ್ಡ್. ಇತ್ತೀಚಿನ 3 ಭಾವಚಿತ್ರಗಳು, ಸರಕಾರದಿಂದ ನೀಡಿದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಾನ್ಯತಾ ಅವಧಿ ಹೊಂದಿರುವ ಮೀಸಲಾತಿ ಪ್ರಮಾಣ ಪತ್ರ. ಶೈಕ್ಷಣಿಕ ಸಂಸ್ಥೆಯಿಂದ ವಾಸಸ್ಥಳಕ್ಕೆ 60 ಕಿ.ಮೀ. ಗರಿಷ್ಟ ಅಂತರವಿರುವ ವಿದ್ಯಾರ್ಥಿಗಳು ಮಾತ್ರ ಅರ್ಹರಿರುತ್ತಾರೆ. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ನೇರವಾಗಿ ಬಸ್ ಪಾಸ್ ಕೌಂಟರ್ಗೆ ಬಂದಲ್ಲಿ ಬಸ್ಪಾಸ್ ನೀಡಲಾಗುವುದಿಲ್ಲ. ಶಾಲೆ ಅಥವಾ ಕಾಲೇಜುಗಳಿಂದ ನಿಯೋಜಿಸಿದ ಜವಾಬ್ದಾರಿಯುತ ಪ್ರತಿನಿಧಿಗಳು, ಬಸ್ ಪಾಸ್ ಕೌಂಟರ್ ಗೆ ಪಾಸ್ ಅರ್ಜಿ ಮತ್ತು ಪಾಸ್ ಮೊತ್ತವನ್ನು ಪಾವತಿಸಿ, ನಂತರ ಬರೆದ ಪಾಸ್ಗಳನ್ನು ಕೌಂಟರ್ ಗಳಿಂದ ಪ್ರತಿನಿಧಿಗಳಿಗೆ ನೀಡಿ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ತಿಳಿಸಿದ್ದಾರೆ.