ಪಾಕಿಸ್ತಾನದ ಸಾಮಾನ್ಯ ಜನರು ಭಾರತದ ದ್ವೇಷಿಗಳಲ್ಲ. ಆದರೆ ಅಲ್ಲಿ ಸೇನೆಯ ಸಹಾಯದಿಂದ ಅಧಿಕಾರವನ್ನು ಪಡೆಯುವವರು ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸುತ್ತಾರೆ ಎಂದು ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ.
ನಾವು, ನೀವು ಸಹೋದರರನ್ನು ಹೊಂದಿರುವ ನೆರೆಯ ಪಾಕಿಸ್ತಾನದಲ್ಲಿ ಯುವಕನೊಬ್ಬ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ. ದೇಶಕ್ಕೆ ಒಂದು ದಿಕ್ಕು ತೋರಿಸುವ ಪ್ರಯತ್ನ ಮಾಡಿದ. ಆದರೆ ಆತನನ್ನು ಅಧಿಕಾರದಿಂದ ಹೊರಹಾಕಲಾಯಿತು. ಈಗ ಅಲ್ಲಿ ಬೇರೆಯದ್ದೇ ಪರಿಸ್ಥಿತಿ ಕಾಣಿಸುತ್ತಿದೆ ಎಂದು ಪವಾರ್ ಅವರು ಇಮ್ರಾನ್ ಖಾನ್ ಕುರಿತು ಹೇಳಿದರು.
ಲಾಹೋರ್, ಕರಾಚಿ… ಎಲ್ಲಿ ಹೋದರೂ, ನಮಗೆ ಆತ್ಮೀಯ ಸ್ವಾಗತ ದೊರೆಯುತ್ತಿತ್ತು. ನಾವು ನಮ್ಮ ಕ್ರಿಕೆಟ್ ತಂಡದೊಂದಿಗೆ ಪಂದ್ಯಕ್ಕಾಗಿ ಕರಾಚಿಗೆ ಹೋಗಿದ್ದೆವು. ಪಂದ್ಯದ ನಂತರ, ಆಟಗಾರರು ಸುತ್ತಲ ಸ್ಥಳಗಳನ್ನು ನೋಡುವ ಬಯಕೆಯನ್ನು ವ್ಯಕ್ತಪಡಿಸಿದರು. ನಾನು ಹೋಗಿದ್ದೆ. ರೆಸ್ಟೋರೆಂಟ್ಗೆ ಹೋಗಿ ಉಪಹಾರ ಸೇವಿಸಿದ ನಂತರ, ನಾವು ಬಿಲ್ ಕೊಡಲು ಹೋದಾಗ ರೆಸ್ಟೋರೆಂಟ್ ಮಾಲೀಕರು ಹಣ ತೆಗೆದುಕೊಳ್ಳಲಿಲ್ಲ. ನಾವು ಅವರ ಅತಿಥಿಗಳು ಎಂದು ಹೇಳಿದ್ದರು’ ಎಂದರು.
ಮಹಾರಾಷ್ಟ್ರದ ಕೊಂಡ್ವಾ ಎಂಬಲ್ಲಿ ನಡೆದ ಈದ್-ಮಿಲನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೇಂದ್ರದ ಮಾಜಿ ಸಚಿವ ಪವಾರ್, ಇಂದು ಜಗತ್ತಿನಲ್ಲಿ ವಿಭಿನ್ನ ಪರಿಸ್ಥಿತಿ ಇದೆ. ರಷ್ಯಾದಂಥ ಪ್ರಬಲ ರಾಷ್ಟ್ರವು ಉಕ್ರೇನ್ನಂಥ ಸಣ್ಣ ದೇಶದ ಮೇಲೆ ದಾಳಿ ಮಾಡುತ್ತಿದೆ. ಶ್ರೀಲಂಕಾದಲ್ಲಿ ಯುವಕರು ಬೀದಿಗಿಳಿದಿದ್ದಾರೆ, ಹೋರಾಡುತ್ತಿದ್ದಾರೆ. ಅಲ್ಲಿನ ನಾಯಕರು ಭೂಗತರಾಗಿದ್ದಾರೆ’ ಎಂದರು.
ಪಾಕ್ ಪ್ರಧಾನಿ ಖಾನ್ (69) ಅವರನ್ನು ಇತ್ತೀಚೆಗೆ ಅವಿಶ್ವಾಸ ನಿರ್ಣಯದ ಮೂಲಕ ಪದಚ್ಯುತಿಗೊಳಿಸಲಾಗಿತ್ತು.
ಪವಾರ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಪಾಕಿಸ್ತಾನದ ಸಾಮಾನ್ಯ ಜನರು ಭಾರತವನ್ನು ದ್ವೇಷಿಸುವುದಿಲ್ಲ. ಪಾಕಿಸ್ತಾನದ ಸೇನೆಯ ಸಹಾಯದಿಂದ ರಾಜಕೀಯ ಮಾಡಲು ಮತ್ತು ಅಧಿಕಾರವನ್ನು ಪಡೆಯಲು ಬಯಸುವವರು ಸಂಘರ್ಷದಲ್ಲಿ ತೊಡಗುತ್ತಾರೆ’ ಎಂದು ಅವರು ಹೇಳಿದರು.