ನೋನಿ ಹಣ್ಣಿನಿಂದ ತಯಾರಾಗುವ ಉತ್ಪನ್ನಗಳು ಜನರ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತಿರುವ ಕಾರಣಕ್ಕೇ ವಾಲ್ಯೂ ಪ್ರಾಡಕ್ಟ್ಸ್ ಸಂಸ್ಥೆ ಉತ್ಪಾದಿಸುತ್ತಿರುವ ನೋನಿ ಉತ್ಪನ್ನಗಳಿಗೆ ರಾಜ್ಯ ಸೇರಿದಂತೆ ದೇಶದೆಲ್ಲೆಡೆ ಉತ್ತಮ ಬೇಡಿಕೆ ಸೃಷ್ಠಿಯಾಗಿದೆ ಎಂದು ಉದ್ಯಮಿ ಹಾಗೂ ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ ಅಭಿಪ್ರಾಯಪಟ್ಟರು.
ರಾಮಿನಕೊಪ್ಪ ಗ್ರಾಮದಲ್ಲಿರುವ ಸಂಸ್ಥೆ ಆವರಣದಲ್ಲಿ ಆಯೋಜಿಸಲಾಗಿದ್ದ ಸಂಸ್ಥೆಯ 13ನೇ ಅಮೃತೋತ್ಸವ, ಮೂರನೇ ಬೃಹತ್ ಕೈಗಾರಿಕಾ ಘಟಕದ ಉದ್ಘಾಟನೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದವರನ್ನು ಸನ್ಮಾನಿಸಿ ಬಳಿಕ ಅವರು ಮಾತನಾಡಿದರು.
ನೈಸರ್ಗಿಕವಾಗಿ ದೊರೆಯುವ ಹಾಗೂ ಆರೋಗ್ಯಕ್ಕೆ ಪೂರಕವಾದ ಹಣ್ಣುಗಳನ್ನು ಸಂಶೋಧನೆಗೆ ಒಳಪಡಿಸಿ ಅದರಿಂದ ಔಷಧಿ ಕಂಡುಹಿಡಿದು ಲಕ್ಷಾಂತರ ಜನರಿಗೆ ಉಪಯೋಗವಾಗುವ ಉತ್ಪನ್ನಗಳನ್ನು ಉತ್ಪಾದಿಸಿ ಅವುಗಳನ್ನು ಸಮಾಜಕ್ಕೆ ಸಮರ್ಪಿಸಿರುವ ಹೆಮ್ಮೆಯ ಸಂಸ್ಥೆಯಾಗಿ ವ್ಯಾಲ್ಯೂ ಪ್ರಾಡಕ್ಟ್ಸ್ ಸಂಸ್ಥೆ ಬೆಳೆದಿರುವುದು ನಿಜಕ್ಕೂ ಹೆಮ್ಮೆ ಎನಿಸುತ್ತದೆ ಎಂದರು.
ಸಂಸ್ಥೆಯ ಬೆಳವಣಿಗೆ ನಿಜಕ್ಕೂ ಆಶ್ಚರ್ಯ ತರಿಸುತ್ತದೆ. 13ನೇ ವರ್ಷಕ್ಕೆ ಕಾಲಿಟ್ಟಿರುವ ಸಂಸ್ಥೆ ಇಂದು ನೋನಿಯಿಂದ ಉತ್ಪಾದಿಸಲ್ಪಡುವ ಹಲವಾರು ಉತ್ಪನ್ನಗಳನ್ನು ಗ್ರಾಹಕರಿಗೆ ನೀಡಿದೆ. ಉತ್ಪನ್ನಗಳಿಗೆ ಬೇಡಿಕೆ ಎಷ್ಟಿದೆ ಎಂದರೆ ಗ್ರಾಹಕರ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಉತ್ಪನ್ನಗಳ ಬಗ್ಗೆ ಗ್ರಾಹಕರಿಗೆ ನಂಬಿಕೆ ಇರುವುದರಿಂದಲೇ ವ್ಯಾಲ್ಯೂ ಪ್ರೋಡಕ್ಸ್ ಸಂಸ್ಥೆಯ ನೋನಿ ಉತ್ಪನ್ನಗಳಿಗೆ ಅಷ್ಟೊಂದು ಬೇಡಿಕೆ ಕಂಡು ಬಂದಿದೆ ಎಂದರು.
ಔಷಧಿ ಗುಣ ಹೊಂದಿರುವ ನೋನಿಯನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿ ಅದನ್ನು ಇಡೀ ರಾಷ್ಟ್ರಕ್ಕೆ, ಸಮಾಜಕ್ಕೆ ಅರ್ಪಿಸಿದ್ದಾರೆ. ಯಾವುದೇ ಒಂದು ವ್ಯಾಪಾರ ಅಥವಾ ಉದ್ಯಮ ಯಶಸ್ಸು ಪಡೆಯಲು ಒಳ್ಳೆಯ ತಂಡ ಕಟ್ಟಬೇಕು. ಒಳ್ಳೆಯ ತಂಡ ಇದ್ದರೆ ಸಾಲದು ಉತ್ಪನ್ನಗಳು ಮಾರುಕಟ್ಟೆಗೆ ತಲುಪಿಸಬೇಕು. ಜೊತೆಗೆ ಉತ್ಪನ್ನಗಳು ಗ್ರಾಹಕರನ್ನು ಸೆಳೆಯಬೇಕು. ಈ ನಿಟ್ಟಿನಲ್ಲಿ ವ್ಯಾಲ್ಯೂ ಪ್ರಾಡಕ್ಟ್ಸ್ ಸಂಸ್ಥೆ ಕೇವಲ 13 ವರ್ಷದಲ್ಲಿ ದೊಡ್ಡ ಪ್ರಯತ್ನಗಳನ್ನು ವ್ಯವಸ್ಥಿತವಾಗಿ ಕೈಗೊಂಡು, ಅಚ್ಚುಕಟ್ಟಾಗಿ ಗ್ರಾಹಕರನ್ನು ತಲುಪಿರುವುದು ಹೆಮ್ಮೆಯನ್ನುಂಟುಮಾಡುತ್ತದೆ. ಇದಕ್ಕೆ ಮುಖ್ಯವಾಗಿ ಇಲ್ಲಿನ ಸಿಬ್ಬಂದಿಗಳ ಪಾತ್ರವೂ ಮಹತ್ವದ್ದಾಗಿದೆ ಎಂದು ಹೇಳಿದರು.
ಯಾವುದೇ ಒಂದು ಉತ್ಪನ್ನ ಮನುಷ್ಯನ ದೇಹಕ್ಕೆ ಸೇರುವುದಾದರೆ ಅತ್ಯಂತ ಜಾಗರೂಕತೆಯಿಂದ ಉತ್ಪಾದನೆ ಮಾಡಬೇಕಾಗುತ್ತದೆ. ಸುರಕ್ಷತೆಗೆ ಹೆಚ್ಚಿನ ಗಮನ ನೀಡಬೇಕು. ಅಡ್ಡ ಪರಿಣಾಮ ಬೀರದಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ವ್ಯಾಲ್ಯೂ ಪ್ರೊಡಕ್ಟ್ ಸಂಸ್ಥೆ ಶ್ರಮವಹಿಸಿ ಅತ್ಯಂತ ವ್ಯವಸ್ಥಿತವಾಗಿ ಉತ್ಪನ್ನಗಳನ್ನು ಉತ್ಪಾದನೆ ಮಾಡುತ್ತಿದೆ. ಈ ಕಾರಣಕ್ಕೆ ಸಂಸ್ಥೆಯ ಉತ್ಪನ್ನಗಳಿಗೆ ಇಷ್ಟೊಂದು ಬೇಡಿಕೆ ಬಂದಿದೆ ಎಂದರು.
ಮನುಷ್ಯನ ಆರೋಗ್ಯಕ್ಕೆ ಅತ್ಯವಶ್ಯಕವಾಗಿ ಬೇಕಾದಂತಹ ಸಸ್ಯ ಸಂಕುಲಗಳು ಪ್ರಕೃತಿಯಲ್ಲಿಯೇ ಇದೆ. ಅದರಲ್ಲೂ ಪಶ್ಚಿಮಘಟ್ಟ ಪ್ರದೇಶದಲ್ಲಿ ಸಾಕಷ್ಟು ಸಸ್ಯ ಸಂಕುಲಗಳಿವೆ, ಗಿಡಮೂಲಿಕೆಗಳಿವೆ. ಈ ಕಾರಣಕ್ಕಾಗಿಯೇ ಪಶ್ಚಿಮಘಟ್ಟ ಪ್ರದೇಶವನ್ನು ಸಂರಕ್ಷಿತ ವಲಯ ಎಂದು ಘೋಷಣೆ ಮಾಡಲಾಗಿದೆ. ಪ್ರಪಂಚದ ಯಾವುದೇ ಭಾಗದಲ್ಲಿ ಸಿಗದಂತಹ ಸಸ್ಯ ಪ್ರಭೇದಗಳು ನಮ್ಮ ಪಶ್ಚಿಮಘಟ್ಟ ಪ್ರದೇಶದಲ್ಲಿ ಇದೆ ಎನ್ನುವುದು ಹೆಮ್ಮೆಯ ಸಂಗತಿ ಎಂದರು.
ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾದ ನಂತರ ಭಾರತೀಯ ಔಷಧ ಪದ್ಧತಿಗೆ ವಿಶೇಷ ಸ್ಥಾನಮಾನ ದೊರಕಿದೆ. ಹಿಂದೆ ನಮ್ಮ ಔಷಧ ಪದ್ಧತಿ ಬಗ್ಗೆ ನಾವೇ ದೂಷಣೆ ಮಾಡುತ್ತಿದ್ದೆವು. ಆದರಿಂದು ಆಯುರ್ವೇದ ಔಷಧ ಪದ್ಧತಿಗೆ ಸಾಕಷ್ಟು ಬೇಡಿಕೆ ಕಂಡುಬರುತ್ತಿದೆ. ಆಯುರ್ವೇದ ಚಿಕಿತ್ಸೆ ಅತ್ಯಂತ ಸರಳ ಹಾಗೂ ಕಡಿಮೆ ಖರ್ಚಿನಲ್ಲಿ ದೊರಕುತ್ತದೆ. ಹೀಗಾಗಿ ಆಯುರ್ವೇದ ಚಿಕಿತ್ಸೆಗೆ ಇನ್ನೂ ಹೆಚ್ಚಿನ ಪ್ರಾಶಸ್ತ್ಯ, ಒತ್ತು ದೊರಕಬೇಕಿದೆ ಎಂದು ಹೇಳಿದರು.
ವ್ಯಾಲ್ಯೂ ಪ್ರಾಡಕ್ಟ್ಸ್ ಸಂಸ್ಥೆಯಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಉತ್ಪನ್ನಗಳು ಹೊರಬರಬೇಕು. ಗ್ರಾಹಕರುಗಳಿಗೆ ಕೈಗೆಟಕುವ ದರದಲ್ಲಿ ದೊರೆಯುವಂತಾಗಬೇಕು. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಔಷಧಿಗಳು ರಾರಾಜಿಸುವಂತಾಗಬೇಕೆಂದು ಆಶಿಸಿದರು.
ವ್ಯಾಲ್ಯೂ ಪ್ರಾಡಕ್ಟ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಏ.ಕೆ. ಶ್ರೀನಿವಾಸಮೂರ್ತಿ ಪ್ರಸ್ತಾವಿಕವಾಗಿ ಮಾತನಾಡಿ, ಪ್ರಾಮಾಣಿಕ ಕಾರ್ಮಿಕ ವರ್ಗ, ಸಂಶೋಧನಾ ತಂಡ, ವೈದ್ಯರ ತಂಡ, ಸಿಬ್ಬಂದಿಗಳು ಇವರೆಲ್ಲರ ಪ್ರಯತ್ನದ ಫಲವಾಗಿ ವ್ಯಾಲ್ಯೂ ಪ್ರೋಡಕ್ ನೋನಿ ಉತ್ಪನ್ನಗಳು ಇಂದು ಇಷ್ಟೊಂದು ಪ್ರಮಾಣದಲ್ಲಿ ಗ್ರಾಹಕರನ್ನು ತಲುಪಲು ಸಾಧ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಂಸ್ಥೆಯ ಯೋಚನೆ-ಯೋಜನೆ- ಕನಸು ಇನ್ನೂ ಬಹಳಷ್ಟಿದೆ. ಯಾವುದೇ ಒಂದು ಕೆಲಸವನ್ನು ಕೈಗೊಳ್ಳುವಾಗ ನಿರ್ದಿಷ್ಟ ಗುರಿ ಇರಬೇಕು. ಆಗ ಯಶಸ್ಸು, ಅಭಿವೃದ್ಧಿ ಕಾಣುವುದಕ್ಕೆ ಸಾಧ್ಯ. ಈ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಕಳೆದ 13 ವರ್ಷಗಳಿಂದ ಅಮೃತ್ ನೋನಿ ಉತ್ಪನ್ನಗಳನ್ನು ಗ್ರಾಹಕರಿಗೆ ಪೂರೈಸುತ್ತಾ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಕಾಣುವುದಕ್ಕೆ ದೈವಿಕ ಶಕ್ತಿ ಜತೆಗೆ ಗ್ರಾಹಕರು, ರೈತರು ಹಾಗೂ ಹಿತೈಷಿಗಳ ಆಶೀರ್ವಾದ ಕಾರಣವಾಗಿದೆ ಎಂದರು.
ನೋನಿ ಹಣ್ಣಿನಲ್ಲಿ ಆರೋಗ್ಯಕ್ಕೆ ಪೂರಕವಾದ ಸಾಕಷ್ಟು ಅಂಶಗಳಿವೆ. ಈ ಬಗ್ಗೆ ಇನ್ನಷ್ಟು ಅಧ್ಯಯನ, ಸಂಶೋಧನೆ ನಡೆಯಬೇಕಿದೆ. ನೋನಿ ಸಂಶೋಧನೆ ಕೇಂದ್ರ ಪ್ರಾರಂಭ ಆಗಬೇಕು. ರೈತರಿಗೆ ಇನ್ನಷ್ಟು ಉತ್ತೇಜನ ದೊರಕಬೇಕು, ಉದ್ಯೋಗ ಸೃಷ್ಟಿಯಾಗಬೇಕು. ಸರ್ಕಾರ ಈ ನಿಟ್ಟಿನಲ್ಲಿ ಸಹಕಾರ ನೀಡಬೇಕಿದೆ ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಅಮೃತೋತ್ಸವ -2022 ಹಾಗೂ ನೋನಿಯತ್ತ ಜಗದ ಚಿತ್ತ ಮೂರನೇ ಆವೃತ್ತಿ ಪುಸ್ತಕ ಬಿಡುಗಡೆಗೊಂಡಿತು.
ಕಾರ್ಯಕ್ರಮದಲ್ಲಿ ವ್ಯಾಲ್ಯೂ ಪ್ರೊಡಕ್ಟ್ಸ್ ಸಂಸ್ಥೆ ನಿರ್ದೇಶಕಿ ಅಂಬುಜಾಕ್ಷಿ, ಓಂ ಶ್ರೀ ಎಂಟರ್ಪ್ರೈಸಸ್ ವ್ಯವಸ್ಥಾಪಕ ನಿರ್ದೇಶಕಿ ಮಂಗಳಾಂಬಿಕೆ, ನಿರ್ದೇಶಕ ನಾರಾಯಣ್, ಸಣ್ಣ ಕೈಗಾರಿಕಾ ನಿಗಮದ ಉಪಾಧ್ಯಕ್ಷ ಎಸ್. ದತ್ತಾತ್ರಿ, ಕೃಷಿ ವಿಶ್ವವಿದ್ಯಾನಿಲಯದ ನಿಕಟಪೂರ್ವ ಉಪಕುಲಪತಿ ಡಾ. ಎಂ.ಕೆ. ನಾಯಕ್, ಟಿವಿ ವಾಹಿನಿ ನಿರೂಪಕ ಮುರಳಿ, ಹರಿಕೃಷ್ಣ, ಶಶಿಕಾಂತ್, ಗಂಗಾಧರ ವರ್ಮಾ, ಶ್ರೀಕಾಂತ್ ಉಪಸ್ಥಿತರಿದ್ದರು. ಶಶಿಕಾಂತ್ ನಾಡಿಗ್ ಸ್ವಾಗತಿಸಿದರು, ಪೃಥ್ವಿ ಗೌಡ ಪ್ರಾರ್ಥಿಸಿದರು, ಸಮನ್ವಯ ಕಾಶಿ ನಿರೂಪಿಸಿದರು.
ಕ್ಯಾನ್ಸರ್ ರೋಗಕ್ಕೆ ರಾಮಬಾಣವಾಗಿರುವ ಹಾಗೂ ನೋನಿ ಹಣ್ಣಿನಿಂದ ತಯಾರಿಸಲ್ಪಟ್ಟ ಸಂಸ್ಥೆಯ ನೂತನ ಉತ್ಪನ್ನ ಆಯೂರ್ ಕೇರ್ ಉತ್ಪನ್ನ ಇದೇ ಸಂದರ್ಭದಲ್ಲಿ ಬಿಡುಗಡೆಗೊಂಡಿತು. ಉದ್ಯಮಿ ಹಾಗೂ ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ ಮತ್ತಿತರರು ನೂತನ ಉತ್ಪನ್ನವನ್ನು ಬಿಡುಗಡೆಗೊಳಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಹಲವು ಗಣ್ಯರನ್ನು
ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಗಮಕ ಕಲಾವಿದ ಹಾಗೂ ಪದ್ಮಶ್ರೀ ಪುರಸ್ಕೃತ ಕೇಶವಮೂರ್ತಿ ಅವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು. ಸಕ್ಕರಾಯಪಟ್ಟಣದ ರೈತ ಎಸ್. ಸಚ್ಚಿದಾನಂದ ಅವರಿಗೆ ರೈತ ಪ್ರಶಸ್ತಿ, ಅಂಕಣಕಾರ್ತಿ ರಂಜನಿ ಎಸ್. ದತ್ತಾತ್ರಿ ಅವರಿಗೆ ಸಾಮಾಜಿಕ ಪ್ರಶಸ್ತಿ, ಗಂಗಾಧರ ವರ್ಮಾ ಅವರಿಗೆ ವೈದ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೊತೆಗೆ ಸಂಜೀವಿನಿ ಯೋಗ ಕೇಂದ್ರದ ಲತಾ ಶೇಖರ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದವರನ್ನು ಸನ್ಮಾನಿಸಲಾಯಿತು.