ಅದೊಂದು ವಿಶಿಷ್ಟವಾದ ಕ್ಷಣ. ಸದಾ ಬಿಡುವಿಲ್ಲದೆ ಆಡಳಿತದ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸುವ ಮಹಿಳಾ ನೌಕರರು ಕಡತಗಳ ಜಂಜಾಟದಿಂದ ಕೆಲ ಸಮಯ ದೂರವುಳಿದು ಕ್ರೀಡೆಯಲ್ಲಿ ಉತ್ಸಾಹದಿಂದ ಭಾಗವಹಿಸಿ ಮನ ತಣಿಸಿಕೊಂಡ ಕ್ಷಣ. ಆಡಳಿತದ ಚುಕ್ಕಾಣಿ ಹಿಡಿದ ಮಹಿಳಾ ಅಧಿಕಾರಿ ಕೂಡ ಇದಕ್ಕೆ ಕೈಜೋಡಿಸಿದ ಕ್ಷಣ. ಇಂಥಹಾ ವಿಶಿಷ್ಟ ಸಂದರ್ಭಕ್ಕೆ ಸಾಕ್ಷಿಯಾಗಿದೆ. ಶನಿವಾರ ಕುವೆಂಪು ವಿಶ್ವವಿದ್ಯಾಲಯದ ಒಳಾಂಗಣ ಕ್ರೀಡಾಂಗಣದಲ್ಲಿ ಮಹಿಳಾ ನೌಕರರ ವೇದಿಕೆ ಆಯೋಜಿಸಿದ್ದ ಥ್ರೋಬಾಲ್ ಪಂದ್ಯಾವಳಿ.
ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಕುಲಸಚಿವೆ ಜಿ. ಅನುರಾಧ, ಯಾವುದೇ ಇಲಾಖೆ ಅಥವಾ ಸಂಸ್ಥೆಯ ನೌಕರರು ತಮ್ಮ ಕಚೇರಿಯ ದೈನಂದಿನ ಕರ್ತವ್ಯಗಳನ್ನು ದಕ್ಷತೆಯಿಂದ ನಿರ್ವಹಿಸುವ ನಿಟ್ಟಿನಲ್ಲಿ ಆಗಿಂದಾಗ್ಗೆ ಇಂಥಹಾ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಉತ್ಸಾಹವನ್ನು ಇಮ್ಮಡಿಗೊಳಿಸಿಕೊಳ್ಳುವುದು ಅಗತ್ಯ. ಅದರಲ್ಲಿಯೂ ಮಹಿಳಾ ನೌಕರರು ಕಚೇರಿಯಲ್ಲಷ್ಟೇ ಅಲ್ಲ ಮನೆಗಳಲ್ಲಿಯೂ ಕೂಡ ಕುಟುಂಬ ನಿರ್ವಹಣೆಯ ಜವಾಬ್ದಾರಿ ಹೊತ್ತು ತಮ್ಮ ವೈಯುಕ್ತಿಕ ಖುಷಿಯನ್ನು ಬದಿಗಿಟ್ಟಿರುತ್ತಾರೆ. ಹಾಗಾಗಿ ಮಹಿಳಾ ನೌಕರರು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗುವುದರಿಂದ ಅವರ ದಕ್ಷತೆ ಹೆಚ್ಚಾಗುತ್ತದೆ ಎಂದರು.
ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್. ಕೆ. ನವೀನ್ ಕುಮಾರ್ ಮಾತನಾಡಿ, ಕೋವಿಡ್ ನಂತರದ ಸಂದರ್ಭದಲ್ಲಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳ ಪಠ್ಯೇತರ ಚಟುವಟಿಕೆಗಳಿಗೆ ಹಿನ್ನಡೆಯಾಗಿತ್ತು. ಮಹಿಳಾ ನೌಕರರು ಇಂಥಹಾ ಕ್ರೀಡಾ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಮತ್ತೆ ಕ್ಯಾಂಪಸ್ನಲ್ಲಿ ಲವಲವಿಕೆ ತಂದಿದ್ದಾರೆ ಎಂದು ಹೇಳಿದರು.
ಕುಲಸಚಿವೆ ಜಿ. ಅನುರಾಧ ಉದ್ಘಾಟನಾ ಪಂದ್ಯದಲ್ಲಿ ಭಾಗಿಯಾಗಿ ಕೆಲ ಸಮಯ ಥ್ರೋಬಾಲ್ ಆಟವಾಡಿದ್ದು ಗಮನಸೆಳೆಯಿತು. ಮಹಿಳಾ ನೌಕರರ ನಾಲ್ಕು ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಇಂದು ಸಂಜೆ ಫೈನಲ್ ಪಂದ್ಯಾವಳಿ ನಡೆಯಲಿದೆ. ದೈಹಿಕ ಶಿಕ್ಷಣ ವಿಭಾಗದ ಸಹ ಪ್ರಾಧ್ಯಾಪಕ ಡಾ. ಗಜಾನನ ಪ್ರಭು, ಅಧ್ಯಾಪಕೇತರ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ್, ಸುಶೀಲಾ, ರೇಖಾ, ಮಹೇಶ್, ಸಿದ್ದರಾಮ, ಮರಿಯಂಬಿ ಮತ್ತಿತರರು ಉಪಸ್ಥಿತರಿದ್ದರು.