ಶಿವಮೊಗ್ಗದಲ್ಲಿ ಪ್ರಥಮ ಬಾರಿಗೆ ಎಜಿ ಅಂಡ್ ಪಿ ಪ್ರಥಮ್ ಸಂಸ್ಥೆಯಿಂದ ಸಿ.ಎನ್.ಜಿ. ಮತ್ತು ಎಲ್.ಸಿ.ಎನ್.ಜಿ. ಘಟಕ ಸ್ಥಾಪನೆ ಮಾಡಲಾಗುವುದು ಎಂದು ಸಂಸ್ಥೆಯ ಪ್ರಾದೇಶಿಕ ಮುಖ್ಯಸ್ಥ ಗೌತಮ್ ಆನಂದ್ ಹೇಳಿದರು.
ಅವರು ಇಂದು ನಗರದ ರಾಯಲ್ ಆರ್ಕಿಡ್ ನಲ್ಲಿ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು.
ಶಿವಮೊಗ್ಗದಲ್ಲಿ ಹೊಸ ಮಂಡ್ಲಿಯಲ್ಲಿ ಎಲ್.ಸಿ.ಎನ್.ಜಿ. ಘಟಕ ನಿರ್ಮಿಸಲಾಗುತ್ತಿದೆ. ಇದರ ಮೂಲಕ ಜಿಲ್ಲೆಯಲ್ಲಿ ನೈಸರ್ಗಿಕ ಅನಿಲಕ್ಕಿರುವ ಬೇಡಿಕೆ ಪೂರೈಸಲಾಗುವುದು ಎಂದರು.ಸರ್ಕಾರದಿಂದ ಈಗಾಗಲೇ ಯೋಜನೆಗೆ ಅನುಮತಿ ಪಡೆಯಲಾಗಿದೆ. ಕೇವಲ ಸಾರಿಗೆ, ಗೃಹಬಳಕೆ ಮಾತ್ರವಲ್ಲದೇ ಕಾರ್ಕಾನೆಗಳು ಬಾಯ್ಲರ್ ಗಳಲ್ಲೂ ಕೂಡ ಈ ಗ್ಯಾಸ್ ವಿಸ್ತರಿಸಲಾಗುವುದು. ಇದು ಅಂತರಾಷ್ಟ್ರೀಯ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ ಎಂದರು.
ಎಜಿ ಅಂಡ್ ಪಿ ಅನಿಲ ವಿತರಣೆಯ ಪ್ರಮುಖ ಕಂಪನಿಯಾಗಿದ್ದು, ಕರ್ನಾಟಕದಲ್ಲಿ ಮುಂದಿನ 5 ವರ್ಷಗಳಲ್ಲಿ 5 ಸಾವಿರ ಕೋಟಿ ರೂ. ಹೂಡಿಕೆಯ ಭಾಗವಾಗಿ ಮೂಲ ಸೌಕರ್ಯ ನಿರ್ಮಿಸಲಾಗುವುದು. ಪ್ರತಿ ಜಿಲ್ಲೆಯಲ್ಲೂ ಗ್ರಾಹಕರಿಗೆ ಅನುಕೂಲವಾಗುವಂತೆ ನ್ಯಾಚುರಲ್ ಗ್ಯಾಸ್ ಸೌಲಭ್ಯ ನೀಡಲಾಗುವುದು ಎಂದರು.
ವಾಹನಗಳಿಗೆ ಮಾತ್ರವಲ್ಲದೇ ಗೃಹಬಳಕೆಯ ಗ್ರಾಹಕರ ಅಡುಗೆ ಮನೆಗಳಿಗೆ ನೈಸರ್ಗಿಕ ಅನಿಲ ಪೂರೈಸುವ ಗುರಿ ಹೊಂದಿದ್ದು, ಮೈಸೂರು ಸೇರಿದಂತೆ ಕರ್ನಾಟಕದ ಅನೇಕ ಕಡೆಗಳಲ್ಲಿ ಈಗಾಗಲೇ ತನ್ನ ಕಾರ್ಯ ಆರಂಭ ಮಾಡಿದೆ.ಗೃಹ ಗ್ರಾಹಕರ ನೋಂದಣಿ ಸಹ ಮಾಡಲಾಗುತ್ತಿದೆ ಎಂದು ತಿಳಿಸಿದರು.
ತ್ರಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ಸಿ.ಎನ್.ಜಿ. ಅಳವಡಿಸಿರುವ ವಾಹನಗಳೇ ಸಿಗುತ್ತವೆ. ಆಕಸ್ಮಾತ್ ಅಂತಹ ವಾಹನಗಳು ಇಲ್ಲದಿದ್ದರೆ, ಸಿ.ಎನ್.ಜಿ.ಗೆ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಈ ನೈಸರ್ಗಿಕ ಅನಿಲ ಪರಿಸರ ಪ್ರೇಮಿಯಾಗಿದೆ. ಆರ್ಥಿಕವಾಗಿ ಲಾಭವಾಗುತ್ತದೆ. ಪೆಟ್ರೋಲ್ ಮತ್ತು ಡೀಸೆಲ್ ಬಳಕೆಗಿಂತ ಶೇ. 40 ರಷ್ಟು ಉಳಿತಾಯವಾಗುತ್ತದೆ ಎಂದು ತಿಳಿಸಿದರು.