ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ರಾಜ್ಯಾದ್ಯಂತ ಏರ್ಪಡಿಸಲಾಗಿರುವ ‘ಅಮೃತ ಭಾರತಿಗೆ ಕನ್ನಡ ಆರತಿ’ ಕಾರ್ಯಕ್ರಮಕ್ಕೆ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಈಸೂರು ಹಾಗೂ ಹೊಸನಗರ ತಾಲ್ಲೂಕಿನ ನಗರ ಸ್ಥಳಗಳು ಆಯ್ಕೆಯಾಗಿದ್ದು ಇಲ್ಲಿ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಿರ್ವಹಿಸಲು ಸಂಬಂಧಿಸಿದ ಅಧಿಕಾರಿಗಳು ಸಲಕ ಸಿದ್ದತೆ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅಧಿಕಾರಿಗಳಿಗೆ ಸೂಚಿಸಿದರು.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಅಮೃತ ಭಾರತಿಗೆ ಕನ್ನಡ ಆರತಿ ಕಾರ್ಯಕ್ರಮ ಕುರಿತು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವೀರ ಸಾವರ್ಕರ್ ಜಯಂತಿ- ಮೇ 28 ರಂದು ‘ಅಮೃತ ಭಾರತಿಗೆ ಕನ್ನಡ ಆರತಿ ಕಾರ್ಯಕ್ರಮ’ವು ಏಕಕಾಲದಲ್ಲಿ ಈಸೂರು ಮತ್ತು ನಗರದಲ್ಲಿ ನಡೆಯಲಿದ್ದು, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯೊಂದಿಗೆ ಎರಡೂ ತಾಲ್ಲೂಕುಗಳ ತಹಶೀಲ್ದಾರರು, ಇಓ ಗಳು ಮತ್ತು ಗ್ರಾ.ಪಂ ಯವರು ಸಮನ್ವಯ ಸಾಧಿಸಿ ಕಾರ್ಯಕ್ರಮದ ಸಿದ್ದತೆ ಮಾಡಿಕೊಳ್ಳಬೇಕು ಎಂದರು.
ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯಿಂದ ಮೆರವಣಿಗೆಗೆ ಅಗತ್ಯವಾದ ಕಲಾತಂಡಗಳನ್ನು ಕಳುಹಿಸಲಾಗುವುದು. ಎರಡೂ ಸ್ಥಳಗಳಲ್ಲಿ ಮೆರವಣಿಗೆಗೆ ಸೂಕ್ತ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ನಿಗದಿಯಂತೆ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿಕೊಳ್ಳಬೇಕು. 2 ರಿಂದ 3 ಗಂಟೆಯ ಕಾರ್ಯಕ್ರಮ ನಿಗದಿಪಡಿಸಿಕೊಂಡು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.
ಅಮೃತ ಮಹೋತ್ಸವ ಕುರಿತಾದ ಉಪನ್ಯಾಸ ಕಾರ್ಯಕ್ರಮಕ್ಕೆ ಸೂಕ್ತ ಉಪನ್ಯಾಸಕರನ್ನು ಆಯ್ಕೆ ಮಾಡಬೇಕು. ಕಾರ್ಯಕ್ರಮದ ಸಮಯ, ಆಹ್ವಾನ ಪತ್ರಿಕೆ ಮುದ್ರಣ, ವಿತರಣೆ, ವೇದಿಕೆ ಸೇರಿದಂತೆ ಇತರೆ ಎಲ್ಲ ಪೂರಕ ಸಿದ್ದತೆಗಳ ಕುರಿತು ತಾಲ್ಲೂಕು ಆಡಳಿತದ ನೇತೃತ್ವದಲ್ಲಿ ಹಾಗೂ ಗ್ರಾ.ಪಂ ಮಟ್ಟದಲ್ಲಿ ಪ್ರತ್ಯೇಕ ಸಭೆಯನ್ನು ಕರೆದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದರು.
ಕಾರ್ಯಕ್ರಮ ನಡೆಯುವ ಸ್ಥಳದ ಸುತ್ತಮುತ್ತಲಿನ ಎಲ್ಲ ಸಂಘ-ಸಂಸ್ಥೆಗಳು, ಎನ್ಎಸ್ಎಸ್, ಎನ್ಸಿಸಿ ತಂಡಗಳು, ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳನ್ನು ಒಳಗೊಂಡು ಈ ಕಾರ್ಯಕ್ರಮ ನಡೆಸಬೇಕು. ಹಾಗೂ ಸ್ಥಳೀಯವಾಗಿ ಸ್ವಾತಂತ್ರ್ಯ ಹೋರಾಟಗಾರರು, ದೇಶ ರಕ್ಷಣೆಯಲ್ಲಿ ಪ್ರಾಣತೆತ್ತ ಕುಟುಂಬ ಇದ್ದಲ್ಲಿ ಅವರನ್ನು ಕರೆಯಿಸಿ ಸನ್ಮಾನ ಮಾಡಬೇಕೆಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಎಂ.ಎಲ್.ವೈಶಾಲಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್, ಪಾಲಿಕೆ ಆಯುಕ್ತ ಮಾಯಣ್ಣ ಗೌಡ, ಶಿಕಾರಿಪುರ ಮತ್ತು ಹೊಸನಗರ ತಾಲ್ಲೂಕಿನ ತಹಶೀಲ್ದಾರರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್, ಇತರೆ ಅಧಿಕಾರಿಗಳು ಇದ್ದರು.