ನಾಡಗೀತೆಯನ್ನು ಅವಮಾನ ಮಾಡಿದ, ರಾಷ್ಟ್ರಗೀತೆಯನ್ನು ಗೇಲಿ ಮಾಡಿದ ರೋಹಿತ್ ಚಕ್ರತೀರ್ಥನಂತಹ ಒಬ್ಬ ಕಿಡಿಗೇಡಿಯನ್ನು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷರನ್ನಾಗಿ ಬಿಜೆಪಿ ಸರ್ಕಾರ ನೇಮಕ ಮಾಡಿದೆ. ಸರ್ಕಾರಕ್ಕೆ ನಾಚಿಕೆ, ಮಾನ-ಮರ್ಯಾದೆ ಇದ್ದರೆ ಕೂಡಲೇ ಆತನನ್ನು ಕಿತ್ತು ಹಾಕಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಕುವೆಂಪು ಅವರ ಬಗ್ಗೆ ಮತ್ತು ನಾಡಗೀತೆ ಬಗ್ಗೆ ಲಘುವಾಗಿ ಮಾತನಾಡಲು ಹೋಗಬಾರದು. ಅವರು ರಾಷ್ಟ್ರಕವಿ. ಅಂತಹವರ ಬಗ್ಗೆ ಗೇಲಿ ಮಾಡಿದವರಿಗೆ ಪಠ್ಯಪುಸ್ತಕ ಪರಿಷ್ಕರಣೆ ಜವಾಬ್ದಾರಿ ನೀಡುವುದು ಮೂರ್ಖತನ. ಪಠ್ಯ ಪರಿಷ್ಕರಣೆ ಮಾಡಲು ವಿಷಯ ತಜ್ಞರ ಸಮಿತಿ ಮಾಡಬೇಕು. ದೇಶ ಹಾಗೂ ಸಮಾಜದ ಹಿತದೃಷ್ಟಿಯಿಂದ ಯಾರ ಪಠ್ಯ ಇರಬೇಕು. ಯಾರ ಪಠ್ಯ ಇರಬಾರದು ಎಂದು ಅವರು ನಿರ್ಧಾರ ಮಾಡಲಿ. ರೋಹಿತ್ ಚಕ್ರತೀರ್ಥ ಆರ್ಎಸ್ಎಸ್ನವರು, ಅವರ ಬದಲು ಯಾವುದೇ ಪಕ್ಷ ಹಾಗೂ ಸಂಘಟನೆಗೆ ಸೇರದ ವಿಷಯ ತಜ್ಞರನ್ನು ಅಧ್ಯಕ್ಷರನ್ನಾಗಿ ಮಾಡಲಿ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಭಗತ್ಸಿಂಗ್, ಮಹಾತ್ಮ ಗಾಂಧಿ, ಡಾ.ಬಿ.ಆರ್. ಅಂಬೇಡ್ಕರ್, ನಾರಾಯಣ ಗುರುಗಳ ವಿಚಾರಗಳನ್ನು ಓದುವುದರಿಂದ ದೇಶಭಕ್ತಿ, ಸಹಿಷ್ಣುತೆ, ಸೌಹಾರ್ದತೆಯ ಮೌಲ್ಯಗಳು ಉದ್ದೀಪನಗೊಳ್ಳುತ್ತವೆ. ಬುದ್ಧ, ಬಸವಣ್ಣ, ಕನಕದಾಸರು ಇವರೆಲ್ಲ ಸಮಾಜ ಸುಧಾರಕರು. ಇಂಥವರ ಬಗ್ಗೆ ಮಕ್ಕಳಿಗೆ ಹೇಳಿ. ವಿದ್ಯಾರ್ಥಿಗಳನ್ನು ಜಾತ್ಯತೀತ ಹಾಗೂ ವೈಜ್ಞಾನಿಕ ಮನೋಭಾವದಿಂದ ನೋಡಬೇಕು. ಮಕ್ಕಳ ಜ್ಞಾನ ವಿಕಾಸವಾಗಬೇಕೋ, ಸಂಕುಚಿತವಾಗಬೇಕೋ, ಎಂದು ಪ್ರಶ್ನಿಸಿದ್ದಾರೆ.