ಅಯೋಧ್ಯೆ, ಕಾಶಿ, ಮಥುರಾ ಸೇರಿದಂತೆ ಭಾರತದ ಅನೇಕ ಕ್ಷೇತ್ರಗಳು ಹಿಂದುಗಳ ಪುಣ್ಯಕ್ಷೇತ್ರವಾಗಿದೆ. ಇಂತಹ ಪುಣ್ಯಕ್ಷೇತ್ರಗಳಲ್ಲಿ ಮುಸ್ಲಿಂ ಆಕ್ರಮಣಕಾರರು ದೇವಾಲಯಗಳನ್ನು ಧ್ವಂಸಗೊಳಿಸಿ ಮಸೀದಿಗಳನ್ನು ನಿರ್ಮಿಸಿದ್ದು, ಈಗ ಅಲ್ಲೆಲ್ಲಾ ಹಿಂದೂ ದೇವಾಲಯಗಳು ಇದ್ದವು ಎಂಬುದಕ್ಕೆ ಪುರಾವೆ ಸಿಕ್ಕುತ್ತಿದೆ. ಇದಕ್ಕೆ ಸ್ಪಷ್ಟ ಉದಾಹರಣೆಯೆಂದೆ ಕಾಶಿಯಲ್ಲಿ ದೊರೆತ ಹನ್ನೆರಡು ಅಡಿ ಎತ್ತರದ ಶಿವಲಿಂಗವೇ ಸಾಕ್ಷಿಯಾಗಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಅವರು ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಸುಮಾರು 350 ವರ್ಷಗಳ ಹಿಂದೆ ಔರಂಗಜೇಬ ಎಂಬಾತ ಕಾಶಿವಿಶ್ವನಾಥ ದೇವಸ್ಥಾನವನ್ನು ಧ್ವಂಸ ಮಾಡಿದ್ದನು. ಇದಾದ ನಂತರ 110 ವರ್ಷಗಳ ನಂತರ ಮಹಾರಾಣಿ ಅಹಲ್ಯಬಾಯಿ ಹೋಳ್ಕರ್ರವರು ದೇವಾಲಯವನ್ನು ಮರು ನಿರ್ಮಾಣ ಮಾಡಿದರು. ಔರಂಗಜೇಬನ ಸಂತತಿಯಲ್ಲಿ ನಾವು ಇರುವುದಿಲ್ಲ. ಅಹಲ್ಯಬಾಯಿಯವರ ಸಂತತಿ ಜೊತೆ ಇರುತ್ತೇವೆ ಎಂದು ಪಕ್ಷಬೇಧ ಮರೆತು ಹೇಳುತ್ತಿದ್ದಾರೆ. ಆದರೆ, ಕೆಲವು ಕಾಂಗ್ರೆಸ್ಸಿಗರು ಮಾತ್ರ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದು ರಾಷ್ಟ್ರದ್ರೋಹವಲ್ಲದೇ ಮತ್ತೇನೂ ಅಲ್ಲ ಎಂದರು.
ಇಸ್ಲಾಮಿಕ್ ಆಕ್ರಮಣಕಾರರು ಭಾರತದ 36 ಸಾವಿರ ಹಿಂದೂ ದೇವಾಲಯಗಳನ್ನು ಕೆಡವಿ ಮಸೀದಿ ನಿರ್ಮಿಸಿದ್ದು, ಈ ಮಸೀದಿಗಳನ್ನೆಲ್ಲಾ ತೆರವುಗೊಳಿಸಿ ಅಲ್ಲಿ ಹಿಂದೂ ದೇವಾಲಯಗಳನ್ನು ನಿರ್ಮಿಸುವುದೇ ಹಿಂದೂ ಸಮಾಜದ ಮುಖ್ಯ ಗುರಿಯಾಗಿದೆ ಎಂದರು.