ರಾಜ್ಯದಲ್ಲಿ ಎದ್ದಿದ್ದಂತ ಆಜಾನ್ ವರ್ಸಸ್ ಸುಪ್ರಭಾತ ವಿವಾದಕ್ಕೆ ಸರ್ಕಾರ, ಕೊನೆಗೂ ಬ್ರೇಕ್ ಹಾಕಿದೆ. ರಾಜ್ಯದ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಸುವವರು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದಿಂದ 15 ದಿನಗಳ ಒಳಗೆ ಅನುಮತಿ ಪಡೆಯುವುದು ಕಡ್ಡಾಯಗೊಳಿಸಿ, ಆದೇಶಿಸಿದೆ.
ಈ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಸೋದಕ್ಕೆ ಸಕ್ಷಮ ಪ್ರಾಧಿಕಾರದಿಂದ 15 ದಿನದೊಳಗೆ ಅನುಮತಿ ಪಡೆಯಬೇಕು. ಇಲ್ಲವಾದಲ್ಲಿ ಅನುಮತಿರಹಿತ ಧ್ವನಿ ವರ್ಧಕಗಳನ್ನು ತೆಗೆದು ಹಾಕಲು ಅಧಿಕಾರಿಗಳಿಗೆ ಸೂಚಿಸಿದೆ.
ಇದಷ್ಟೇ ಅಲ್ಲದೇ ನಿಗದಿಪಡಿಸಿದ ಗಡುವಿನೊಳಗೆ ಅನುಮತಿ ಪಡೆಯದ ಧ್ವನಿ ವರ್ಧಕಗಳನ್ನು ಸ್ವಯಂ ಪ್ರೇರಿತವಾಗಿ ತೆರವುಗೊಳಿಸಬೇಕು. ಇಲ್ಲದಿದ್ದರೇ ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳು ತೆರವುಗೊಳಿಸಬೇಕು ಎಂದು ಹೇಳಿದೆ.
ಇನ್ನೂ ಶಬ್ದಕ್ಕೂ ಮಿತಿಯನ್ನು ಹೇರಿರುವಂತ ಸರ್ಕಾರ ಧ್ವನಿವರ್ಧಕಗಳನ್ನು ಯಾವ ವ್ಯಾಪ್ತಿಯಲ್ಲಿ ಎಷ್ಟು ಇರಬೇಕು ಎಂಬುದಕ್ಕೂ ಶಬ್ದಕ್ಕೆ ಮಿತಿಯನ್ನು ನಿಗದಿ ಪಡಿಸಿದೆ. ವಸತಿ ಪ್ರದೇಶದಲ್ಲಿ ಹಗಲು 55 ಡೆಸಿಬಲ್, ರಾತ್ರಿ 45 ಡೆಸಿಬಲ್ ಇರುವಂತೆ ಧ್ವನಿಯ ಪ್ರಮಾಣ ನಿಗದಿ ಪಡಿಸಿದೆ.
ವಾಣಿಜ್ಯ ಪ್ರದೇಶದಲ್ಲಿ ಹಗಲು 65 ಡೆಸಿಬಲ್, ರಾತ್ರಿ 55 ಡೆಸಿಬಲ್, ಕೈಗಾರಿಕಾ ಪ್ರದೇಶದಲ್ಲಿ ಹಗಲು 75 ಡೆಸಿಬಲ್, ರಾತ್ರಿ 70 ಡೆಸಿಬಲ್ ಮತ್ತು ನಿಶ್ಯಬ್ದ ಪ್ರದೇಶಗಳಲ್ಲಿ ಹಗಲು 50 ಡೆಸಿಬಲ್, ರಾತ್ರಿ 40 ಡೆಸಿಬಲ್ ಧ್ವನಿ ಮಿತಿಯನ್ನು ನಿಗದಿಗೊಳಿಸಿದೆ.