ಉತ್ತಮ ಆಟದಿಂದ ಭಾರತದ ಪುರುಷರ ಬ್ಯಾಡ್ಮಿಂಟನ್ ತಂಡ ಪ್ರಪ್ರಥಮ ಬಾರಿಗೆ ಪ್ರತಿಷ್ಠಿತ ಥಾಮಸ್ ಕಪ್ ಚಾಂಪಿಯನ್ ಪಟ್ಟಕ್ಕೇರುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.
ಟೂರ್ನಿಯಲ್ಲಿ ಇದೇ ಮೊದಲ ಬಾರಿ ಫೈನಲ್ ತಲುಪಿದ್ದ ಭಾರತದ ತರುಣರು ಭಾನುವಾರ ನಡೆದ ನಿರ್ಣಾಯಕ ಹಣಾಹಣಿಯಲ್ಲಿ 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾವನ್ನು 3-0 ಅಂತರದಿಂದ ಬಗ್ಗುಬಡಿಯುವ ಮೂಲಕ ಹೊಸ ಚರಿತ್ರೆ ಬರೆದರು.
ವಿಶ್ವ ಚಾಂಪಿಯನ್ಷಿಪ್ ಪದಕ ವಿಜೇತರಾದ ಲಕ್ಷ್ಯ ಸೇನ್, ಕೆ. ಶ್ರೀಕಾಂತ್ ಸಿಂಗಲ್ಸ್ ವಿಭಾಗಗಳಲ್ಲಿ ಜಯ ದಾಖಲಿಸಿದರೆ, ಡಬಲ್ಸ್ನಲ್ಲಿ ಚಿರಾಗ್ ಶೆಟ್ಟಿ&ಸಾತ್ವಿಕ್ ಸಾಯಿರಾಜ್ ವಿಜಯ ತಂದುಕೊಟ್ಟರು.
ಪ್ರಾರಂಭಿಕ ಸಿಂಗಲ್ಸ್ ಪಂದ್ಯದಲ್ಲಿ ಲಕ್ಷ್ಯ ಸೇನ್ 8&21, 21&17, 21&16 ರಿಂದ ಅಂಥೋನಿ ಸಿನಿಸುಕ ಗಿನ್ಟಿಂಗ್ ಅವರನ್ನು 1 ಗಂಟೆ 5 ನಿಮಿಷಗಳಲ್ಲಿ ಮಣಿಸಿ ಭಾರತಕ್ಕೆ 1&0 ಮುನ್ನಡೆ ತಂದುಕೊಟ್ಟರು. ಡಬಲ್ಸ್ ಪಂದ್ಯದಲ್ಲಿ ಸಾತ್ವಿಕ್ಸಾಯಿರಾಜ್-ಚಿರಾಗ್ ಶೆಟ್ಟಿ 18&21, 23&21, 21&19 ರಿಂದ ಮೊಹಮದ್ ಅಸಾನ್&ಕೆವಿನ್ ಸಂಜಯ ಸುಕಮುಲ್ಜೊ ಜೋಡಿಯನ್ನು 73 ನಿಮಿಷಗಳಲ್ಲಿ ಸೋಲಿಸಿದರು.
ಭಾರತದ ಸ್ಟಾರ್ ಷಟ್ಲರ್ ಕೆ. ಶ್ರೀಕಾಂತ್ 21&15, 23&21 ರಿಂದ ಜೊನಾಥನ್ ಕ್ರಿಸ್ಟಿ ಅವರನ್ನು 48 ನಿಮಿಷಗಳಲ್ಲಿ ಮಣಿಸಿ ಭಾರತಕ್ಕೆ ಹಿರಿಮೆ ತಂದರು.
1979ರಲ್ಲಿ ಆರಂಭಗೊಂಡ ಥಾಮಸ್ ಕಪ್ ಟೂರ್ನಿಯಲ್ಲಿ ಭಾರತ ಈ ಹಿಂದೆ ಫೈನಲ್ ಹಂತಕ್ಕೂ ತಲುಪಿರಲಿಲ್ಲ. ಹೀಗಾಗಿ ಮೊದಲ ಯತ್ನದಲ್ಲೇ ಚಾಂಪಿಯನ್ ಪಟ್ಟಕ್ಕೇರಿದ್ದು ಅವಿಸ್ಮರಣೀಯ ಸಾಧನೆಯೆನಿಸಿತು. ಸೆಮಿಫೈನಲ್ ಪಂದ್ಯದಲ್ಲಿ ಭಾರತ ಬಲಾಢ್ಯ ಡೆನ್ಮಾರ್ಕ್ ಸವಾಲನ್ನು ಹೊಸಕಿಹಾಕಿತ್ತು. ಥಾಮಸ್ ಕಪ್ಗೆ ಸಮಾನಾಂತರವಾಗಿ ನಡೆಯುವ ಉಬೆರ್ ಕಪ್ನಲ್ಲಿ ಭಾರತದ ಮಹಿಳೆಯರು ಈ ಹಿಂದೆ 2 ಬಾರಿ ಕಂಚಿನ ಪದಕ ಜಯಿಸಿದ್ದಾರೆ.
ಭಾರತ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಅಭಿನಂದಿಸಿದ್ದಾರೆ. ‘ಭಾರತ ಬ್ಯಾಡ್ಮಿಂಟನ್ ತಂಡ ಹೊಸ ಇತಿಹಾಸ ಸೃಷ್ಟಿಸಿದೆ. ನಿಮ್ಮ ಸಾಧನೆ ಇಡೀ ದೇಶಕ್ಕೆ ಪ್ರೇರಣೆಯಾಗಿದ್ದು, ಮುಂದಿನ ಟೂರ್ನಿಗಳಿಗೂ ಶುಭವಾಗಲಿ. ತಂಡದ ಸಾಧನೆ ಭವಿಷ್ಯದ ಯುವ ಕ್ರೀಡಾಪಟುಗಳ ಪಾಲಿಗೆ ಸ್ಫೂರ್ತಿಯಾಗಲಿದೆ’ ಎಂದು ಪ್ರಧಾನಿ ಟ್ವೀಟಿಸಿದ್ದಾರೆ.
ತಂಡದ ಸದಸ್ಯರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಖುದ್ದು ಅಭಿನಂದಿಸಿದ ಮೋದಿ, ಆಟಗಾರರನ್ನು ತಮ್ಮ ನಿವಾಸಕ್ಕೂ ಆಹ್ವಾನಿಸಿದ್ದಾರೆ. ಶೂಟರ್ ಅಭಿನವ್ ಬಿಂದ್ರಾ, ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ ಅಧ್ಯಕ್ಷ ಹಿಮಂತಾ ಬಿಸ್ವಾ ಶರ್ಮ, ಕ್ರಿಕೆಟಿಗ ವಿರಾಟ್ ಕೊಹ್ಲಿ, ಷಟ್ಲರ್ ಸೈನಾ ನೆಹ್ವಾಲ್, ನಟಿ ತಾಪ್ಸಿ ಪನ್ನು, ಸಂಸದ ಗೌತಮ್ ಗಂಭೀರ್ ಅಭಿನಂದನೆ ಸಲ್ಲಿಸಿದ್ದಾರೆ.
ಥಾಮಸ್ ಕಪ್ ವಿಜೇತ ಭಾರತ ತಂಡಕ್ಕೆ ಕೇಂದ್ರ ಕ್ರೀಡಾ ಸಚಿವಾಲಯ 1 ಕೋಟಿ ರೂ. ಬಹುಮಾನ ಘೋಷಿಸಿದೆ. ‘ಇತಿಹಾಸ ಬರೆದ ಷಟ್ಲರ್ಗಳಿಗೆ ಅಭಿನಂದನೆಗಳು. ಮಲೇಷ್ಯಾ, ಡೆನ್ಮಾರ್ಕ್ ಹಾಗೂ ಇಂಡೋನೇಷ್ಯಾ ತಂಡಗಳ ಸವಾಲನ್ನು ಮೀರಿ ಭಾರತ ಈ ಸಾಧನೆ ಮಾಡಿದೆ. ಇಂಥ ತಂಡಕ್ಕೆ ಒಂದು ಕೋಟಿ ಬಹುಮಾನ ಘೋಷಿಸುತ್ತಿದ್ದೇನೆ’ ಎಂದು ಕೇಂದ್ರ ಕ್ರೀಡಾಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.