ಜಗತ್ತು ಬದಲಾಗುತ್ತಿದೆ. ಆಟವಾಡುವ ಮಕ್ಕಳ ಕೈಯಲ್ಲೂ ಈಗ ಮೊಬೈಲ್ ತನ್ನ ಸ್ಥಾನ ಪಡೆದುಕೊಂಡಿದೆ. ಮನೆಯಿಂದ ಹೊರಬಂದು ಇತರ ಮಕ್ಕಳೊಂದಿಗೆ ಬೆರೆತು ಮಕ್ಕಳೆಲ್ಲರೂ ಆಟವಾಡುತ್ತಿದ್ದ ದಿನಗಳು ಈಗ ನೆನಪು ಮಾತ್ರ.
ಆಧುನಿಕತೆಗೆ ಜೋತುಬಿದ್ದು, ಎಲ್ಲರೂ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರು ಕೂಡ ಮೊಬೈಲ್, ಲ್ಯಾಪ್ ಟಾಪ್, ವಿಡಿಯೋ ಗೇಮ್ಸ್, ಎಂದೆಲ್ಲಾ ಸಮಯ ಕಳಿತಾ ಇದ್ದಾರೆ.
ಯಾರಿಗೂ ಈಗ ಪುಸ್ತಕಗಳನ್ನು ಮುಟ್ಟುವಷ್ಟೂ ಸಮಯವಿಲ್ಲ. ಏನೇ ಮಾಹಿತಿ ಬೇಕಿದ್ದರೂ ಗೂಗಲ್ ಕಡೆ ಮುಖ ಮಾಡ್ತಾರೆ.
ಪುಸ್ತಕಗಳೆಲ್ಲವೂ ಮನೆಯ ಕಪಾಟಿನಲ್ಲೇ ಕುಳಿತುಕೊಂಡಿವೆ.
ಇದೆಲ್ಲದರ ನಡುವೆ ಪುಸ್ತಕಗಳನ್ನು ಪ್ರೀತಿಸುವ, ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡಿರುವವರು ಬೆರಳೆಣಿಕೆಯಷ್ಟು.
ಪುಸ್ತಕ ಪ್ರೇಮಿಗಳಿಗೆ ಇಲ್ಲೊಂದು ಖುಷಿಯ ಸಂಗತಿ ಇದೆ. ಅದೇನೆಂದರೆ, ಇನ್ನು ಮುಂದೆ
ಕಾಫಿ ಶಾಪ್, ಹೋಟೆಲ್, ರೆಸ್ಟೋರೆಂಟ್, ಔಷಧ ಮಳಿಗೆ, ಆಸ್ಪತ್ರೆ, ಮಾಲ್, ಕಾರ್ಪೊರೇಟ್ ಕಂಪನಿಗಳ ಕಚೇರಿಗಳು ಸೇರಿದಂತೆ ವಿವಿಧೆಡೆ ಪುಸ್ತಕಗಳು ದೊರೆಯಲಿವೆ. ಅದರಲ್ಲೂ ಕನ್ನಡ ಪುಸ್ತಕಗಳು ದೊರೆಯಲಿವೆ ಎನ್ನುವುದು ವಿಶೇಷ.
ವೀರಲೋಕ ಬುಕ್ಸ್ ಪ್ರೈ.ಲಿ. ಸಂಸ್ಥೆಯು ಈ ಹೊಚ್ಚ ಹೊಸ ಪ್ರಯೋಗಕ್ಕೆ ಮುಂದಾಗಿದೆ.
ಕಾರ್ಪೋರೇಟ್ ಶೈಲಿಯಲ್ಲಿ ಕನ್ನಡ ಪುಸ್ತಕಗಳಿಗೆ ಪ್ರಚಾರ ನೀಡಿ, ಓದುಗರಿದ್ದಲ್ಲಿಯೇ ಪುಸ್ತಕ ಒದಗಿಸಲು ಯೋಜನೆ ರೂಪಿಸಿದೆ. ಈ ಸಂಬಂಧ ನಿಗದಿತ ಮಳಿಗೆ ಹಾಗೂ ಕೇಂದ್ರಗಳ ಮುಖ್ಯಸ್ಥರ ಜತೆಗೆ ಪುಸ್ತಕ ಸಂಸ್ಥೆ ಒಪ್ಪಂದ ಮಾಡಿಕೊಳ್ಳುತ್ತಿದೆ. ಪುಸ್ತಕದ ರ್ಯಾಕ್ನಲ್ಲಿ ಪ್ರಕಟಗೊಂಡ ಹೊಸ ಕನ್ನಡದ ಪುಸ್ತಕಗಳು ಲಭ್ಯವಿರಲಿದ್ದು, ಆಸ್ತಕರು ಅಲ್ಲಿಯೇ ಹಣ ಪಾವತಿಸಿ ಪುಸ್ತಕ ಖರೀದಿಸಬಹುದಾಗಿದೆ.
ಈ ವ್ಯವಸ್ಥೆಗೆ ಜೂ.8 ರಂದು ಚಾಲನೆ ದೊರೆಯಲಿದೆ.
ಪುಸ್ತಕಗಳ ಮಾರಾಟಕ್ಕೆ ಸಂಸ್ಥೆಯು ಕಾಲ್ ಸೆಂಟರ್ ಅನ್ನು ಕೂಡ ಸಿದ್ಧಪಡಿಸಿರುವುದು ಗಮನಾರ್ಹ.
ಈಗಾಗಲೇ ಈ ಸಂಸ್ಥೆಯು 11 ಲಕ್ಷ ಮಂದಿಯ ಮೊಬೈಲ್ ದೂರವಾಣಿ ಸಂಖ್ಯೆಯನ್ನು ಸಂಗ್ರಹಿಸಿದೆ. ಈ ಸಂಖ್ಯೆಗೆ ಕರೆ ಮಾಡಿ, ಪ್ರಕಟಗೊಂಡ ಕನ್ನಡದ ಹೊಸ ಪುಸ್ತಕಗಳ ಬಗ್ಗೆ ತಿಳಿಸಲಾಗುತ್ತದೆ. ಪುಸ್ತಕ ಖರೀದಿಸಲು ಇಚ್ಛಿಸಿದಲ್ಲಿ, ಮನೆಗೆ ತಲುಪಿಸಲಾಗುತ್ತದೆ.
ಹಣ ಪಾವತಿ ಮೊಬೈಲ್ ಆಫ್ ಮೂಲಕ ಪುಸ್ತಕದ ದರ ಪಾವತಿಸಬಹುದಾಗಿದೆ.
ಕಟ್ಟ ಕಡೆಯ ಓದುಗನಿಗೂ ಅವನಿದ್ದ ಕಡೆಯೇ ಪುಸ್ತಕ ದೊರೆಯುವಂತೆ ಮಾಡಬೇಕು ಎನ್ನುವುದು ನಮ್ಮ ಉದ್ದೇಶ. ಓದುವ ಸಂಸ್ಕೃತಿಯನ್ನು ಹೆಚ್ಚಿಸುವ ಕೈಂಕರ್ಯಕ್ಕೆ ಮುಂದಾಗಿದ್ದೇವೆ. ವಿವಿಧೆಡೆ ಪುಸ್ತಕಗಳ ರ್ಯಾಕ್ ಇರಿಸಲಾಗುತ್ತದೆ. ಕಾಲ್ ಸೆಂಟರ್ ಸಹ ಪ್ರಾರಂಭಿಸಲಾಗುತ್ತಿದೆ. ಸಿನಿಮಾ ಪೋಸ್ಟರ್ಗಳ ಮಾದರಿಯಲ್ಲಿಯೇ ಪುಸ್ತಕಗಳ ಪೋಸ್ಟರ್ಗಳನ್ನೂ ಪ್ರದರ್ಶಿಸಲಾಗುತ್ತದೆ’ ಎಂದು ಸಂಸ್ಥೆಯ ಮುಖ್ಯಸ್ಥ ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ.
‘ಪ್ರತಿ ಲೇಖಕರಿಗೆ 500ರಿಂದ 10 ಸಾವಿರ ಓದುಗರನ್ನು ಒದಗಿಸಿಕೊಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಕನ್ನಡ ಪುಸ್ತಕೋದ್ಯಮ ಬೆಳೆಯಬೇಕು ಎನ್ನುವುದು ನಮ್ಮ ಉದ್ದೇಶ ಎಂದು ವಿವರಿಸಿದ್ದಾರೆ.
ಈ ವಿಶಿಷ್ಟ ಪ್ರಯೋಗದಿಂದಾರೂ ಓದುಗರ ಸಂಖ್ಯೆ ಹೆಚ್ಚಾಗಲಿ. ಕನ್ನಡ ಪುಸ್ತಕ ಪ್ರೇಮಿಗಳ ಬಳಗ ಹೆಮ್ಮರವಾಗಿ ಬೆಳೆಯಲಿ. ಪುಸ್ತಕ ಓದುವ ಹವ್ಯಾಸ ಎಲ್ಲರಲ್ಲೂ ಮೈಗೂಡಿಲಿ ಎಂದು ಕೆ ಲೈವ್ ಮಾದ್ಯಮ ಆಶಿಸುತ್ತದೆ.